ಆಸ್ಪತ್ರೆಯಲ್ಲಿ ಕರುಳಹಿಂಡುವ ಪ್ರಸಂಗ :ನೋವಿನ ಆಕ್ರಂದನದ ನಡುವೆ ತಮ್ಮವರ ಹುಡುಕಾಟ
ಮೈಸೂರು, ಡಿಸೆಂಬರ್ 17 : ಒಂದೆಡೆ ಮುಗಿಲು ಮುಟ್ಟಿದ ಚೀರಾಟ, ಇನ್ನೊಂದೆಡೆ ಕರುಳು ಕಿತ್ತುಬರುವಂತೆ ನೋವಿನ ಆಕ್ರಂದನ. ಈ ನಡುವೆ ನೋವಿನಲ್ಲಿ ನರಳಾಡುತ್ತಿರುವ ಮುಗ್ಧ ಜೀವಗಳು, ಅವುಗಳನ್ನು ಸಂತೈಸುತ್ತಲೇ ಕಣ್ಣೀರಿಡುತ್ತಿರುವ ನೂರಾರು ಹಿರಿಯ - ಕಿರಿಯ ಹೃದಯಗಳು. ಇಂಥಹದ್ದೊಂದು ಮನಕಲಕುವ ದೃಶ್ಯ ನಗರದ ಕೆ ಆರ್ ಆಸ್ಪತ್ರೆಯ ಆವರಣದಲ್ಲಿ ಕಳೆದ ಮೂರು ದಿನಗಳಿಂದ ಸೃಷ್ಟಿಯಾಗಿದೆ.
ಹನೂರು ಕ್ಷೇತ್ರದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷಾಹಾರ ಸೇವನೆ ಪ್ರಕರಣ ಘಟಿಸಿ 48 ಗಂಟೆ ಉರುಳಿದರೂ ಅದರ ಪರಿಣಾಮ ಮಾತ್ರ ಘನ ಘೋರವಾಗಿದೆ. ಈ ಗ್ರಾಮದ ದುರಂತಕ್ಕೆ ಸಿಲುಕಿರುವವರಿಗೆ ತಾಯಿಯ ಹಾಗೆ ಆರೈಕೆ ನೀಡುತ್ತಿರುವ ಮೈಸೂರಿನ ಕೆ ಆರ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ತಂಡವು ನಿರಂತರವಾಗಿ ಅಸ್ವಸ್ಥರ ಮೇಲೆ ನಿಗಾವಹಿಸಿ ಚಿಕಿತ್ಸೆ ನೀಡುವ ಸಾಂತ್ವನ ಕೆಲಸ ಮಾಡುತ್ತಿದೆ. ಇದರ ಮಧ್ಯೆ ತಮ್ಮವರು ಎಲ್ಲಿ ಎಂಬ ಹುಡುಕಾಟಕ್ಕೆ ಮಾತ್ರ ಅಂತ್ಯವೇ ಇಲ್ಲದಂತಾಗಿದೆ .
ವಿಷ ಪ್ರಸಾದ ಪ್ರಕರಣ: ಊರಿಗೆ ಕಿಚ್ಚುಗುತ್ತಿ ಎಂಬ ಹೆಸರು ಬಂದಿದ್ದು ಹೇಗೆ?
ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಪ್ರತಿಯೊಂದು ಜೀವಗಳದ್ದು ಮಮ್ಮಲ ಮರುಗುವ ಕಥೆ. ಕಣ್ಣೀರಿಡುತ್ತಲೇ ತನ್ನವರಿಗಾಗಿ ಹುಡುಕಾಡುತ್ತಿವೆ ಕುಟುಂಬದ ಕಣ್ಣುಗಳು. ಮರಣ ಮೃದಂಗದ ಕದ ತಟ್ಟಿದ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿ ಕಣ್ಣೀರಿಡುವಂತೆ ಮಾಡುತ್ತಿದೆ. ಮಗಳಿಗೆ ಮೃತ್ಯುವಾದ ಅಪ್ಪನೇ ಮಾಡಿದ ಪ್ರಸಾದ, ನನಗೆ ಮಕ್ಕಳು ಬೇಡ ಪತಿಯನ್ನು ಕೊಡಿ ಎನ್ನುವ ಪತ್ನಿ ಮಂಗಮ್ಮರ ಆಕ್ರಂದನ, ಮನೆಗೆ ಬಂದಿದ್ದು ಪ್ರಸಾದವಲ್ಲ ಪತಿಯ ಕಳೇಬರ ಎಂದು ಒಂದೆಡೆ ಪತ್ನಿ ಕಣ್ಣೀರಿಡುವ ಗೋಳಿನ ಕಥೆ ಯಾರಿಗೂ ಹೇಳತೀರದು.
