ಸತ್ಯವನ್ನೇ ಹೇಳುತ್ತೇವೆ: ಇದು ಕೆಸರು ಗದ್ದೆಯಲ್ಲ, ರಸ್ತೆ...
ಮೈಸೂರು, ಆಗಸ್ಟ್ 11: ಬೇಸಿಗೆ ಬಂತೆಂದರೆ ಧೂಳಿನ ಅರ್ಚನೆ, ಮಳೆಗಾಲದಲ್ಲಿ ಕೆಸರಿನ ಸಿಂಚನ. -ಇದು ಮಳೆಗಾಲದಲ್ಲಿ ಸಾಮಾನ್ಯವಾಗಿ ಗ್ರಾಮೀಣ ಭಾಗದ ನಿವಾಸಿಗಳು ಅನುಭವಿಸುವ ಸಂಕಷ್ಟಗಳು.
ಇದುವರೆಗೆ ಆಳಿದ ಸರ್ಕಾರಗಳು ಗ್ರಾಮೀಣಾಭಿವೃದ್ಧಿ ಬಗ್ಗೆ ಹೇಳುತ್ತಾ ಬಂದಿದ್ದರೂ ಈಗಲೂ ಕೂಡ ಹಲವು ಗ್ರಾಮಗಳು ಡಾಂಬರು ರಸ್ತೆ ಕಾಣದೆ ಮಳೆಗಾಲದಲ್ಲಿ ಥೇಟ್ ಕೆಸರುಗದ್ದೆಯಂತಾಗಿ ಬಿಡುತ್ತವೆ. ಈ ಪೈಕಿ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣ ತೀರ್ಥ ನದಿ ಉಪಕಾಲುವೆಯ ರಸ್ತೆಯೂ ಒಂದಾಗಿದೆ.
ಕಟ್ಟೆಮಳಲವಾಡಿ ಗ್ರಾಮದ ಪಕ್ಕದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯ ಉಪಕಾಲುವೆ ಏರಿ ಸುಮಾರು 16 ಕಿ.ಮೀ. ಇದ್ದು, ಈ ಏರಿಯ ರಸ್ತೆಗೆ ಡಾಂಬರು ಮಾಡದ ಕಾರಣ ಕಚ್ಚಾ ರಸ್ತೆಯು ಕೆಸರುಗದ್ದೆಯಂತೆಯೇ ಇದೆ. ಇದರ ಮೇಲೆಯೇ ನಡೆದುಕೊಂಡು, ಬೈಕ್ ನಲ್ಲಿ ಸರ್ಕಸ್ ಮಾಡಿಕೊಂಡು ತೆರಳಬೇಕಾಗಿದೆ.
ಸುತ್ತು ಬಳಸಿ ಹೋಗುವ ಬದಲು ಗ್ರಾಮಸ್ಥರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದ ಕಾಂಕ್ರೀಟ್ ಕಾಲುವೆಯ ಕಾಮಗಾರಿಯಲ್ಲಿ ಈ ಏರಿಯನ್ನು ಕಿರಿದು ಮಾಡಿ ಮತ್ತೆ ಆ ಏರಿ ಬದಿಗೆ ಕಾಲುವೆಯ ಜೊಂಡು, ಹೂಳು ತೆಗೆದು ಹಾಕುತ್ತಿರುವುದರಿಂದ ರಸ್ತೆ ಹಾಳಾಗಿದೆ. ಜತೆಗೆ ಬದಿಯಲ್ಲಿ ಗಿಡ-ಗಂಟಿಗಳು ಬೆಳೆದು ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ನಿರ್ಲಕ್ಷ್ಯ ತಾಳಿರುವ ಅಧಿಕಾರಿಗಳಿಗೆ ರೈತರು ಹಿಡಿಶಾಪ ಹಾಕುತ್ತಾ ತಿರುಗಾಡುವುದು ನಿತ್ಯವೂ ಕಂಡು ಬರುವ ದೃಶ್ಯವಾಗಿದೆ.
ಇದೇ ರಸ್ತೆಯಲ್ಲಿ ದನಗಳು, ಎತ್ತಿನ ಗಾಡಿ, ಟ್ರ್ಯಾಕ್ಟರ್, ಬೈಕ್ ಗಳು ಸೇರಿದಂತೆ ರೈತರು ತೆರಳಬೇಕಾಗಿದೆ. ಹೀಗಿರುವಾಗ ಕಾಲುವೆ ಏರಿಯ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ. ಆದರೆ ಅದ್ಯಾಕೋ ಈ ಬಗ್ಗೆ ಸಂಬಂಧಿಸಿದವರಿಗೆ ನಿರ್ಲಕ್ಷ್ಯ ಹೀಗಾಗಿ ಈ ಭಾಗದ ರೈತರಿಗೆ ಸಂಕಷ್ಟ ತಪ್ಪಿಲ್ಲ.