ಅತ್ತ ಮೈಸೂರು ದಸರಾ, ಇತ್ತ ದತ್ತಕ ಹಕ್ಕಿನ ಸಮರ
ಮೈಸೂರು, ಅಕ್ಟೋಬರ್. 14: ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದರೆ ರಾಜವಂಶಸ್ಥರೊಬ್ಬರು ರಾಜಮನೆತನದ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಚದುರಂಗ ಕಾಂತರಾಜೇ ಅರಸ್(ಶ್ರೀಕಂಠದತ್ತ ನರಸಿಂಹ ರಾಜ್ ಒಡೆಯರ್ ಅಕ್ಕನ ಮಗ ), ರಾಣಿ ಪ್ರಮೋದಾದೇವಿ ವಿರುದ್ಧ ಮೈಸೂರಿನ ನ್ಯಾಯಾಲಯಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಯದುವೀರ್ ಅವರನ್ನು ದತ್ತು ತೆಗೆದುಕೊಂಡ ಪ್ರಕ್ರಿಯೆ ಸರಿಯಲ್ಲ. 21 ವರ್ಷ ಮೀರಿದ ವ್ಯಕ್ತಿಯನ್ನು ಹಿಂದು ಕಾನೂನಿನ ಅನ್ವಯ ದತ್ತು ತೆಗೆದುಕೊಳ್ಳಲು ಸಾದ್ಯವಿಲ್ಲ ಎಂಬ ವಾದ ಮುಂದಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗಿದ್ದಾರೆ.[ಕಾಂತರಾಜೇ ಅರಸ್ ವಿರುದ್ಧ ಭೂ ದಾಖಲೆ ತಿದ್ದುಪಡಿ ಆರೋಪ]
ಹಿಂದು ದತ್ತಕ ಅಧಿನಿಯಮ ಇದಕ್ಕೆ ಅವಕಾಶ ನೀಡುವುದಿಲ್ಲ. ಯದುವೀರ್ ಅವರನ್ನು ದತ್ತು ತೆಗೆದುಕೊಂಡಿದ್ದರೂ ಅವರು ಯಾವುದೇ ಹಕ್ಕಿಗೆ ಭಾಜನರಾಗುವುದಿಲ್ಲ ಎಂದು ವಾದ ಮುಂದಿಟ್ಟಿದ್ದಾರೆ. ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ ರಾಣಿ ಪ್ರಮೋದಾದೇವಿ ಮತ್ತು ಯದುವೀರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಿಂದೆ ಕಾಂತರಾಜೇ ಅರಸ್ ಮೈಸೂರು ರಾಜವಂಶದಲ್ಲಿ ತಮಗೆ ಆಸ್ತಿ ಹಕ್ಕಿದೆ ಎಂದು ಬೆಂಗಳೂರು ನ್ಯಾಯಾಲಯಕ್ಕೂ ದಾವೆ ಸಲ್ಲಿಕೆ ಮಾಡಿದ್ದರು.[ಸಿಂಹಾಸನವೇರಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್]
ಆದರೆ ರಾಜಮನೆತನದ ಪರಂಪರೆಯಲ್ಲಿ ಇದಕ್ಕೆ ಅವಕಾಶವಿದೆ. ಕೆಲವೊಮ್ಮೆ ಪರಂಪರೆಗಳೇ ಕಾನೂನಾಗಿ ಮಾರ್ಪಟ್ಟ ಉದಾಹರಣೆಗಳಿವೆ. ಇಲ್ಲಿ ಯಾವುದೇ ಕಾನೂನು ವಿರೋಧಿ ಕ್ರಮಗಳು ಜರುಗಿಲ್ಲ ಎಂದು ರಾಜಮನೆತನದ ವಕೀಲರು ವಾದ ಮುಂದಿಟ್ಟಿದ್ದಾರೆ.