ಮಗುವನ್ನು ಕೊಟ್ಟು ಗಂಡನನ್ನು ಕರೆಸಿಕೊಂಡೆಯಾ...
ಶಾಂತರಾಜು ಎಂಬುವವರಿಗೆ ವಯಸ್ಸು 42. ಕಳೆದ 12 ವರ್ಷಗಳ ಹಿಂದೆ ಮಕ್ಕಳಾಗಿದ್ದು ಕೊನೆಗೂ ಕಿಚ್ಚುಗುತ್ತಿ ಮಾರಮ್ಮ ಕಣ್ ತೆರೆದಿದ್ದಳು. ದಂಪತಿಗೆ ಮುದ್ದಾದ ಮಗುವಾಗಿತ್ತು. ಈ ಹಿನ್ನೆಲೆ ಪತಿ ಹಾಗೂ ಮಗು ಇಬ್ಬರು ಹರಕೆ ತೀರಿಸಲು ಮಾರಮ್ಮನ ದೇವಸ್ಥಾನಕ್ಕೆ ಹೋಗಿದ್ದರು . ಇದೇ ವೇಳೆ ಪ್ರಸಾದ ಸೇವಿಸಿದ ಶಾಂತರಾಜು ಅಲ್ಲೇ ತನ್ನ ಜೀವನದ ಪಾಶವನ್ನೇ ಕಳೆದು ಕೊಂಡಿದ್ದು ಮಾತ್ರ ಕರುಣಾಜನಕ ಕಥೆ. ಲಿಂಗಾಯತರು ಮತ್ತು ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಗ್ರಾಮದಲ್ಲಿ ಜನರ ನಡುವೆ ಉತ್ತಮ ಬಾಂಧವ್ಯ ಇದೆ. ದೇವಾಲಯದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರೂ, ಸದ್ದುಗದ್ದಲವಿರಲಿಲ್ಲ.
ಈ ಊರಿನ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ
ನಮ್ಮ ಊರಿನ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ. ನಾವೆಲ್ಲ ಧರ್ಮ, ಜಾತಿ ಬೇಧ ಮರೆತು ಅನ್ಯೋನ್ಯವಾಗಿದ್ದೇವೆ. ಇದು ಹೇಗೆ ನಡೆಯಿತೋ ಗೊತ್ತಾಗುತ್ತಿಲ್ಲ ಎಂದು ಸ್ಥಳೀಯ ಆರ್ಮುಗಂ ಭಾವುಕರಾದರು. ದೇವರ ಪ್ರಸಾದದಲ್ಲಿ ವಿಷ ಬೆರೆಸಿದ್ದಾರಲ್ಲಾ, ಅವರು ಎಂತಹ ಮನುಷ್ಯರು? ಎಂದು ಅಂಬಿಕೈ ಮೇರಿ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಪೈಶಾಚಿಕ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿಕೊಡಬೇಕು ಎಂದು ಮತ್ತೊಬ್ಬ ಸ್ಥಳೀಯ ಮಹಿಳೆ ಪಾತಿ ಮೇರಿ ದುಃಖಿಸಿದರು.
ತಂದೆ ಹೋದ್ರೂ ಮೇಡಂ ತಾಯಿಯಾದರೂ ಉಳಿದುಕೊಳ್ತಾರೆ ಅಂತಾ ಅಂದ್ಕೊಂಡಿದ್ವಿ. ಆದರೆ ವಿಧಿಯಾಟವೇ ಬೇರೆ. ನಮ್ಮಪ್ಪ, ಅಮ್ಮನನ್ನು ವಿಷವಿಟ್ಟು ಸಾಯಿಸಿದೋರಿಗೆ ವಿಷ ಹಾಕೇ ಕೊಲ್ಲಬೇಕು ಎಂದು ಗೋಳಿಡುತ್ತಿದ್ದಾರೆ. ಮೈಲಿಬಾಯಿ ಮಕ್ಕಳು. ಮೈಲಿ ಬಾಯಿ ಪತಿ ಕೃಷ್ಣ ನಾಯಕ್ ಸಹ ಮೊನ್ನೆ ನಿಧನವಾಗಿದ್ದರು. ಮೃತರು ಕೋಟೆಪುದೆ ಗ್ರಾಮದವರು. ವಿಷಹಾರ ಸೇವಿಸಿದ ದಂಪತಿಗೆ ಮೂರು ಮಕ್ಕಳು. ಎಲ್ಲರನ್ನೂ ಕಳೆದುಕೊಂಡು ಸದ್ಯ ಕುಟುಂಬ ಅನಾಥವಾಗಿದೆ.
