ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್
ಮೈಸೂರು, ಅಕ್ಟೋಬರ್ 6 : ಮೈಸೂರಿನ ವಿಶ್ವವಿಖ್ಯಾತ ದಸರಾ ಮಹೋತ್ಸವವು ಈ ಬಾರಿ ವ್ಯಾಪಾರಿಗಳ ಪಾಲಿಗೆ ಭಾರೀ ಲಾಭ ತಂದಿದೆ. ಐದು ದಿನಗಳವರೆಗೆ ಅಂದರೆ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೂ ನಗರದ ಎಲ್ಲ ಹೋಟೆಲ್ ಗಳ ಕೋಣೆಗಳು ಭರ್ತಿಯಾಗಿದ್ದರಿಂದ ಅವುಗಳ ಮಾಲೀಕರು ಸಂತಸ ಪಟ್ಟಿದ್ದಾರೆ.
In Pics:ಮೈಸೂರು ದಸರಾದ ಅಂತಿಮ ದಿನದ ಚಿತ್ರಗಳನ್ನು ನೋಡಿ..!
ಜಿಲ್ಲೆಯಲ್ಲಿ ರೂಮ್ ಗಳನ್ನು ಬಾಡಿಗೆಗೆ ನೀಡುವ 280 ಹೋಟೆಲ್ ಗಳು ಇದ್ದು, ಒಟ್ಟಾರೆ 7 ಸಾವಿರ ಕೋಣೆಗಳಿವೆ. ಇದರಲ್ಲಿ ಎಲ್ಲವೂ ಭರ್ತಿಯಾಗಿದ್ದವು. ಅಂದರೆ ಒಂದು ದಿನಕ್ಕೆ ಸರಾಸರಿ 20, 000 ಪ್ರವಾಸಿಗರು ಮೈಸೂರಿನಲ್ಲಿ ಉಳಿದಿದ್ದಾರೆ.
ಅಕ್ಟೋಬರ್ 8 ರವರೆಗೂ ಝಗಮಗಿಸಲಿದೆ ಮೈಸೂರಿನ ರಸ್ತೆಗಳು
ಸಾಮಾನ್ಯ ಕೋಣೆಗೆ ವರ್ಷದ ಉಳಿದ ಸಮಯದಲ್ಲಿ 800 ರುಪಾಯಿ ದರವಿದ್ದರೆ, ದಸರಾ ಅವಧಿಯಲ್ಲಿ ಸಾಮಾನ್ಯ ಹೋಟೆಲ್ ಗಳಲ್ಲಿನ ದರ 1,000 ಇರುತ್ತದೆ. ಇನ್ನು ತಾರಾ ಹೋಟೆಲಿಗೆ ಐದು ಸಾವಿರ ರುಪಾಯಿ ದರ ಇರುತ್ತದೆ. ಒಟ್ಟಾರೆಯಾಗಿ 1.80 ಕೋಟಿ ರುಪಾಯಿ ವಹಿವಾಟು ನಡೆದಿದೆ ಎಂಬ ಮಾಹಿತಿಯನ್ನು ಮೈಸೂರು ನಗರ ಹಾಗೂ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.
ಒಂದು ದಿನಕ್ಕೆ ಉಳಿಯುವ ಇಪ್ಪತ್ತು ಸಾವಿರ ಪ್ರವಾಸಿಗರು ಒಂದೂವರೆ ಕೋಟಿ ರುಪಾಯಿಯನ್ನು ಆಹಾರಕ್ಕಾಗಿಯೇ ವೆಚ್ಚ ಮಾಡುತ್ತಾರೆ. ಅಲ್ಲದೆ ಬೇಕರಿ ಹಾಗೂ ದರ್ಶಿನಿ ಹೋಟೆಲ್ ಗಳಲ್ಲಿ 75ರಿಂದ 80 ಲಕ್ಷ ರುಪಾಯಿ ವಹಿವಾಟು ಆಗಿದೆ. ಒಟ್ಟು 2.25 ಕೋಟಿ ರುಪಾಯಿ ವಹಿವಾಟು ಆಗಿದೆ. ಇನ್ನು ಆಹಾರ, ಸಿಹಿ ತಿಂಡಿಗಳ ಖರೀದಿ ಸೇರಿ ಅಂದಾಜು ನಾಲ್ಕು ಕೋಟಿ ರುಪಾಯಿಯಷ್ಟು ವ್ಯಾಪಾರವಾಗಿದೆ ಎಂಬುದು ನಾರಾಯಣ ಗೌಡರ ಮಾತು.
