ಸ್ವಚ್ಛ ಭಾರತ ಅಂದೋಲನದ ಪ್ರಯುಕ್ತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೈಕ್ ರೈಡ್
ಮೈಸೂರು. ಸೆಪ್ಟೆಂಬರ್ 15 : ಸ್ವಚ್ಛ ಭಾರತ ಅಂದೋಲನದ ಪ್ರಯುಕ್ತ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮೈಸೂರಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರ ರೈಡ್ ಮೂಲಕ ವಿಭಿನ್ನ ಪ್ರಯತ್ನ ಮಾಡಲಾಯಿತು.
ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರ ರೈಡಿಂಗ್ ಮಾಡುವ ಮುಖಾಂತರ ಸುದರ್ಶನ್ ಜಾದೂಗರ್ ಅವರು ವಿನೂತನ ಸ್ವಚ್ಛತಾ ಅಭಿಯಾನ ನಡೆಸಿದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೈಕ್ ರೈಡ್ ಮಾಡುವುದು ಕಷ್ಟ ಸಾಧ್ಯವಾಗಿದ್ದರೂ ಅದನ್ನು ಜಾದೂಗಾರ್ ಎನ್ನುವರು ಸಾಧಿಸಿ ತೋರಿಸಿದ್ದಾರೆ.
ಇದೇ ವೇಳೆ ಜಾದುಗಾರ್ ಸುದರ್ಶನ್ ಮಾತನಾಡಿ, "ದಸರಾದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರಿನ ವಿವಿಧೆಡೆ ಹಲವಾರು ಕಾರ್ಯಕ್ರಮ ಆಯೋಜನೆಯಾಗಲಿದ್ದು, ಜನತೆ ಸ್ವಚ್ಛತೆ ಕಾಪಾಡಬೇಕು.
ಕಣ್ಣಿಗೆ ಬಟ್ಟೆ ಕಟ್ಟಿ ನಡೆದರು ಯಾವುದೇ ಕಸವು ಕಾಲಿಗೆ ಸಿಗಬಾರದು. ಅಷ್ಟೊಂದು ಅಚ್ಚುಕಟ್ಟಾಗಿ ಸ್ವಚ್ಛತೆ ಕಾಪಾಡಬೇಕೆಂದು ಜಾಗೃತಿ ಮೂಡಿಸಲು ಈ ಬೈಕ್ ರೈಡ್ ಅಭಿಯಾನ ನಡೆಸಿರುವುದಾಗಿ" ಹೇಳಿದರು.
ನಮ್ಮ ಪರಿಸರವನ್ನ ನಾವೇ ಕಾಪಾಡಬೇಕು. ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ವಿಭಿನ್ನ ಕಾರ್ಯಕ್ರಮಗಳನ್ನ ಮಾಡಿಕೊಂಡು ಬಂದಿದ್ದೇನೆ. ಅದರಲ್ಲಿ ಇದು ವಿನೂತನವಾದ ಪ್ರಯತ್ನ ಎಂದು ಸುದರ್ಶನ್ ಜಾದೂಗರ್ ತಿಳಿಸಿದರು.