ಮೈಸೂರಿನಲ್ಲಿ ಭಾರಿ ಮಳೆ: ಹೊಳೆಯಾಗಿ ಬದಲಾಯ್ತು ರಸ್ತೆ!
ಮೈಸೂರು, ಆಗಸ್ಟ್ 10 : ಹಲವು ದಿನಗಳ ನಂತರ ಮೈಸೂರಿನಲ್ಲಿ ಸುರಿದ ಮಳೆ ಧರಗೆ ಇಂಪನ್ನಿತ್ತಿದೆ. ನಿನ್ನೆ ಸಂಜೆ 6ಕ್ಕೆ ಸುರಿದ ವರುಣ ತನ್ನ ಆರ್ಭಟ ಶುರುವಿಟ್ಟುಕೊಂಡ.
ಉದಯಗಿರಿ, ಇಟ್ಟಿಗೆ ಗೂಡು, ನಜರಾಬಾದ್ ಭಾಗದಲ್ಲಿ ಮೊದಲು ವರುಣ ತನ್ನ ರಭಸವನ್ನಿತ್ತ. ನಂತರ ಎಲ್ಲಾ ಕಡೆಗೂ ವ್ಯಾಪಿಸುತ್ತ ಗುಡುಗು, ಸಿಡಿಲಿನಿಂದ ಕೂಡಿದ ಭಾರೀ ಮಳೆ ವಾಹನಸವಾರರಿಗೆ ಸಂಕಟ ತಂದೊಡ್ಡಿತು. ಇನ್ನು ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
ಜಿಟಿ ಜಿಟಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇನ್ನು ಬಂದಿಲ್ಲ. ಇತ್ತ ಗಾಂಧಿನಗರ, ಗೌಸಿಯಾನಗರ, ರೇಣುಕಾದೇವಿ ಬ್ಲಾಕ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡ ನಡೆಯಿತು.
ಮುಂಗಾರು ಕೊರತೆ, ಭಾನುವಾರದಿಂದ ಮೋಡ ಬಿತ್ತನೆ ಆರಂಭ
ಇನ್ನು ವರುಣಾ ಹೋಬಳಿ ಸೇರಿದಂತೆ ಹಲವೆಡೆ ಮಳೆಯಾಗಿರುವ ಕುರಿತು ವರದಿಯಾಗಿದೆ. ಇತ್ತ ಬನ್ನಿಮಂಟದ ಲೀಲಾ ರೆಸಿಡೆನ್ಸಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ಟ್ರಾನ್ಸ್ಫರ್ಮರ್ ನೀರಿನಿಲ್ಲಿ ಮುಳುಗಿತು. ತಕ್ಷಣವೇ ವಿದ್ಯುತ್ ಕಡಿತಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಇತ್ತ ತಾಲೂಕಿನ ಹಾರೋಹಳ್ಳಿಯಲ್ಲಿ ಮಳೆಗಾಗಿ ಬೀಸಿದ ಗಾಳಿಗೆ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಡವಲಕಾಯಿ ನಾಶವಾಗಿದ್ದು, ರೈತನಿಗೆ ನಷ್ಟವುಂಟಾಗಿದೆ. ಇನ್ನು ಮಳೆಯ ಆರ್ಭಟಕ್ಕೆ ಮರವೊಂದು ಧರೆಗುರುಳಿದೆ.
ನಗರದ ಕೆ.ಆರ್.ಎಸ್ ರಸ್ತೆಯ ಬೃಂದಾವನ ಬಡಾವಣೆಯಲ್ಲಿ, ಮರದ ಕೆಳಗೆ ನಿಲ್ಲಿಸಿದ ಕಾರು ಜಖಂಗೊಂಡಿದೆ. ಮರ ತೆರವುಗೊಳಿಸಲಾಗದೆ ಸಾರ್ವಜನಿಕರು ಪರದಾಡಿದ ಘಟನೆ ಕೂಡ ನಡೆಯಿತು.