ಬಿಜೆಪಿ ಸೇರುವ ಗಾಳಿ ಸುದ್ದಿಗಳಿಗೆ ತೆರೆ ಎಳೆದ ಎಚ್.ಸಿ.ಮಹದೇವಪ್ಪ!
ಮೈಸೂರು, ಜುಲೈ 12 : 'ನನ್ನ ರಾಜಕೀಯ ಅಂತ್ಯ ಕಾಂಗ್ರೆಸ್ ಪಕ್ಷದಲ್ಲಿಯೇ. ನನ್ನ ಡೆಡ್ ಬಾಡಿ ಸಹ ಬಿಜೆಪಿಗೆ ಹೋಗುವುದಿಲ್ಲ, ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿಲ್ಲ' ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಎಚ್.ಸಿ.ಮಹದೇವಪ್ಪ ಮಾತನಾಡಿದರು. ಬಿಜೆಪಿ ಸೇರಲಿದ್ದಾರೆ ಎಂದು ಎರಡು ದಿನಗಳಿಂದ ಹಬ್ಬಿದ್ದ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟರು. 'ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವ ವಲಸಿಗರು ನನ್ನ ವಿರುದ್ಧ ಪಿತೂರಿ ಮಾಡಿ ಈ ರೀತಿಯ ಸುದ್ದಿ ಹಬ್ಬಿಸಿದ್ದಾರೆ' ಎಂದು ಆರೋಪಿಸಿದರು.
ನನ್ನ ಡೆಡ್ ಬಾಡಿ ಸಹ ಬಿಜೆಪಿಗೆ ಹೋಗುವುದಿಲ್ಲ : ಎಚ್.ಸಿ.ಮಹದೇವಪ್ಪ
'ಕಾಂಗ್ರೆಸ್ ಪಕ್ಷದ ಜನಪ್ರಿಯ ಯೋಜನೆಗಳ ಮೇಲೆ ಜಾತಿ ಸವಾರಿ ಮಾಡಿತು. ನಮ್ಮ ಯೋಜನೆಗಳಿಗೆ ಜನರು ಮನ್ನಣೆ ನೀಡಲಿಲ್ಲ. ನನ್ನ ಸೋಲಿಗಿಂತ ಸಿದ್ದರಾಮಯ್ಯ ಅವರ ಸೋಲು ಮತ್ತು ಪಕ್ಷದ ಸೋಲು ನನಗೆ ಘಾಸಿ ಉಂಟು ಮಾಡಿದೆ' ಎಂದು ಮಹದೇವಪ್ಪ ತಿಳಿಸಿದರು.
ಸಿದ್ದರಾಮಯ್ಯ ಆಪ್ತ ಎಚ್.ಸಿ.ಮಹದೇವಪ್ಪ ಬಿಜೆಪಿಗೆ?
'ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಹಳಸಿದೆ ಎಂದು ಸುದ್ದಿ ಹಬ್ಬಿಸಿ ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಇಂತಹ ಪ್ರಯತ್ನ ಯಶಸ್ವಿಯಾಗುವುದಿಲ್ಲ. ನಮ್ಮ ನಡುವಿನ ಸಂಬಂಧ ಉತ್ತಮವಾಗಿದೆ' ಎಂದು ಹೇಳಿದರು.
ಪಕ್ಷಾಂತರ ಮಾಡುವುದಿಲ್ಲ
ಮೈಸೂರಿನಲ್ಲಿ ಗುರುವಾರ ಮಾತನಾಡಿದ ಎಚ್.ಸಿ.ಮಹದೇವಪ್ಪ ಅವರು, 'ನಾನು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ರಾಜಕೀಯ ಎಂಬುದು ಮರಕೋತಿ ಆಟವಲ್ಲ. ನಾನು ತತ್ವ, ಸಿದ್ದಾಂತವಿಟ್ಟುಕೊಂಡು ರಾಜಕಾರಣ ಮಾಡುವವನು. ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ' ಎಂದರು.
'ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿ ಅವರು ಅಧಿಕಾರ ಅನುಭವಿಸಬಹುದು ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಈಗಲೂ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನನ್ನ ರಾಜಕೀಯ ಕೊನೆ ಕಾಂಗ್ರೆಸ್ ಪಕ್ಷದಲ್ಲೇ' ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.
ಸ್ನೇಹ ಹಳಸಿದೆ ಎಂದು ಹೇಳಿದವರು ಯಾರು?
'ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸ್ನೇಹ ಹಳಸಿದೆ ಎಂದು ಹೇಳದವರು ಯಾರು?. ಸಿದ್ದರಾಮಯ್ಯ ಅವರು ಹೇಳಿದ್ದಾರೆಯೇ?. ನಾವಿಬ್ಬರೂ ಚೆನ್ನಾಗಿದ್ದೇವೆ' ಎಂದು ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.
