ನನ್ನ ಕಣ್ಣೀರು ನಾಟಕೀಯವಲ್ಲ, ನಾನೊಬ್ಬ ಭಾವನಾತ್ಮಕ ಜೀವಿ : ಕುಮಾರಸ್ವಾಮಿ
Recommended Video
ಮೈಸೂರು, ಅಕ್ಟೋಬರ್ 27 : ನನ್ನ ಕಣ್ಣೀರು ನಾಟಕವಲ್ಲ. ನಾನೊಬ್ಬ ಭಾವನಾತ್ಮಕ ಜೀವಿ. ನಾನು ಈ ಭೂಮಿ ಮೇಲೆ ಬದುಕಿರುವವರೆಗೆ ಜನರ ಸೇವೆ ಮಾಡುತ್ತೇನೆ. ಡಾಕ್ಟರ್ ರೆಸ್ಟ್ ಮಾಡಲು ಹೇಳಿದ್ದಾರೆ. ನನ್ನ ಆರೋಗ್ಯಕ್ಕಿಂತ , ನನಗೆ ಜನರ ಆರೋಗ್ಯ ಮುಖ್ಯ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಅನಾರೋಗ್ಯ: ಜಯದೇವ ವೈದ್ಯರ ರಿಪೋರ್ಟ್
ಮೈಸೂರಿನಲ್ಲಿ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಂಡ್ಯದಲ್ಲಿ ಮಾಡಿದ ಭಾವನಾತ್ಮಕ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಸಾಯುವವರೆಗೆ ಅಧಿಕಾರದಲ್ಲಿ ಇರುವುದಿಲ್ಲ ಎಂಬುದು ನನಗೆ ಅರಿವಿದೆ. ಅಧಿಕಾರ ಇರುವವರಿಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಆರೋಗ್ಯ ಸರಿ ಇಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವವನಲ್ಲ. ನಾನು ಯಾವುದೇ ರಾಜಕೀಯ ಅರ್ಥದಲ್ಲಿ ಹಾಗೆ ಮಾತನಾಡಿಲ್ಲ. ನಾನು ಭಾವಜೀವಿ ಅನ್ನುವುದು ಎಲ್ಲರಿಗೂ ಗೊತ್ತು ಎಂದರು.
ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ : ಕುಮಾರಸ್ವಾಮಿ ಭಾವುಕ ನುಡಿ
ಕೆಲವರು ಸರ್ಕಾರದ ಹೆಸರಿಗೆ ಮಸಿ ಬಳಿಯಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಆ ಮಾಹಿತಿಯನ್ನು ಯಾರು ಕೊಟ್ಟರು ? ನಮ್ಮ ಸರ್ಕಾರ ಸುಭದ್ರವಾಗಿದೆ. ಎಲ್ಲ ಯೋಜನೆಗಳಿಗೆ ಹಣವನ್ನು ನೀಡಲಾಗುತ್ತಿದೆ. ನನ್ನ ಖಜಾನೆಯಲ್ಲಿ ಭಾಗ್ಯಲಕ್ಷ್ಮಿಯನ್ನು ಜನ ತುಂಬಿಸಿ ಇಟ್ಟಿದ್ದಾರೆ. ಒಂದೂವರೆ ವರ್ಷದ ಹಿಂದೆ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ ಎಂದರು.
ಇನ್ನು ಲೋಡ್ ಶೆಡ್ಡಿಂಗ್ ಬಗ್ಗೆ ಮಾತನಾಡಿ, ನಾನು ಲೋಡ್ ಶೆಡ್ಡಿಂಗ್ ಗೆ ಎಲ್ಲೂ ಆದೇಶ ಮಾಡಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದರು. ಬಿ ಎಸ್ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ , ವೆಂಕ , ಸೀನ , ನಾಣಿ ಅವರೇ ನೀವೆಲ್ಲಾ ಯಾವ ಪಕ್ಷದಲ್ಲಿ ಅಪ್ಪ ಮಕ್ಕಳು, ಅಣ್ಣ ತಮ್ಮಂದಿರು ಇಲ್ಲ ಹೇಳಿ ? ಯಡಿಯೂರಪ್ಪ ಏಕೆ ಶಿವಮೊಗ್ಗದಲ್ಲಿ ತಮ್ಮ ಮಗನನ್ನೇ ನಿಲ್ಲಿಸಿದ್ದಾರೆ? ಬೇರೆ ಯಾರೂ ಇರಲಿಲ್ಲವಾ ? ನಾವೇ ನೇರವಾಗಿ ವಿಧಾನಸಭೆ ರಾಜ್ಯಸಭೆಗೆ ಹೋಗುತ್ತಿಲ್ಲ. ಜನರ ಮುಂದೆ ಹೋಗುತ್ತೇವೆ. ಅವರು ಮತ ಹಾಕಿ ನಮ್ಮನ್ನು ಗೆಲ್ಲಿಸುತ್ತಾರೆ ಎಂದರು.
ಉಪ ಚುನಾವಣೆ ಉತ್ತಮವಾಗಿ ನಡೆಯುತ್ತದೆ. ಈ ಚುನಾವಣೆಯಲ್ಲಿಯೂ ಗೆಲುವು ಮೈತ್ರಿ ಸರ್ಕಾರದ ಪರವಾಗಿಯೇ ಇರುತ್ತದೆ. ಜನರ ಭಾವನೆಗಳು ನಮ್ಮ ಪರವಾಗಿದೆ. ಗೆಲ್ಲುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ
ವಿಧಾನಸೌಧಕ್ಕೆ ಬೀಗ ಹಾಕಿ ಚುನಾವಣೆ ನಡೆಸುತ್ತಿದ್ದಾರೆ ಎಂದಿರುವ ಬಿ ಎಸ್ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ ನಾನೇನು ವಿಧಾನಸೌಧಕ್ಕೆ ಬೀಗ ಹಾಕಿಲ್ಲ. ಜನಪರ ಕೆಲಸಗಳಿಗೆ ಗಮನ ನೀಡುತ್ತಿದ್ದೇನೆ. ಯಡಿಯೂರಪ್ಪ ತಮ್ಮ ಆಡಳಿತದ ಅವಧಿಯಲ್ಲಿ 20 ಉಪಚುನಾವಣೆಗಳನ್ನು ನಡೆಸಿದ್ದಾರೆ. ಆಗ ಯಡಿಯೂರಪ್ಪ ವಿಧಾನಸೌಧಕ್ಕೆ ಬೀಗ ಹಾಕಿ ಚುನಾವಣೆ ನಡೆಸಿದ್ರಾ ಎಂದು ಪ್ರಶ್ನಿಸಿದರು.
ಸಾಲ ಮನ್ನಾ ಆಗಿಲ್ಲವೆಂದು ಹೇಳುವವರಿಗೆ ಟಾಂಗ್ ನೀಡಿದ ಅವರು, ಇನ್ನು ಕೇವಲ 15 ದಿನ ಕಾಯಿರಿ. ನಿಮಗೆ ಸರಿಯಾದ ಉತ್ತರ ಸಿಗುತ್ತದೆ. 43 ಸಾವಿರ ಕೋಟಿ ಸಾಲ ಮನ್ನಾ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೂ ಕೆಲವು ನಿಯಮಗಳಿರುತ್ತವೆ. ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ ಎಂದರು.