ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಪೇಜಾವರ ಶ್ರೀ
ಮೈಸೂರು, ಜೂನ್ 5 : ನಾನು ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ. ನನಗೆ ನನ್ನದೇ ಆದ ವೈಯಕ್ತಿಕ ಸ್ವಾತಂತ್ರ್ಯವಿದೆ, ಮಾತನಾಡುವ ಹಕ್ಕಿದೆ ಎಂದು ಪೇಜಾವರ ಶ್ರೀಗಳು ಬಿಜೆಪಿಗರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಪ್ರಧಾನಿ ಮೋದಿಯ ಕಾರ್ಯವೈಖರಿ ಸಮಂಜಸವಾಗಿಲ್ಲ ಎಂದು ಹೇಳಿಕೆ ನೀಡಿದ್ದ ವಿಶ್ವೇಶ್ವರ ತೀರ್ಥರ ವಿರುದ್ಧ ಇಂದು ಕೆಲ ಬಿಜೆಪಿ ಮುಖಂಡರು ತಿರುಗಿ ಬಿದ್ದಿದ್ದರು. ಈ ಕಾರಣಕ್ಕಾಗಿ ಶ್ರೀಗಳು ಸುದ್ದಿಗೋಷ್ಠಿ ನಡೆಸಿ ಎಲ್ಲರ ಪ್ರಶ್ನೆಗೆ ಉತ್ತರಿಸಿದರು.
ಮೋದಿ ಸರಕಾರದ ವಿರುದ್ದ ಪೇಜಾವರ ಶ್ರೀಗಳ ಹೇಳಿಕೆ: ಇಕ್ಕಟ್ಟಿನಲ್ಲಿ ಬಿಜೆಪಿ
ನನಗೆ ಮೋದಿ ಮೇಲೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಎಂದು ಹೇಳಿಲ್ಲ. ನಾನು ಮೋದಿ ಕಾಯಕಗಳು ಸಂಪೂರ್ಣ ಸಮಾಧಾನ ತಂದಿಲ್ಲ ಅಂತಷ್ಟೆ ಹೇಳಿದ್ದೆ ಎಂದರು.
ಕಪ್ಪು ಹಣ, ಗಂಗಾ ನದಿ ಶುದ್ಧೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ ಎರಡು ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ ಅಂತ ಹೇಳಿದ್ದೆ. ಈ ಮಾತಿನ ಹಿಂದೆ ಕೇಂದ್ರ ಸರ್ಕಾರಕ್ಕೆ ಉತ್ತೇಜನ ಮಾಡುವ ಉದ್ದೇಶವಿದೆ.
ಆದರೆ ಕೆಲ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನನ್ನ ಹೇಳಿಕೆಯ ನಂತರ ಯಾವ ಬಿಜೆಪಿ ನಾಯಕರು ನನ್ನನ್ನ ಸಂಪರ್ಕಿಸಿಲ್ಲ. ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರ್ಕಾರಕ್ಕೆ ಇನ್ನೂ ಒಂದು ವರ್ಷ ಕಾಲಾವಕಾಶ ಇದೆ. ಯಾರು ಸಹ ಸ್ಪಷ್ಟೀಕರಣ ನೀಡಿ ಎಂದೂ ಸಹ ಹೇಳಿಲ್ಲ. ಸ್ವ ಇಚ್ಛೆಯಿಂದ ನಾನು ಸ್ಪಷ್ಟೀಕರಣ ನೀಡಲು ಬಂದೆ. ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಬೇರೆ ರೀತಿಯ ಹೆಡ್ಲೈನ್ ಹೋಗಿದೆ.
ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತೆ ಅನ್ನೋ ಕಾರಣಕ್ಕೆ ನಾನು ಸ್ಪಷ್ಟೀಕರಣ ನೀಡಿದ್ದೇನೆ. ಈ ಚರ್ಚೆಯನ್ನ ಇಲ್ಲಿಗೆ ಬಿಡಿ ಎಂದು ಮನವಿ ಮಾಡಿದರು.
ಇನ್ನು ಮೈತ್ರಿ ಸರ್ಕಾರದ ಕುರಿತಾಗಿ ಹೇಳಿಕೆ ನೀಡಿದ ಶ್ರೀಗಳು, ಜೆಡಿಎಸ್- ಕಾಂಗ್ರೆಸ್ ಸರ್ಕಾರವೂ ಐದು ವರ್ಷ ಪೂರೈಸಲಿ ಎಂದು ಹಾರೈಸಿದರು. ಯಾವುದೇ ಸರ್ಕಾರ ಇರಲಿ, ಅಧಿಕಾರದ ಪೂರ್ಣ ಅವಧಿ ಆಡಳಿತ ನಡೆಸಬೇಕು.
ಪದೇ ಪದೇ ಚುನಾವಣೆ ನಡೆಯಬಾರದು. ಅದರಿಂದ ದುಂದು ವೆಚ್ಚ, ಗಲಾಟೆ, ಗದ್ದಲ ಆಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಇದಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡಿವೆ. ಇಂತಹ ರೆಸಾರ್ಟ್ ರಾಜಕಾರಣ ನಿಲ್ಲಬೇಕು. ಹೊರ ದೇಶಗಳಲ್ಲಿ ಸರ್ವ ಪಕ್ಷ ಸರ್ಕಾರಗಳ ರಚನೆಯಾಗಿವೆ.
ಅದೇ ರೀತಿ ನಮ್ಮಲ್ಲಿಯೂ ಆಗಬೇಕು. ಚುನಾವಣಾ ಸಂದರ್ಭದಲ್ಲಿ ಅಪ್ಪರಾಣೆ ಅಂತೆಲ್ಲ ಟೀಕೆ ಮಾಡಿಕೊಂಡವರು ಈಗ ಒಟ್ಟಿಗಿದ್ದಾರೆ. ಇವುಗಳೊಂದಿಗೆ ಬಿಜೆಪಿಯೂ ಸೇರಿಕೊಂಡು ಸರ್ವ ಪಕ್ಷ ಸರ್ಕಾರ ರಚಿಸಬಹುದು.
ಹಲವಾರು ದೇಶಗಳಲ್ಲಿ ಇಂತಹ ಸರ್ವ ಪಕ್ಷ ಸರ್ಕಾರಗಳು ಅಸ್ತಿತ್ವದಲ್ಲಿವೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.