ಹೆಚ್.ಡಿ.ಕೋಟೆಯ ಮಗ್ಗೆ, ಮಳಲಿ ಗ್ರಾಮಗಳಲ್ಲಿ ಹುಲಿ ಭಯ!
ಮೈಸೂರು, ಡಿಸೆಂಬರ್ 26: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಮರಿಗಳೊಂದಿಗೆ ಹುಲಿಯೊಂದು ನಾಡಿಗೆ ಬಂದಿರುವ ಸುದ್ದಿ ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವಲಯದ ಮಗ್ಗೆ ಮತ್ತು ಮಳಲಿ ಗ್ರಾಮಗಳಲ್ಲಿ ಹರಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮರಿಗಳೊಂದಿಗೆ ತಾಯಿ ಹುಲಿ ಇರುವುದನ್ನು ಕೆಲವರು ನೋಡಿದ್ದಾಗಿ ಹೇಳುತ್ತಿದ್ದು, ಇದರಿಂದ ಈ ವ್ಯಾಪ್ತಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಗ್ಗೆ ಗ್ರಾಮದಲ್ಲಿಯೇ ಹುಲಿ ಬೀಡು ಬಿಟ್ಟಿರುವ ಸಾಧ್ಯತೆಯಿದ್ದು ಕೂಡಲೇ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಹುಲಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆಯನ್ನು ಆರಣ್ಯ ಇಲಾಖೆ ನಡೆಸುತ್ತಿದೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ಮಗ್ಗೆ ಗ್ರಾಮದಲ್ಲಿ ಕೇರಳ ಮೂಲದವರು ಬಾಳೆ ತೋಟ ಮಾಡಿದ್ದು ಅದರೊಳಗೆ ಅಡಗಿಕೊಂಡಿರುವ ಸಂಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದರಿಂದ ಸುಮಾರು 40 ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವ್ಯಾಪ್ತಿಯಲ್ಲಿ ಹುಲಿಗಳು ಅಡ್ಡಾಡುತ್ತಿರುವುದನ್ನು ಅರಣ್ಯ ಸಿಬ್ಬಂದಿ ಕೂಡ ಒಪ್ಪಿಕೊಂಡಿದ್ದಾರೆ.
ತಕ್ಷಣಕ್ಕೆ ಹುಲಿಯ ಜಾಡು ಸಿಗದ ಕಾರಣ ದಸರಾ ಆನೆಗಳಾದ ಭೀಮ, ಕುಮಾರಸ್ವಾಮಿಯನ್ನು ಕರೆ ತಂದು ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ನಡುವೆ ಡ್ರೋಣ್ ಮೂಲಕ ಹುಲಿಯ ಜಾಡನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗಿದೆ ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಹುಲಿಗಳು ಕಾಣಿಸಿಲ್ಲ.[ವೈರಲ್ ವಿಡಿಯೋ: ಹುಲಿಗೆ ಆಹಾರವಾದ ಕಾರಿನಿಂದ ಇಳಿದ ಮಹಿಳೆ]
ಈ ವ್ಯಾಪ್ತಿಯಲ್ಲಿ ರೈತರೊಬ್ಬರ ಇಲಾತಿ ಹಸುವನ್ನು ಹುಲಿ ಬೇಟೆಯಾಡಿರುವುದರಿಂದ ಗ್ರಾಮಸ್ಥರು ಹುಲಿಯಿರುವುದನ್ನು ನಂಬುತ್ತಿದ್ದು, ಆದರೆ ಎಲ್ಲಿದೆ? ಎಂಬ ಸುಳಿವು ಸಿಗದ ಕಾರಣ ಯಾವಾಗ ದಾಳಿ ಮಾಡಿಬಿಡುತ್ತದೆಯೋ ಎಂಬ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಸದ್ಯ ಮಗ್ಗೆ ಮತ್ತು ಮಳಲಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಿತದೃಷ್ಟಿಯಿಂದ ಗ್ರಾಮಗಳ ಸುತ್ತಲೂ ಅರಣ್ಯ ಸಿಬ್ಬಂದಿಯನ್ನು ಕಾವಲು ಕಾಯುವಂತೆ ಸೂಚಿಸಲಾಗಿದೆ.