ಮೈಸೂರು: ಹಿಂದು-ಮುಸ್ಲಿಂ ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆ
ಮೈಸೂರು, ಸೆಪ್ಟೆಂಬರ್ 12: ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಗೌರಿ ಗಣೇಶನ ಹಬ್ಬವನ್ನು ಆಚರಿಸುವ ಮೂಲಕ ಮೈಸೂರಿನಲ್ಲಿ ಗಮನಸೆಳೆದಿದ್ದಾರೆ. ಇದಕ್ಕೆ ವೇದಿಯಾಗಿದ್ದು ಪರಿವರ್ತನಂ ಟ್ರಸ್ಟ್ ಹಾಗೂ ಆದಿತ್ರಿ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳು.
ಅಗ್ರಹಾರದ ವೃತ್ತದಲ್ಲಿರುವ ಟ್ರಸ್ಟ್ನ ಕಚೇರಿಯಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಪರಸ್ಪರ ಗಣೇಶ ಹಾಗೂ ಮೊಹರಂ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಿಂದೂ ಮುಸ್ಲಿಂ ಭಾಯಿ...ಭಾಯಿ.. ಎಂಬ ಸಂದೇಶವನ್ನು ಜನತೆಗೆ ರವಾನಿಸಿದರು.
ಚಾಮರಾಜನಗರದಲ್ಲಿ ಗಣೇಶನಿಗೆ ದೇವಾಲಯ ಕಟ್ಟಿದ ಮುಸ್ಲಿಂ ವ್ಯಕ್ತಿ
ಈ ಸಂದರ್ಭ ಪಾಲ್ಗೊಂಡು ಮಾತನಾಡಿದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ನಮ್ಮ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುತ್ತಿದ್ದು, ಈ ಬಾರಿ ಗೌರಿ ಗಣೇಶ ಮತ್ತು ಮೊಹರಂ ಹಬ್ಬ ಒಟ್ಟಾಗಿ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದರು.
ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ಥರ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.
ಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿ
ಪರಿವರ್ತನಂ ಟ್ರಸ್ಟ್ ನ ಅಧ್ಯಕ್ಷರಾದ ವಿನಯ್ ಕಣಗಾಲ್, ಹಿರಿಯ ಕಲಾವಿದರಾದ ಮೈಕ್ ಚಂದ್ರು, ಆದಿತ್ರಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಸೌಭಾಗ್ಯ, ಕಾರ್ಯದರ್ಶಿ ಅಮ್ರಿನ್ ತಾಜ್, ಅರವಿಂದ್, ದಿಲೀಪ್, ರಂಜಿತ್ ಪ್ರಸಾದ್, ಮುಸಲ್ಮಾನ್ ಯುವಕರಾದ ಕುಸುರು, ಅಬ್ರಾರ್, ನಾಸೀರ್ ಬಾಷಾ, ಜಮೀರ್ ಪಾಷಾ, ಅನ್ಸರ್ ಪಾಷಾ ಇದ್ದರು.