ಮಹಿಳೆ ತಲೆಯಲ್ಲಿ ಕೊಂಬು, ಪರಿಶಿಷ್ಟ ವರ್ಗ ಇಲಾಖೆಯ ಸಹಾಯ
ಚಾಮರಾಜನಗರ,ಮಾರ್ಚ್,28: ಕಳೆದ ಕೆಲವು ವರ್ಷಗಳಿಂದ ಒಬ್ಬಾಕೆಯ ತಲೆಮೇಲೆ ಕೊಂಬು ಬೆಳೆಯುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಸೋಲಿಗ ಮಹಿಳೆಯೊಬ್ಬರಿಗೆ ಅದರಿಂದ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ.
ಚಾಮರಾಜನಗರ ತಾಲೂಕಿನ ಹೊಸಪೋಡು ಕಾಲೋನಿಯಲ್ಲಿ ವಾಸವಿರುವ ಸೋಲಿಗ ಮಹಿಳೆ ಮಾದಮ್ಮ ಬಡತನದ ಕಾರಣದಿಂದಾಗಿ ಆಸ್ಪತ್ರೆಗೆ ತೆರಳಿರಲಿಲ್ಲ. ಇದೀಗ ಮಹಿಳೆಯ ಸಹಾಯಕ್ಕೆ ಚಾಮರಾಜನಗರ ಜಿಲ್ಲಾ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಮುಂದೆ ಬಂದಿದೆ.[ಅಚ್ಚರಿ : ಚಾಮರಾಜನಗರದ ಮಹಿಳೆ ತಲೆಯಲ್ಲಿ ಕೊಂಬು!]
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಸರಸ್ವತಿ ಹೊಸಪೋಡಿಗೆ ಭೇಟಿ ನೀಡಿ ಕೊಂಬು ಬೆಳೆದಿರುವ ಮಾದಮ್ಮ ಜೊತೆ ಚರ್ಚೆ ನಡೆಸಿ ವೈದ್ಯಕೀಯ ತಪಾಸಣೆಗೆ ಬರುವಂತೆ ಮನವೊಲಿಸಿದ್ದಾರೆ. ವೈದ್ಯಕೀಯ ಲೋಕಕ್ಕೆ ಸವಾಲಾದ ಈ ಅಚ್ಚರಿಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಅಗತ್ಯ ಚಿಕಿತ್ಸೆ ನೀಡಲು ತಯಾರಿ ನಡೆಸಿದ್ದಾರೆ. ಜತೆಗೆ ಸಂಕಷ್ಟದಲ್ಲಿರುವ ಮಾದಮ್ಮಳ ಕುಟುಂಬಕ್ಕೆ ಮನೆಯನ್ನು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಈ ಕುರಿತಂತೆ ಸಂಸದ ಆರ್. ಧ್ರುವನಾರಾಯಣ್ ಶಸ್ತ್ರಚಿಕಿತ್ಸೆ ನಡೆಸಿ ಕೊಂಬು ಬೆಳೆಯುವ ಸಮಸ್ಯೆಯನ್ನು ಪರಿಹರಿಸಿಕೊಡಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದ್ದು ಆ ಬಳಿಕವಾದರೂ ಕೊಂಬು ಮೂಡುವ ಸಮಸ್ಯೆಯಿಂದ ಮಾದಮ್ಮ ಮುಕ್ತರಾಗುತ್ತಾರೆಂಬ ಭರವಸೆ ಎಲ್ಲರಲ್ಲೂ ಮೂಡಿದೆ.