ಮಹದೇವಪ್ಪ ಮನೆಯಲ್ಲಿ ಕಳಲೇ ಕೇಶವಮೂರ್ತಿಯವರಿಗೆ ಏನು ಕೆಲಸ?
ಮೈಸೂರು, ಫೆಬ್ರವರಿ 2: ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರಸಿನತ್ತ ಮುಖ ಮಾಡಿದ್ದಾರೆ ಎಂಬ ವದಂತಿ ಹಿನ್ನೆಲೆ ಇಂದು(ಫೆ.2) ಜಿಲ್ಲಾ ಉಸ್ತುವಾರಿ ಸಚಿವ ಎಚ್,ಸಿ. ಮಹದೇವಪ್ಪ ನಿವಾಸಕ್ಕೆ ಅವರು ತೆರಳಿರುವುದು ತೀವ್ರ ಕುತೂಹಲವನ್ನು ಉಂಟುಮಾಡಿದೆ.
ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಅನ್ನು ತೊರೆಯುವುದಿಲ್ಲ ಎಂದು ಹೇಳುತ್ತಿದ್ದ ಕೇಶವಮೂರ್ತಿಯವರು ಇಂದು ದಿಢೀರನೆ ಮಹದೇವಪ್ಪ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ರಾಜಕೀಯ ಬೆಳವಣಿಗೆ ನಂಜನಗೂಡು ಕ್ಷೇತ್ರದಲ್ಲಿ ಬಾರಿ ತಲ್ಲಣ ಉಂಟು ಮಾಡುವ ಮುನ್ಸೂಚನೆಯಂತಿದೆ. ಈಗಾಗಲೇ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ನಿಂದ ಕೇಶವಮೂರ್ತಿಗಳು ನಂಜನಗೂಡಿನಲ್ಲಿ ಚುನಾವಣೆ ನಿಲ್ಲಲಿದ್ದಾರೆ ಎನ್ನಲಾಗುತ್ತಿದೆ.[ಮೈಸೂರಿನಲ್ಲಿ ಸಿಎಂ- ಎಚ್.ಸಿ. ಮಹದೇವಪ್ಪ ರಹಸ್ಯ ಮಾತುಕತೆ]
ಅದರೆ ಇದ್ದಕ್ಕಿದ್ದಂತೆ ಕೇಶವಮೂರ್ತಿಗಳು ಎಚ್ ಸಿ ಮಹದೇವಪ್ಪ ನಿವಾಸಕ್ಕೆ ತೆರಳಿರುವುದನ್ನು ನೋಡಿದರೆ ಕಾಂಗ್ರೆಸ್ ಕಳಲೆಯವರನ್ನು ಸೆಳೆಯುವ ರಣತಂತ್ರ ಮಾಡಿದ್ದು ನಿಜವೇ ಎಂಬ ಪ್ರಶ್ನೆ ಮೂಡದೇ ಇರದು. ಅಲ್ಲದೆ ಈಗಾಗಲೇ ಈ ಸಂಬಂಧ ಮಾತಕತೆಗಳೂ ಜರುಗಿದ್ದವು.
ಇನ್ನು ಎಚ್.ಸಿ. ಮಹದೇವಪ್ಪನವರು ಅವರ ನಿವಾಸದ ಬಳಿ ಮಾಧ್ಯಮದವರನ್ನು ಕೂಡ ನಿಯಂತ್ರಿಸುವ ಪ್ರಯತ್ಮ ಮಾಡಿದ್ದಾರೆ. ಹೇಳಿಕೆಗಳನ್ನೂ ನೀಡಿಲ್ಲ. ಅಲ್ಲದೇ ನಾನು ಕೇಶವಮೂರ್ತಿ ಹಳೆಯ ಸ್ನೇಹಿತರು. ಇದು ಸೌಜನ್ಯದ ಭೇಟಿ ಅಷ್ಟೆ ಎಂದು ಜಾರಿಕೊಂಡಿದ್ದಾರೆ. ಹಾಗೆಯೇ ಕೇಶವಮೂರ್ತಿಗಳೂ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನೂ ಕೂಡ ಕಾಂಗ್ರೆಸ್ಸಿನಲ್ಲಿ ನಂಜನಗೂಡು ಉಪ ಚುನಾವಣೆಗೆ ಯಾವುದೇ ತಕ್ಕ ಅಭ್ಯರ್ಥಿಯನ್ನು ಘೋಷಿಸದೇ ಇರುವ ಕಾರಣ ಕೇಶವಮೂರ್ತಿ ಹಾಗೂ ಮಹದೇವಪ್ಪ ಭೇಟಿ ಕುತೂಹಲ ಮತ್ತು ಮಹತ್ವವನ್ನು ಪಡೆದುಕೊಂಡಿದೆ.