ಮೈಸೂರಿನಲ್ಲಿ 70 ವರ್ಷದಿಂದ ಜನತಾ ಪಕ್ಷ ಗೆದ್ದಿಲ್ಲ, ನನಗೇ ಕೈ ಟಿಕೆಟ್
ಮೈಸೂರು, ಜುಲೈ 12 : ನಾನು ಮೈಸೂರು ಲೋಕಸಭಾ ಕ್ಷೇತ್ರ ಬಿಟ್ಟು ಹಾಸನ ಮತ್ತಿತರೆಡೆ ಹೋಗುವುದಿಲ್ಲ. ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಚ್. ವಿಜಯಶಂಕರ್ ತಿಳಿಸಿದರು.
ಚುನಾವಣಾ ಕಾಲದಲ್ಲಿ ವಲಸೆ ಬಂದವರು ಇವರು
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ನಾನು ಸೈಡ್ ಲೈನ್ ಆದ ಭಾವನೆ ಬಂದಿಲ್ಲ. ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಯಾವುದೇ ಗೊಂದಲಗಳಿಲ್ಲ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಜಕೀಯ ಹಿತಾಸಕ್ತಿಗಳನ್ನು ಕಾಯುವ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಯಾವುದೇ ವ್ಯತ್ಯಾಸಗಳು ಆಗುವುದಿಲ್ಲ ಎಂದು ನನಗೆ ಸಂಪೂರ್ಣವಾಗಿ ನಂಬಿಕೆಯಿದೆ. ಇನ್ನು ಮೈತ್ರಿ ಪಾಲನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕ್ಷೇತ್ರ ಬಿಟ್ಟು ಕೊಡುವ ಮಾತೇ ಇಲ್ಲ. ಮೈಸೂರು ಕ್ಷೇತ್ರದ 70 ವರ್ಷಗಳ ಇತಿಹಾಸದಲ್ಲಿ ಜನತಾ ಪಾರ್ಟಿ, ಜನತಾ ಪಕ್ಷ, ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆದ್ದ ಉದಾಹರಣೆಯಿಲ್ಲ. ಹಾಗಾಗಿ ನನಗೆ ಟಿಕೆಟ್ ಖಚಿತ ಎಂದರು.
20 ದಿನಗಳ ಹಿಂದೆ ಮಾಧ್ಯಮದವರು ಸಿದ್ದರಾಮಯ್ಯ ಅವರನ್ನು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ಯಾರೀ ನಿಮಗೆ ಹೇಳಿದ್ದು, ಯಾಕೆ ಸುಳ್ಳು ಸುದ್ದಿ ಹಬ್ಬಿಸುತ್ತೀರಿ ಎಂದು ಕಿಡಿ ಕಾರಿದ್ದರು. ಅಂದರೆ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಆಗಿದ್ದು, ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಇಲ್ಲ ಎಂದು ವಿಜಯಶಂಕರ್ ಹೇಳಿದರು.