ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್
ಗುಂಡ್ಲುಪೇಟೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಜೊತೆ ಒನ್ ಇಂಡಿಯಾ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಮೈಸೂರು, ಏಪ್ರಿಲ್ 5 : ಅನುಕಂಪದ ಅಲೆಯಲ್ಲ, ನನ್ನ ಪತಿಯ ಜನಸೇವೆ ನನ್ನನ್ನು ಗೆಲ್ಲಿಸುತ್ತದೆ ಎಂದು ಗುಂಡ್ಲುಪೇಟೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವಪ್ರಸಾದ್ ಹೇಳಿದ್ದಾರೆ.
ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ಗುಂಡ್ಲುಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ 'ಒನ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಸಹಕಾರ ಸಚಿವರಾಗಿದ್ದ ನನ್ನ ಪತಿ ಮಹದೇವಪ್ರಸಾದ್ ಅವರ ಮೇಲೆ ಜನರು ಇಟ್ಟಿರುವ ವಿಶ್ವಾಸವೇ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಮಾಡಿದೆ ಎಂದರು.[ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ]
ಅಕಾಲಿಕವಾಗಿ ನಿಧನ ಹೊಂದಿದ ನನ್ನ ಪತಿ, ಅವರ ತತ್ವ ಸಿದ್ಧಾಂತಗಳಲ್ಲೇ ನಾವು ಬೆಳೆದಿದ್ದೇವೆ.. ಅದನ್ನು ಮುಂದುವರೆಸಿಕೊಂಡು ಹೋಗಲು ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ಮನದೊಳಗೆ ಉಮ್ಮಳಿಸುವ ನೋವಿದ್ದರೂ ಅದನ್ನು ಮತದಾರನ ಮಾತು ಕೇಳಿ ಮರೆಯುತ್ತೇನೆ ಎಂದು ಅಳುತ್ತಲೇ ಉತ್ತರಿಸುತ್ತಾರೆ ಗೀತಾ.[ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ]
ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಅಧಿಕಾರದ ಆಸೆ ನನಗಿಲ್ಲ
ನಾನೆಂದಿಗೂ ಅಧಿಕಾರದ ಆಸೆಗಾಗಿ ಚುನಾವಣೆಗೆ ಸ್ಪರ್ಧಿಸಿದವಳಲ್ಲ. ನನ್ನ ಪತಿಯ ಬೆಂಬಲಿಗರು, ಅಭಿಮಾನಿಗಳ ಶ್ರೀ ರಕ್ಷೆ ಹಾಗೂ ಪಕ್ಷದ ಮುಖಂಡರ ಸೂಚನೆಯಿಂದಷ್ಟೇ ಸ್ಪರ್ಧಿಸಿದ್ದೇನೆ. ಅಷ್ಟೇ ಅಲ್ಲದೆ ಹೋದ ಕಡೆಯಲೆಲ್ಲಾ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.. ಜಾತ್ಯಾತೀತವಾಗಿ ಜನ ನನ್ನನ್ನು ಗೌರವಿಸುತ್ತಿರುವುದು ನನಗಲ್ಲ, ನನ್ನ ಪತಿಗೆ ಎಂದು ಹಲವು ಬಾರಿ ಹೆಮ್ಮೆಯಾಗುತ್ತದೆ. ಅದರಂತೆಯೇ ಇಡೀ ಪಕ್ಷದ ಹಿರಿಯ ಮುಖಂಡರು ನನ್ನ ಬೆಂಬಲಕ್ಕೆ ನಿಂತಿರುವುದು ನನಗೆ ಸಂಪೂರ್ಣ ಖುಷಿ ತಂದಿದೆ ಎಂದು ಮುಗುಳ್ನಕ್ಕರು.[ಸಿದ್ದರಾಮಯ್ಯ ಒಬ್ಬ ತಲಾಕ್ ರಾಜಕಾರಣಿ: ಈಶ್ವರಪ್ಪ ವ್ಯಂಗ್ಯ]
ಚುನಾವಣೆ ಅಂದರೆ ಭಯ!