ಮೂವರು ಮಕ್ಕಳನ್ನು ಅನಾಥರನ್ನಾಗಿ ಮಾಡಿದ ಮಾರಮ್ಮನ ಪ್ರಸಾದ
ಭಕ್ತಿಯ ಪರಾಕಾಷ್ಠೆ ಮುಳುವಾಯಿತೇ ?
ದೇವರ ಪ್ರಸಾದ ವಾಸನೆ ಬಂದು ತಿನ್ನಲು ಯೋಗ್ಯವಲ್ಲ ಎಂದು ಸಂಶಯ ಬಂದರೂ ಸಾಕಷ್ಟು ಭಕ್ತರು ಪ್ರಸಾದವನ್ನು ದೇವಿಯ ಮೇಲಿನ ಭಕ್ತಿಗೆ ಸೇವಿಸಿದರು. ಭಕ್ತಿಯ ಪರಾಕಾಷ್ಠೆಯೇ ಹಲವು ಭಕ್ತರ ಸಾವು ನೋವಿಗೆ ಕಾರಣವಾಯಿತು. ಶುಕ್ರವಾರ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯ ಮುಕ್ತಾಯವಾಗುತ್ತಿದ್ದಂತೆ ಪ್ರಸಾದ ವಿತರಣೆ ಪ್ರಾರಂಭವಾಯಿತು. ಪ್ರಸಾದ ಸೇವನೆ ವೇಳೆ ಒಗರು ಸಹಿತ ಕೆಟ್ಟ ವಾಸನೆ ಬಂದರೂ ದೇವರ ಪ್ರಸಾದ ಎಸೆಯಬಾರದು ಎಂದು ಕಷ್ಟ ಪಟ್ಟು ಸಾಕಷ್ಟು ಜನ ಸೇವಿಸಿದ್ದಾರೆ. ಆದರೆ, ಕೆಲವರು ತಿನ್ನಲು ಸಾಧ್ಯವಾಗದೆ ಎಸೆದರು. ಪೂರ್ಣ ಪ್ರಮಾಣ ಹಾಗೂ ಅರೆಬರೆ ಸೇವಿಸಿದವರಲ್ಲಿ ಹೆಚ್ಚು ಪ್ರಾಣ ಹಾನಿಯಾಗಿದೆ ಎನ್ನಲಾಗಿದೆ.
ದೇವಾಲಯದ ಪ್ರಸಾದದಲ್ಲಿ ವಿಷ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ದಾರೆ: ವೈದ್ಯಾಧಿಕಾರಿ
ಹಲವರ ಜೀವ ಉಳಿಸಿದ ಕಾಗೆ..!
ಒಂದು ವೇಳೆ ದೇವಸ್ಥಾನಕ್ಕೆ ಕಾಗೆಗಳು ಆಹಾರ ಸೇವಿಸಲು ಬಾರದೆ ಇದ್ದಿದ್ದರೆ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚುತಿತ್ತು ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಪ್ರಸಾದ ವಿತರಣೆ ಪ್ರಾರಂಭವಾಯಿತು. ಮೊದಲು ಆಹಾರ ಸೇವಿಸಿದ ಜನರು ಚೆನ್ನಾಗಿಯೇ ಇದ್ದರು. ಕೆಲವೊಬ್ಬರಿಗೆ ಮಾತ್ರ ವಾಂತಿ ಕಾಣಿಸಿ ಕೊಳ್ಳುತಿತ್ತು. ಆದರೆ, ಹೊರಗೆ ಬಿಸಾಡಿದ್ದ ಎಂಜಲು ಪದಾರ್ಥಗಳನ್ನು ಸೇವಿಸಿದ ಕಾಗೆಗಳು ಒದ್ದಾಡುತ್ತಾ ಪ್ರಾಣ ಬಿಡುತ್ತಿರುವುದನ್ನು ಕಂಡ ಸ್ಥಳೀಯರು ಪ್ರಸಾದ ಸೇವನೆ ನಿಲ್ಲಿಸಿದ್ದಾರೆ. ಈ ವೇಳೆ ಅಸ್ವಸ್ಥರಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಇದರಿಂದ ಹಲವು ಜನರ ಜೀವ ಉಳಿದಿದೆ.