ಮೈಸೂರು: ಹೆಚ್. ಡಿ ಕೋಟೆ ಜನರ ಬವಣೆ ಕೇಳುವವರಿಲ್ಲ!
ಮೈಸೂರು, ಏಪ್ರಿಲ್ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಾದ ಮೈಸೂರಿನ ವಿಧಾನಸಭಾ ಕ್ಷೇತ್ರಗಳು ನಿಜವಾಗಿಯೂ ಅಭಿವೃದ್ಧಿ ಹೊಂದಿವೆಯಾ ಅಥವಾ ಮರೀಚಿಕೆಯ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವಂತಹದ್ದು. ಇದಕ್ಕೆ ತಾಜಾ ಉದಾಹರಣೆ ಹೆಚ್. ಡಿ ಕೋಟೆ. ಇಲ್ಲಿನ ಜನರು ಈಗಲೂ ಕುಡಿಯುವ ನೀರಿನ ಸಮಸ್ಯೆಗೆ ಬೆದರಿ ಹೋಗಿದ್ದಾರೆ.
ಹೌದು, ಹೆಚ್. ಡಿ ಕೋಟೆಯ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ ಇಲ್ಲಿನ ಕೆಲ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ.
ಕೃಷ್ಣರಾಜ ಕ್ಷೇತ್ರದ ಭವಿಷ್ಯ ನಿರ್ಧರಿಸಲಿದೆ ಕಸದ ವಾಸನೆ!
ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳಿಗೆ ಡಾಂಬರೀಕರಣ ಭಾಗ್ಯವೇ ಲಭಿಸಿಲ್ಲ. ಹಿಂದುಳಿದ ತಾಲ್ಲೂಕು ಎನ್ನುವ ಕಾರಣಕ್ಕೆ ಸಾಕಷ್ಟು ಅನುದಾನವೇನೋ ಲಭಿಸಿದೆ. ಆದರೆ, ಗ್ರಾಮೀಣ ಭಾಗದ ಜನರು ಸಂಚರಿಸಲು ಇವತ್ತಿಗೂ ನರಕಯಾತನೆ ಅನುಭವಿಸಬೇಕಾಗಿದೆ. ಶಾಲಾ ಕಾಲೇಜು, ಆಸ್ಪತ್ರೆ, ಕೂಲಿ, ವ್ಯಾಪಾರ, ಖರೀದಿಗೆಂದು ನಿತ್ಯ ಪಟ್ಟಣಕ್ಕೆ ಓಡಾಡಬೇಕು. ಹದಗೆಟ್ಟ ರಸ್ತೆಗಳಲ್ಲಿ ತಿರುಗಾಡಿ ನಮ್ಮ ಬದುಕು ಹೈರಾಣಾಗಿದೆ. ಸರಿಯಾದ ಸಾರಿಗೆ ವ್ಯವಸ್ಥೆಯೂ ಇಲ್ಲ. ಜೊತೆಗೆ ಕಾಡು ಪ್ರಾಣಿಗಳ ಭಯ. ಕ್ಷೇತ್ರದಲ್ಲಿ ಇದುವರೆಗೆ ಶಾಸಕರಾದವರು ಈ ಸಮಸ್ಯೆಗಳತ್ತ ಗಮನವನ್ನೇ ಹರಿಸಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮೀಣ ಭಾಗದ ಜನರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕಬಿನಿ ಅಣೆಕಟ್ಟು ನಿರ್ಮಿಸಿದಾಗ 33 ಹಳ್ಳಿಗಳನ್ನು ಸ್ಥಳಾಂತರಗೊಳಿಸಿ ನಿವೇಶನ ನೀಡಲಾಗಿದೆ. ಆದರೆ, ಆ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಿಲ್ಲ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬೇಕಿರುವ ಯೋಜನೆಯನ್ನು ರೂಪಿಸಬೇಕಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ, ಕೆಲ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ನೀಗಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 100ಕ್ಕೂ ಹೆಚ್ಚು ಗ್ರಾಮಗಳು ಬಾಕಿಯಿವೆ. ಚುನಾವಣೆ ಸನಿಹದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವು
ಪ್ರಾಣಿ-ಮನುಷ್ಯನ ಸಂಘರ್ಷ
ಕಾಡಂಚಿನ ಗ್ರಾಮಗಳ ಜನರು ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಮಾನವ ಮತ್ತು ಪ್ರಾಣಿ ಸಂಘರ್ಷ. ಇದನ್ನು ತಡೆಯಲು ಸರಿಯಾದ ಯೋಜನೆ ರೂಪಿಸಿಲ್ಲ. ಈಗಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಸಾಕಷ್ಟು ಕಡೆ ಸೌರ ಬೇಲಿ, ರೈಲು ಹಳಿ ಬೇಲಿ ಹಾಗೂ ಟ್ರೆಂಚ್ ನಿರ್ಮಿಸಬೇಕಿದೆ. ಆದಿವಾಸಿಗಳೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಇನ್ನೂ ಸರಿಯಾದ ಸೌಲಭ್ಯಗಳು ದೊರಕಿಲ್ಲ. ಅಲೆಮಾರಿ ಜನಾಂಗದವರು ಜಾತಿ ದೃಢೀಕರಣ ಪತ್ರಕ್ಕಾಗಿ ಪರದಾಡುವುದು ತಪ್ಪಿಲ್ಲ.
ಮುಖಂಡರು ಏನಂತಾರೆ?