ನಾನೆಂದೂ ರಾಜಕೀಯವಾಗಿ ಗುರುತಿಸಿಕೊಂಡವಳಲ್ಲ. ಪತಿ ಮಹದೇಪ್ರಸಾದ್ ನನ್ನ ಮದುವೆಯಾದ ಬಳಿಕ 7 ಚುನಾವಣೆಗಳನ್ನು ಎದುರಿಸಿದ್ದಾರೆ. ಐದರಲ್ಲಿ ಜಯ ಸಾಧಿಸಿದ್ದಾರೆ. ಹಾಗಾಗಿ ಅವರ ರಾಜಕೀಯ ತಂತ್ರಗಾರಿಕೆಯನ್ನು ನಾನು ಹತ್ತಿರದಿಂದ ಬಲ್ಲೆ. ನಾನೆಂದಿಗೂ ಅವರೊಂದಿಗೆ ಪ್ರಚಾರಕ್ಕೆ ತೆರಳಿದವಳಲ್ಲ. ಸದ್ಯ 133 ಹಳ್ಳಿಗಳನ್ನು ಸುತ್ತುತ್ತಿದ್ದೇನೆ. ಅವರ ಕಾರ್ಯತಂತ್ರಗಳನ್ನೇ ಇಲ್ಲಿ ರೂಪಿಸುತ್ತಿದ್ದೇನೆ. ಹಾಗಾಗಿ ನನ್ನ ಗೆಲುವು ಶತಸಿದ್ಧ.[ಕೃಷ್ಣರ 'ದೂರಾಲೋಚನೆ' ಹೇಳಿಕೆಗೆ ಸಿದ್ದು ತಿರುಗೇಟು]
ಪತಿಯ ಸೇವಾಕಾರ್ಯವೇ ಶ್ರೀರಕ್ಷೆ
ತಾಲೂಕಿನಲ್ಲಾದ ಅಭಿವೃದ್ಧಿ ಕಾರ್ಯಗಳೇ ನನ್ನ ಶ್ರೀರಕ್ಷೆ. ಅವರು ಶಾಸಕರಾಗಿ, ಸಚಿವರಾಗಿ ಇಡೀ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದರು. ಪಟ್ಟಣಕ್ಕೆ ಕಪಿಲಾ ನದಿಯಿಂದ ಕುಡಿಯುವ ನೀರನ್ನು ತಂದು ಇಲ್ಲಿನ ಜನರ ಜೀವಜಲದ ಸಮಸ್ಯೆ ಈಡೇರಿಸಿದ್ದಾರೆ. ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಹಾಗಾಗಿ ಇದೇ ನನ್ನ ಗೆಲುವಿನ ಶ್ರೀ ರಕ್ಷೆ.[84ರ ಪ್ರಾಯದಲ್ಲಿ ಮದುವೆ ಆಗೋಕೆ ಸಾಧ್ಯವೇ: ಕೃಷ್ಣಗೆ ಇಬ್ರಾಹಿಂ ಲೇವಡಿ]
ಕುಟುಂಬದ ಸಹಕಾರ
ನಾನು ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಕೇವಲ ನನ್ನದಷ್ಟೇ ಆಗಿರಲಿಲ್ಲ, ನನ್ನ ಕುಟುಂಬದ ಆಸೆಯೂ ಆಗಿತ್ತು. ಪತಿಯವರು ಸ್ಪರ್ಧಿಸಿದಾಗ ಅವರ ಪರವಾಗಿ ಸಹೋದರ ನಂಜುಂಡ ಪ್ರಸಾದ್ ಮಾತ್ರ ತೆರಳುತ್ತಿದ್ದರು. ಆದರೆ ಸದ್ಯ ನನ್ನ ಬೆಂಬಲಕ್ಕೆ ನಂಜುಂಡ, ಅವರ ಪತ್ನಿ ರೂಪಾ, ನನ್ನ ಮಗ ಗಣೇಶ್ ಪ್ರಸಾದ್, ಸೊಸೆ ವಿದ್ಯಾ ಹಾಗೂ ಅವಳ ಸೋದರಿ ಪ್ರೇಮಾ ಸೇರಿದಂತೆ ಹತ್ತು ಹಲವರು ಬಿರು ಬಿಸಿಲೆನ್ನದೇ ಪ್ರಚಾರ ಮಾಡಿ, ನನ್ನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.[ನಂಜನಗೂಡು: ಜನಸೇವೆ ಮಾಡುವ ಅಭ್ಯರ್ಥಿಗೆ ಮತನೀಡಿ-ಸಿದ್ದರಾಮಯ್ಯ]
ಡಿಕೆಶಿ ನನಗೆ ತಂದೆಯಿದ್ದಂತೆ
"ನಾನೆಂದೂ ನನ್ನ ಪತಿಯ ಸಾವನ್ನು ಬಯಸಿದವಳಲ್ಲ. ಡಿಕೆ ಶಿವಕುಮಾರ್ ಬಂದಕೂಡಲೇ ನನಗೆ ಅಳು ಉಕ್ಕಿ ಬರುತ್ತದೆಂಬ ಕೆಲವರ ಮಾತನ್ನು ಕೇಳಿದರೆ ನೋವಾಗುತ್ತದೆ. ಅವರನ್ನು ನಾನು ತಂದೆಯ ಸ್ಥಾನದಲ್ಲಿ ನೋಡುತ್ತೇನೆ. ಅವರು ನನ್ನನ್ನು ಭೇಟಿಯಾಗಿ ಮಾತನಾಡಿದ್ದು ನಿಜ. ನಾನು ಬಣ್ಣದ ಮಾತುಗಳನ್ನಾಡಲೂ ನಾಟಕ ಕಂಪೆನಿಯಿಟ್ಟಿಲ್ಲ ತಿಳಿದುಕೊಳ್ಳಿ" ಎಂದು ಗೀತಾ ನೋವಿನಿಂದಲೇ ಹೇಳಿದರು.
ಗೆದ್ದರೆ ಜನರ ಆಶೋತ್ತರ ಈಡೇರಿಸುವೆ..
"ಏಪ್ರಿಲ್ 13 ರಂದು ಹೊರಬೀಳಲಿರುವ ಫಲಿತಅಂಶದಲ್ಲಿ, ಗೆಲುವು ನಮ್ಮದೆಂಬ ಅರಿವಿದೆ. ನಾನು ಗೆದ್ದು ಬಂದಲ್ಲಿ ಪತಿಯವರು ಬಿಟ್ಟು ಹೋದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎನ್ನುತ್ತ ಪ್ರಚಾರಕ್ಕೆ ಹೊರಟ ಅವರ ಸರಳತೆ ಅನುಕರಣೀಯವೆನ್ನಿಸಿತ್ತು.