ಹೊರ ರಾಜ್ಯದ ಪ್ರವಾಸಿಗರು ಹೆಚ್ಚು
ಉತ್ತಮ ಮಳೆಯಾದ ಪರಿಣಾಮ ಪ್ರವಾಸಿಗರು ಹೆಚ್ಚು ಬಂದಿದ್ದಾರೆ. ಇದರಲ್ಲಿ ಹೊರರಾಜ್ಯದ ಪ್ರವಾಸಿಗರು ಹೆಚ್ಚಿದ್ದಾರೆ. ಅಕ್ಟೋಬರ್ 8ರವರೆಗೆ ಪ್ರವೇಶ ತೆರಿಗೆ ವಿಧಿಸುತ್ತಿಲ್ಲ. ಜೊತೆಗೆ ನಗರದ ಮತ್ತು ಅರಮನೆ ವಿದ್ಯುತ್ ದೀಪಾಲಂಕಾರವನ್ನು ಮುಂದುವರಿಸಿರುವುದರಿಂದ ಪ್ರವಾಸಿಗರನ್ನು ಸೆಳೆಯಲಿದೆ. ಇದರೊಂದಿಗೆ ಮೈಸೂರು ಭಾಗ ಹೊರತು ಪಡಿಸಿ ರಾಜ್ಯದ ಇತರ ಶಾಲಾ- ಕಾಲೇಜುಗಳಿಗೆ ದಸರಾ ರಜಾ ಶುರುವಾಗಿರುವುದರಿಂದ ಅಕ್ಟೋಬರ್ ಅಂತ್ಯದವರೆಗೂ ಪ್ರವಾಸಿಗರು ಬರಲಿದ್ದಾರೆ.
ಶೇ 40ರಷ್ಟು ವ್ಯಾಪಾರ ಹೆಚ್ಚಾಗಿದೆ
ಇನ್ನು ಹೊಟೆಲ್ ಗಳಿಗೆ ಮಾತ್ರವಲ್ಲದೆ ಟ್ರಾವೆಲ್ಸ್ ಗಳಿಗೆ ಒಳ್ಳೆ ವ್ಯಾಪಾರವಾಗಿದೆ. ನಗರದಲ್ಲಿ ವಿವಿಧ ಬಗೆಯ 1800 ವಾಹನಗಳಿದ್ದು, ಪ್ರತಿ ವರ್ಷಕ್ಕಿಂತ ಶೇ 40ರಷ್ಟು ವ್ಯಾಪಾರ ಹೆಚ್ಚಾಗಿದೆ ಎನ್ನುತ್ತಾರೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್. ಈ ವರ್ಷ ವಿದೇಶಿ ಪ್ರವಾಸಿಗರು ಕಡಿಮೆ ಇದ್ದರೂ ದೇಶದ ಎಲ್ಲ ರಾಜ್ಯಗಳ ಪ್ರವಾಸಿಗರು ಬಂದಿದ್ದಾರೆ. ಪ್ರತಿ ವರ್ಷಕ್ಕಿಂತ ಶೇಕಡಾ 30ರಷ್ಟು ವ್ಯಾಪಾರ ಹೆಚ್ಚಾಗಿದೆ. ವಿದೇಶಿ ಪ್ರವಾಸಿಗರನ್ನು ಸೆಳೆಯಲು ದಸರಾಕ್ಕಿಂತ 3 ತಿಂಗಳ ಮೊದಲೇ ಪ್ರಚಾರ ನೀಡಬೇಕು ಎನ್ನುವ ಸಲಹೆ ಟ್ರಾವೆಲ್ ಸ್ಮಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಜಯ ಕುಮಾರ್ ಅವರದು.
ನಗರ ಸಾರಿಗೆ ಆದಾಯವೂ ಹೆಚ್ಚಳ
ನಗರ ಸಾರಿಗೆಯಡಿ ಸಂಚರಿಸುವ ಸಿಟಿ ಬಸ್ ಗಳ ಆದಾಯ 6 ಪಟ್ಟು ಹೆಚ್ಚಿದೆ. ನಿತ್ಯ 28 ಲಕ್ಷ ಆದಾಯ ಆಗುತ್ತಿತ್ತು. ಕಳೆದ ವಾರ ನಿತ್ಯವೂ 34 ಲಕ್ಷ ಆದಾಯ ಬಂದಿದೆ ಎನ್ನುತ್ತಾರೆ ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ಹೆಚ್ ಶ್ರೀನಿವಾಸ್.