ಈ ಕುರಿತಾಗಿ ಕಾಂಗ್ರೆಸ್ ಅಭ್ಯರ್ಥಿ, ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದುರನ್ನು ಸಂಪರ್ಕಿಸಿದಾಗ, ನಮ್ಮ ತಂದೆ ಚಿಕ್ಕಮಾದು ಪ್ರತಿ ಗ್ರಾಮಕ್ಕೂ ಆದ್ಯತೆ ನೀಡಿದ್ದಾರೆ. ಸಾಕಷ್ಟು ಹಳ್ಳಿಗಳಿಗೆ ರಸ್ತೆ ಚರಂಡಿ ಸೇರಿದಂತೆ ಸೌಲಭ್ಯಗಳ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಹಿಂದೆಂದಿಗಿಂತ ಹೆಚ್ಚು ಅನುದಾನ ನಮ್ಮ ತಂದೆಯವರು ಶಾಸಕರಾಗಿದ್ದ ಅವಧಿಯಲ್ಲಿ ಬಂದಿದೆ. ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ತೆಗೆದುಹಾಕಲು ಸಾಕಷ್ಟು ಶ್ರಮಿಸಿದ್ದಾರೆ. ತಂದೆಯವರು ಜೆಡಿಎಸ್ ಪಕ್ಷದಿಂದ ಜಯಗಳಿಸಿದ್ದರು. ಆದರೆ ತಾಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಹೆಚ್ಚು ಅನುದಾನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಧ್ರುವನಾರಾಯಣ ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ತಂದೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಸ್ತರಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ.
ಸರಿಯಾದ ಯೋಜನೆಯಿಲ್ಲ!
ಬಿಜೆಪಿ ಮುಖಂಡ ಸಿದ್ದರಾಜು ಮಾತನಾಡಿ, ಇಲ್ಲಿನ ಶಾಸಕರು ಈಗ ನಮ್ಮೊಂದಿಗೆ ಇಲ್ಲ. ಹೀಗಾಗಿ ಅವರ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ತಡೆಯಲು ಸರಿಯಾದ ಯೋಜನೆ ರೂಪಿಸಲೇ ಇಲ್ಲ. ನಾಲ್ಕು ಆಣೆಕಟ್ಟುಗಳು ಇದ್ದರೂ, ತಾಲ್ಲೂಕಿನ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರವಿದೆ. ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗಳು ಜಾರಿಯಾಗಲಿಲ್ಲ. ತಾರಕ ಏತ ನೀರಾವರಿ ಯೋಜನೆಯನ್ನು ರೈತರ ಹಿತಕ್ಕೆ ಸಿಕ್ಕಂತೆ ರೂಪಿಸಲು ಹಿಂದಿನವರು ವಿಫಲರಾಗಿದ್ದಾರೆ ಎನ್ನುತ್ತಾರೆ.
ಪ್ರಜ್ಞಾವಂತ ಮತದಾರರ ಕೈಲಿದೆ ಜಿಲ್ಲೆಯ ಭವಿಷ್ಯ
ಜೆಡಿಎಸ್ ಅಭ್ಯರ್ಥಿ ಚಿಕ್ಕಣ್ಣ ಮಾತನಾಡಿ, ತಾಲ್ಲೂಕಿನ ಅಭಿವೃದ್ಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ಇತರೆ ಕಾಮಗಾರಿಗಳು ನಡೆದಿವೆ. ಅದನ್ನು ಬಿಟ್ಟರೆ ತಾಲೂಕಿಗೆ ಉತ್ತಮ ಕೊಡುಗೆ ಕೊಡುವಲ್ಲಿ ವಿಫಲರಾಗಿದ್ದಾರೆ. ತಮ್ಮ ಆಪ್ತರಿಗೆ ಹೆಚ್ಚಿನ ಮಣೆ ಹಾಕಿದ್ದರಿಂದಾಗಿ ತಾಲ್ಲೂಕು ಅಭಿವೃದ್ಧಿ ಕಾಣಲು ಸಾಧ್ಯವಾಗಲಿಲ್ಲ. ಶಾಸಕರು ನಮ್ಮ ಮುಂದೆ ಇಲ್ಲ ಇಲ್ಲವಾದ್ದರಿಂದ ಹೆಚ್ಚೇನು ಹೇಳಲಾಗುವುದಿಲ್ಲ ಎನ್ನುತ್ತಾರೆ. ಅಭಿವೃದ್ಧಿ ಯಾರೂ ಮಾಡಿಯೇ ಇಲ್ಲ ಎನ್ನುವುದು ಎಲ್ಲಾ ಪಕ್ಷದ ನಾಯಕರ ಮಾತು. ಅವರ ಬಿಟ್ಟು ಇವರ ಬಿಟ್ಟು ಮತ್ಯಾರು ಎಂಬ ಗಾದೆ ಇದೆ. ಬರೀ ಬೇರೆಯವರ ಮೇಲೆ ಎತ್ತಿ ಹಾಕುವ ಬದಲು ಕೆಲಸ ಮಾಡಿದವರ್ಯಾರು ಎಂಬುದು ಬಹುದೊಡ್ಡ ಪ್ರಶ್ನೆ. ಇವರೆಲ್ಲರಿಗೂ ಪ್ರಜ್ಞಾವಂತ ಮತದಾರ ತನ್ನ ಹಕ್ಕನ್ನು ಚಲಾಯಿಸಿ ಸರಿಯಾದ ಉತ್ತರ ನೀಡಲಿ ಎಂಬುದೇ ನಮ್ಮ ಆಶಯ.