ಬಾಲ್ಯದ ದಸರೆಯ ಸವಿನೆನಪು ಬಿಚ್ಚಿಟ್ಟ ಸಿದ್ದರಾಮಯ್ಯ
ಮೈಸೂರು ಸೆಪ್ಟೆಂಬರ್ 21: "ಆಗ ನನಗೆ 7-8 ವರ್ಷ ವಯಸ್ಸಿದ್ದಿರಬಹುದು. ದಸರಾ ಮೆರವಣಿಗೆ ನೋಡಲು ಅಪ್ಪನ ಜೊತೆ ಮೈಸೂರಿಗೆ ಹೋಗಿದ್ದೆ. ಅದು ನಾನು ಮೊಟ್ಟ ಮೊದಲ ಬಾರಿಗೆ ನೋಡಿದ ಮೆರವಣಿಗೆ. ದಸರಾ ಉತ್ಸವ ಬನ್ನಿಮಂಟಪದ ಬಳಿ ಇರುವ ಬಂಬೂ ಬಜಾರ್ ನಲ್ಲಿ ಮೆರವಣಿಗೆ ನೋಡಲು ಮೆಟ್ಟಿಲುಗಳ ಮೇಲೆ ಅಪ್ಪನೊಂದಿಗೆ ಕಾದು ನಿಂತಿದ್ದೆ.
ಅಂಬಾರಿಯ ಮೇಲೆ ಮಹಾರಾಜರು ಬರುವ ದೃಶ್ಯ ನೋಡಲು ಕಾತರನಾಗಿದ್ದೆ. ಅದರ ಜನ ಜಂಗುಳಿಯಲ್ಲಿ ಮೆರವಣಿಗೆ ಕಾಣುತ್ತಲೇ ಇರಲಿಲ್ಲ. ಜೊತೆಗಿದ್ದ ಅಪ್ಪ, 'ಮಹಾರಾಜರು ಬಂದರು ಮಹಾರಾಜರು ಬಂದರು ಕೈ ಮುಗಿ' ಎಂದರು. 'ನನಗೇನೂ ಕಾಣುತ್ತಿಲ್ಲ' ಎಂದೆ. ಆಗ ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಮೆರವಣಿಗೆ ತೋರಿಸಿದರು. ಆ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ. ನನ್ನ ಮೊದಲ ದಸರಾ ಮೆರವಣಿಗೆಯ ಅನುಭವವನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ."
LIVE: ನಾಡಹಬ್ಬ ಉದ್ಘಾಟನೆ ನೆರವೇರಿಸಿದ ಕವಿ ನಿಸಾರ್ ಅಹ್ಮದ್
ಮೊದಲ ಬಾರಿಗೆ ದಸರಾ ವೀಕ್ಷಿಸಿದ ಅನುಭವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕಾಶವಾಣಿಯೊಂದಿಗೆ ಹಂಚಿಕೊಂಡಿದ್ದು ಹೀಗೆ. ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ಆಕಾಶವಾಣಿಗೆ ವಿಶೇಷ ಸಂದರ್ಶನ ನೀಡಿದ ಮುಖ್ಯಮಂತ್ರಿಯವರು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ, ಅಷ್ಟೇ ಅಲ್ಲ ಎನ್ಸಿಸಿ ಕೆಡೆಟ್ ಆಗಿಯೂ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದೇನೆ. ಶಾಸಕನಾಗಿ, ಮಂತ್ರಿಯಾಗಿ, ಇದೀಗ ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ಚಿತ್ತಾರದ ರಂಗೋಲಿಯೊಂದಿಗೆ ಮಹಿಳಾ ದಸರೆಗೆ ಉಮಾಶ್ರೀ ಚಾಲನೆ
ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರ್ಕಾರ ಕೈಗೊಂಡಿರುವ ಸಿದ್ಧತೆ, ಆಯೋಜಿಸಿರುವ ಕಾರ್ಯಕ್ರಮಗಳು ರಾಜ್ಯ ಹೊರರಾಜ್ಯ ದೇಶ, ವಿದೇಶದ ಪ್ರವಾಸಿಗರಿಗೆ ಒದಗಿಸಿರುವ ಸೌಲಭ್ಯಗಳು, ಎಲ್ಲವನ್ನೂ ಸಿದ್ದರಾಮಯ್ಯ ಅವರು ಸಂದರ್ಶನದ ವೇಳೆ ವಿವರಿಸಿದರು. (ಕೃಪೆ: ಕರ್ನಾಟಕ ವಾರ್ತೆ) ಆ ಸಂದರ್ಶನದ ಆಯ್ದ ಭಾಗ ಹೀಗಿದೆ