'ಎಚ್.ಸಿ.ಮಹದೇವಪ್ಪ ಬಿಜೆಪಿ ಸೇರಲಿದ್ದಾರೆ. ಸಿದ್ದರಾಮಯ್ಯ, ಮಹದೇವಪ್ಪ ನಡುವಿನ ಸ್ನೇಹ ಹಳಸಿದೆ ಎಂಬ ಸುದ್ದಿಗಳು ಹಬ್ಬಲು ವಲಸಿಗರು ಕಾರಣ. ನಮ್ಮ ಸಂಬಂಧ ಹದಗೆಟ್ಟಿದೆ ಎಂದು ಸುದ್ದಿ ಹಬ್ಬಿಸಿ ಲಾಭ ಮಾಡಿಕೊಳ್ಳುವ ಕೆಲಸವನ್ನು ಕೆಲವು ನಾಯಕರು ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿಯೇ ಮಾತನಾಡುತ್ತೇನೆ' ಎಂದು ಹೇಳಿದರು.
ನನ್ನ ಸೋಲಿಗೆ ಜೆಡಿಎಸ್ ಕಾರಣವಲ್ಲ
'ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಜೆಡಿಎಸ್ ಗೆಲುವು ಕಾರಣವಲ್ಲ. ಬಿಜೆಪಿ ತಾನು ಗೆಲ್ಲಲು ಆಗದ ಜಾಗದಲ್ಲಿ ತನ್ನ ಓಟುಗಳನ್ನು ಜೆಡಿಎಸ್ಗೆ ವರ್ಗಾವಣೆ ಮಾಡಿದ್ದೆ ಕಾರಣವಾಗಿದೆ' ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
'ಚುನಾವಣೆ ಸೋಲಿನ ಬಳಿಕ ನಾನು ದಿಗ್ಬ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು. ದೇಹದ ಅಂಗಾಗ ಪುನಶ್ಚೇತನಕ್ಕಾಗಿ ಹಾಗೂ ಅನಾರೋಗ್ಯದ ಹಿನ್ನಲೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ತೆರಳಿದ್ದೆ. ಈ ಕಾರಣದಿಂದಾಗಿ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ' ಎಂದು ತಿಳಿಸಿದರು.
ಜನರು ಮನ್ನಣೆ ನೀಡಲಿಲ್ಲ
'ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಯೋಜನೆಗಳಿಗೆ ಜನರು ಮನ್ನಣೆ ನೀಡಲಿಲ್ಲ. ಅಭಿವೃದ್ಧಿ ಮೇಲೆ ಜಾತಿ ಸವಾರಿ ಮಾಡಿತು. ನನ್ನ ಸೋಲಿಗಿಂತ ಸಿದ್ದರಾಮಯ್ಯ ಮತ್ತು ಪಕ್ಷದ ಸೋಲು ನನಗೆ ಘಾಸಿ ಉಂಟು ಮಾಡಿತು. ಈ ಆಘಾತದಿಂದ ಹೊರಬರಲು ನನಗೆ ಒಂದೂವರೆ ತಿಂಗಳು ಬೇಕಾಯಿತು' ಎಂದರು.
'ಚುನಾವಣೆಯಲ್ಲಿ ನನ್ನ ಪುತ್ರ ಸ್ಪರ್ಧಿಸುತ್ತಾನೆ ಎಂಬ ಸುದ್ದಿಗಳು ಕ್ಷೇತ್ರದಲ್ಲಿ ಕೇಳಿಬಂದಿದ್ದು ನಿಜ. ಆದರೆ, ಸೋಲಿಗೂ ಇದಕ್ಕೂ ಸಂಬಂಧವೇ ಇಲ್ಲ' ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಆಪ್ತರು
ಎಚ್.ಸಿ.ಮಹದೇವಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಮೈಸೂರಿನಲ್ಲಿ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ಈಗ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಎಚ್.ಸಿ.ಮಹದೇವಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಪ್ರಬಲವಾದ ಲೋಕೋಪಯೋಗಿ ಖಾತೆಯನ್ನು ನೀಡಿದರು.
ಮೇ ತಿಂಗಳಿನಲ್ಲಿ ನಡೆದ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಟಿ.ನರಸೀಪುರ ಕ್ಷೇತ್ರದಲ್ಲಿ ಎಚ್.ಸಿ.ಮಹದೇವಪ್ಪ ಸೋಲು ಕಂಡರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಎಂ.ಅಶ್ವಿನ್ ಕುಮಾರ್ ಅವರು ಗೆಲುವು ಸಾಧಿಸಿದರು.