ಸಿಎಂ ಸಿದ್ದರಾಮಯ್ಯ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರಾ?
ಮೈಸೂರು ಮಾರ್ಚ್ 13: ಮೈಸೂರಿನ ನಂಜನಗೂಡಿನಲ್ಲಿ ಹಮ್ಮಿಕೊಂಡಿದ್ದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮುಗಿದಿದೆ. ಆದರೆ ಈ ವೇಳೆ ಸಿಎಂ ಸಿದ್ದರಾಮಯ್ಯನವರು ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು, ಕಾರ್ಯಕ್ರಮ ಮುಗಿಸಿದ ಬಳಿಕ ಸಿದ್ದರಾಮಯ್ಯ ನಂಜನಗೂಡಿನ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಲ್ಲೇ ಪಕ್ಕದಲ್ಲಿ ನಡೆಯುತ್ತಿದ್ದ ಕನಕ ಕಲ್ಯಾಣ ಮಂಟಪ ಕಾಮಗಾರಿಯನ್ನು ಕೂಡ ಪರಿಶೀಲಿಸಿದರು.[ನಂಜನಗೂಡು ಉಪಚುನಾವಣೆ: ಗ್ರಾ.ಪಂ. ಹಂತದಲ್ಲೂ ನೀತಿ ಸಂಹಿತೆ]
ಇದೇ ವೇಳೆ ಟ್ರಸ್ಟ್ ನ ಮುಖಂಡರು, ಕಾಮಗಾರಿಗೆ ಈಗಾಗಲೆ ಒಂದೂವರೆ ಕೋಟಿ ಖರ್ಚು ಮಾಡಿದ್ದೇವೆ. ಎರಡನೇ ಹಂತದ ಕಾಮಗಾರಿಗೆ ಕನಿಷ್ಠ ಎರಡೂವರೆ ಕೋಟಿ ಹಣದ ಅವಶ್ಯಕತೆ ಇದೆ ಎಂದರು. ಅವರ ಬೇಡಿಕೆಯನ್ನು ಆಲಿಸಿದ ಸಿದ್ದರಾಮಯ್ಯ ಎರಡು ಕೋಟಿ ಹಣ ಕೊಡಿಸುವುದಾಗಿ ಭರವಸೆ ನೀಡಿದರು.[ಯಾರು ಗೆಲ್ತಾರೆ ನೋಡೇಬಿಡೋಣ: ವಿ.ಶ್ರೀನಿವಾಸ್ ಪ್ರಸಾದ್]
ಈಗಾಗಲೇ ಈ ಭಾಗದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂಥ ಯಾವುದೇ ಭರವಸೆಯನ್ನು ಸಾರ್ವಜನಿಕವಾಗಿ ನೀಡುವುದು ನೀತಿಸಂಹಿತೆಯ ಉಲ್ಲಂಘನೆಯಾಗುತ್ತದೆಂದು ಸ್ಥಳೀರಯ ದೂರಿದರು. ಅದೂ ಅಲ್ಲದೆ, ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವಾಗ ಇಂಥ ಕಾಮಗಾರಿ ವೀಕ್ಷಣೆ ಕೂಡ ಮಾಡುವಂತಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುತ್ತದೆಯೇ ಕಾದುನೋಡಬೇಕು.
ಕಾಮಗಾರಿ ವೀಕ್ಷಣೆ ವೇಳೆ, ಪಿರಿಯಾಪಟ್ಟಣ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ವೆಂಕಟೇಶ್, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಸಿಎಂ ಪುತ್ರ ಯತೀಂದ್ರ ಉಪಸ್ಥಿತರಿದ್ದರು.