ಜೊತೆಗೆ ದಸರಾ ವಿಶೇಷ ಬಸ್ ಗಳಿಂದ ಸೋಮವಾರದವರೆಗೆ ನಿತ್ಯ 300 ಟ್ರಿಪ್ ಮಾಡಿದ ಹಿನ್ನೆಲೆಯಲ್ಲಿ 38 ಲಕ್ಷ ಆದಾಯವಾಗಿದೆ. ಇದು ನಿತ್ಯದ ಆದಾಯ ಹೊರತುಪಡಿಸಿ, ಬೆಂಗಳೂರು ಸೇರಿದಂತೆ ಮೈಸೂರು ಭಾಗದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಗೂ ಬಸ್ ಸಂಚರಿಸಿದೆ. ದಸರಾ ವಿಶೇಷ ಬಸ್ ಗಳು ಸಂಚರಿಸಿದ್ದು, ಒಂದು ಕೋಟಿ ಆದಾಯ ಆಗಬಹುದು ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ಅಂದಾಜಿಸಿದ್ದಾರೆ.
ಟ್ರಿಣ್ –ಟ್ರಿಣ್ ಗೆ ಮಾರು ಹೋದ ಪ್ರವಾಸಿಗರು
ಟ್ರಿಣ್ ಟ್ರಿಣ್ ಸೈಕಲ್ ಗೆ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನ ಜನರ ಜೊತೆಗೆ ಪ್ರವಾಸಿಗರೂ ಫಿದಾ ಆಗಿದ್ದಾರೆ. ದಸರಾ ವೇಳೆ ಟ್ರಿಣ್ ಟ್ರಿಣ್ ಸೈಕಲ್ ಬಳಕೆಗೆ ನೀಡಲಾಗಿದ್ದ ಪ್ಲಾನ್ ವಿಸ್ತರಣೆಗೊಳಿಸಲಾಗಿದೆ. ದಸರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಪ್ರವಾಸಿಗರ ಅನುಕೂಲಕ್ಕಾಗಿ ಟ್ರಿಣ್ ಟ್ರಿಣ್ ಸೈಕಲ್ ಬಳಕೆಗಾಗಿ ಮೂರು ದಿನ ಹಾಗೂ ವಾರದ ಪ್ಲಾನ್ ನೀಡಲಾಗಿತ್ತು. ದಸರೆಗಾಗಿಯೇ ಅರಮನೆ ಸಮೀಪದಲ್ಲಿ ಮೂರು ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ ತೆರೆಯಲಾಗಿತ್ತು.
ಟ್ರಿಣ್ ಟ್ರಿಣ್ ಸೈಕಲ್ ಗಳಿಗಾಗಿ ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಒಂದು ತಿಂಗಳವರೆಗೆ ದಸರಾ ಪ್ಲ್ಯಾನ್ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಗೆ ಮೈಸೂರು ನಗರದಾದ್ಯಂತ ಈಗಾಗಲೇ 6,500 ಕ್ಕಿಂತಲೂ ಹೆಚ್ಚು ಜನರಿಂದ ಸೈಕಲ್ ಬಳಕೆಗಾಗಿ ನೋಂದಣಿ ನಡೆದಿದೆ. ನಿತ್ಯ ಸರಾಸರಿ 900 ರಿಂದ 1000 ಜನರು ಸೈಕಲ್ ಬಳಸುತ್ತಿದ್ದಾರೆ.
ಬೇಡಿಕೆ ಹೆಚ್ಚಿರುವ ಸ್ಥಳಗಳಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್
ಹುಬ್ಬಳ್ಳಿಯಲ್ಲಿ ನಡೆದ ವರ್ಲ್ಡ್ ಬ್ಯಾಂಕ್ ವಿಷನ್ ಸಭೆಯಲ್ಲೂ, ದಸರಾ ನಂತರ ಮೈಸೂರಿನಲ್ಲಿ ಸರ್ವೇ ನಡೆಸಿ ಟ್ರಿಣ್ ಟ್ರಿಣ್ ಸಬ್ ಸ್ಟೇಷನ್ ಗಳನ್ನು ತೆರೆಯುವ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ. ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಬಳಕೆ ವಿಚಾರವಾಗಿ ಸರ್ವೇ ನಡೆಸಲು ಮೇಯರ್ ರಿಂದಲೂ ಸಕಲ ಸಿದ್ಧತೆ ನಡೆದಿದೆ.
ಬೇಡಿಕೆ ಹೆಚ್ಚಿರುವ ಸ್ಥಳಗಳಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ ತೆರೆಯಲು ನಗರ ಪಾಲಿಕೆ ಸದಸ್ಯರಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೈಕಲ್ ನ ಸಬ್ ಸ್ಟೇಷನ್ ಗಳು ಹೆಚ್ಚಲಿವೆ.