ಜೆಡಿಎಸ್ ನಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ: ಜಿ.ಟಿ ದೇವೇಗೌಡ ಅಳಲು
ಜಿಲ್ಲೆಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದ್ದು ಪಕ್ಷದ ಯಾವುದೇ ಸಭೆ, ಸಮಾರಂಭಗಳ ಬಗ್ಗೆ ನನಗೆ ಮಾಹಿತಿ ನೀಡಲಾಗುತ್ತಿಲ್ಲ ಎಂದು ಆರೋಪಿಸಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡ, ಈ ಬಗ್ಗೆ ಪಕ್ಷದ ಧುರೀಣ ದೇವೇಗೌಡರೊಂದಿಗೆ ಮಾತನಾಡಿದರು.
ಮೈಸೂರು, ಮೇ 25: ಮೈಸೂರಿನ ಜೆಡಿಎಸ್ ಶಾಸಕರ ನಡುವಿನ ಭಿನ್ನಮತ ಸ್ಪೋಟವಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆ.ಆರ್ ನಗರ ಶಾಸಕ ಸಾ.ರಾ. ಮಹೇಶ್ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ನನ್ನನ್ನ ಕಡೆಗಣಿಸಲಾಗಿದೆ. ಇದರಿಂದ ನನಗೆ ಬೇಸರವಾಗಿದ್ದು, ಪಕ್ಷದ ಸಭೆ ಕುರಿತು ನನಗೆ ಮಾಹಿತಿ ನೀಡುತ್ತಿಲ್ಲ. ಜತೆಗೆ ಮೇಯರ್ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯವನ್ನ ಕೇಳಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ, ಎಚ್.ಡಿ ಕುಮಾರ ಸ್ವಾಮಿ ಹಾಗೂ ಶಾಸಕ ಸಾರಾ ಮಹೇಶ್ ವಿರುದ್ದ ಕಿಡಿ ಕಾರಿದರು.[ಪ್ರಜ್ವಲ್ ರೇವಣ್ಣ ಸ್ಪರ್ಧೆ: ಅಡ್ಡಗೋಡೆ ಮೇಲೆ ದೀಪಯಿಟ್ಟ ದೇವೇಗೌಡ್ರು]
ಈ ಸಂಬಂಧ ದೇವೇಗೌಡರಿಗೆ ದೂರು ನೀಡುತ್ತೇನೆ. ಈ ಬಗ್ಗೆ ದೇವೇಗೌಡರ ಜತೆ ಮಾತನಾಡಿದ್ದೇನೆ. ಜೂನ್ 16 ರಂದು ದೇವೇಗೌಡರಿಗೆ ಕುಮಾರಸ್ವಾಮಿ ಮತ್ತು ಸಾರಾ ಮಹೇಶ್ ವಿರುದ್ಧ ದೂರು ನೀಡುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
ಮುಂದಿನ ವಿಧಾನಸಭೆಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಜಿ.ಟಿ ದೇವೇಗೌಡರ ಪುತ್ರ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಸಂಬಂಧ ಇತ್ತೀಚಿಗಷ್ಟೆ ಹೆಚ್ ಡಿ ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿದ್ದ ವೇಳೆ ಗೊಂದಲ ಉಂಟಾಗಿ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ವರದಿಯಾಗಿತ್ತು.[ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]
ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಹೆಚ್.ಡಿ ಕುಮಾರಸ್ವಾಮಿ, ನಾನು ಯಾರಿಗೂ ಕಪಾಳ ಮೋಕ್ಷ ಮಾಡಿಲ್ಲ. ಹುಣಸೂರು ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸ್ವಲ್ಪ ಗೊಂದಲ ಆಗಿತ್ತು. ಕಾರ್ಯಕರ್ತನಿಗೆ ಈ ಬಗ್ಗೆ ವಿವಿರವಾಗಿ ತಿಳಿಸಿದ್ದೇನೆ ಎಂದಿದ್ದರು.