ನೋಟು ನಿಷೇಧವೇ ಗಿರಿಜನರನ್ನು ಒಕ್ಕಲೆಬ್ಬಿಸಲು ಕಾರಣ : ಪರಮೇಶ್ವರ್
ಮೈಸೂರು, ಡಿಸೆಂಬರ್. 20 : ನೋಟು ಅಮಾನ್ಯವಾಗಿದ್ದೇ ಮಡಿಕೇರಿಯ ದಿಡ್ಡಹಳ್ಳಿಯಲ್ಲಿರುವ ಗಿರಿಜನರನ್ನು ಒಕ್ಕಲೆಬ್ಬಿಸೋದಕ್ಕೆ ಕಾರಣವಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ಪೊಲೀಸ್ ಕರ್ತವ್ಯಕೂಟದಲ್ಲಿ ಪಾಲ್ಗೊಳ್ಳಲು ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಡಿಕೇರಿಯ ದಿಡ್ಡಹಳ್ಳಿಯಲ್ಲಿ ಪಿ.ಚಿದಂಬರಂ ಹಾಗೂ ಟಾಟಾ ಅವರ ಜಮೀನಿದ್ದರೆ ಅಲ್ಲಿನ ಜಿಲ್ಲಾಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಒತ್ತುವರಿಗೂ ಗಿರಿಜನರ ಸಮಸ್ಯೆಗೂ ತಳುಕು ಹಾಕಬಾರದು ಎಂದು ಪರಮೇಶ್ವರ್ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದರು[ಪಿಸಿಯಿಂದ ಒತ್ತುವರಿ : ರಾಜ್ಯ ಸರಕಾರಕ್ಕೆ ಸಿಂಹ ಸವಾಲ್]
ಗಿರಿಜನರು ಕೂಲಿ ಮಾಡಿಕೊಂಡು ಬದುಕುವವರು. ಆದರೆ, ಕಳೆದ 42 ದಿನಗಳಿಂದ ಅವರಿಗೆ ವೇತನ ಸಿಗುತ್ತಿಲ್ಲ. ಅಸಂಘಟಿತ ವಲಯದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ತಕ್ಷಣ ಪರಿಣಾಮ ಬೀರದಿದ್ದರೂ, ತಡವಾಗಿ ಜನರ ಮೇಲೆ ಪರಿಣಾಮ ಬೀರಿದೆ ಎಂದು ಪರೋಕ್ಷವಾಗಿ ನೋಟ್ ಬ್ಯಾನ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೊಡಗಿನ ದಿಡ್ಡಹಳ್ಳಿಯಲ್ಲಿರುವ ಅರಣ್ಯ ಒತ್ತುವರಿ ಜಾಗವನ್ನು ವಶಕ್ಕೆ ಪಡೆಯುವ ಅಧಿಕಾರ ಜಿಲ್ಲಾಧಿಕಾರಿಯವರಿಗೆ ಇದೆ. ನಮ್ಮ ಪರವಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಅಲ್ಲಿನ ಗಿರಿಜನರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಅಲ್ಲಿನ ಸಮಸ್ಯೆಯ ಕುರಿತು ವರದಿಯನ್ನೂ ಕೇಳಿದ್ದೇನೆ ಎಂದು ತಿಳಿಸಿದರು.