ಹೆಮ್ಮೆಯ ನಾಡಹಬ್ಬ
"ದಸರಾ ಮಹೋತ್ಸವ, ಕರ್ನಾಟಕದ ಹೆಮ್ಮೆಯ ನಾಡಹಬ್ಬ. ಮೈಸೂರಿನ ದಸರಾ ಮಹೋತ್ಸವ ಹಲವು ವಿಶೇಷತೆಗಳನ್ನು ಮೈಗೂಡಿಸಿಕೊಂಡಿದೆ. ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ವೈಭವದ ಆಡಳಿತ ನಡೆಸಿದ ವಿಜಯನಗರ ಅರಸರು ಆಚರಿಸುತ್ತಿದ್ದ ಹಬ್ಬ ಇದು. ವಿಜಯನಗರ ಸಾಮ್ರಾಜ್ಯದ ನಂತರ, ಮೈಸೂರು ಅರಸರು ಈ ಹಬ್ಬವನ್ನು ಮುಂದುವರಿಸಿಕೊಂಡು ಬಂದರು. ಅದೇ ಸಾಂಪ್ರದಾಯ ಪರಂಪರೆಯನ್ನು ಉಳಿಸಿಕೊಂಡು ಬಹಳ ಅರ್ಥಪೂರ್ಣವಾಗಿ ಈಗ ಆಚರಿಸಲಾಗುತ್ತಿದೆ. ಹಿಂದಿನ ವೈಭವ ಹಾಗೂ ಸಾಂಪ್ರದಾಯಿಕತೆಗೆ ಯಾವುದೇ ಕುಂದು ಬರದಂತೆ ರಾಜ್ಯ ಸರ್ಕಾರ ದಸರಾ ಮಹೋತ್ಸವವನ್ನು ಆಚರಿಸುತ್ತಿದೆ."
ಉನ್ನತಾಧಿಕಾರಿಗಳ ಸಮಿತಿ
ಪ್ರತಿವರ್ಷದಂತೆ ದಸರಾ ಮಹೋತ್ಸವ ಆಚರಿಸಲು ಉನ್ನತಾಧಿಕಾರ ಸಮಿತಿ ಇರುತ್ತದೆ. ಇಲ್ಲಿ ಕೈಗೊಂಡ ನಿರ್ಣಯಗಳಂತೆ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದ 17 ಉಪಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಸಮಿತಿಗಳು ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಕಾರಿ ಸಮಿತಿಯ ಮಾರ್ಗದರ್ಶನದಲ್ಲಿ ಹಾಗೂ ಕಾರ್ಯಕಾರಿ ಸಮಿತಿಯ ನಿರ್ದೇಶನದಂತೆ ಕೆಲಸ ಮಾಡುತ್ತವೆ.
50 ಲಕ್ಷ ಮೀಸಲು
ದಸರಾ ಮಹೋತ್ಸವವನ್ನು ಆಚರಿಸಲು ರಾಜ್ಯ ಸರ್ಕಾರ 2017ನೇ ಸಾಲಿನಲ್ಲಿ ರೂ. 15 ಕೋಟಿ ಅನುದಾನ ಮೀಸಲಿಟ್ಟಿದ್ದು, ವಿವಿಧ ಕಾರ್ಯಕ್ರಮಗಳಿಗೆ ರೂ. 13.5 ಕೋಟಿ ರೂ. ಹಣ ನಿಗದಿಗೊಳಿಸಲಾಗಿದೆ. ಚಾಮರಾಜನಗರದಲ್ಲಿ ದಸರಾ ಆಯೋಜನೆಗೆ 1 ಕೋಟಿ ರೂ. ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ ರೂ. 50 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.
ವಿಶ್ವವಿಖ್ಯಾತ ಹಬ್ಬ
ದಸರಾ ನಾಡಹಬ್ಬ ಆಗಿರುವುದರಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಮೈಸೂರು ದಸರಾ ನೋಡಲು ಜಗತ್ತಿನ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಬಹು ಸಂಸ್ಕೃತಿಯ ಜನರು ಪಾಲ್ಗೊಳ್ಳುವ 10 ದಿನಗಳ ವೈಭವದ ಹಬ್ಬಕ್ಕೆ ಮೈಸೂರನ್ನು ಅಲಂಕರಿಸುವುದು. ಜನಾಕರ್ಷಣೆಯ ಕಾರ್ಯಕ್ರಮಗಳನ್ನು ರೂಪಿಸುವುದು ಮುಖ್ಯ ಧ್ಯೇಯವಾಗಿದೆ.