ಕೊನೆಗೂ ಬಂತು ಬಂಡೀಪುರದ ಸಾಕಾನೆಗಳಿಗೆ ಆಹಾರ!
ಗುಂಡ್ಲುಪೇಟೆ, ಜವನರಿ 18: ಸರ್ಕಾರದಿಂದ ಸಾಕಾನೆಗಳಿಗೆ ನೀಡಲಾಗುವ ಪೌಷ್ಠಿಕ ಆಹಾರಗಳ ದಾಸ್ತಾನು ಸರಬರಾಜು ಆಗದ ಕಾರಣದಿಂದಾಗಿ ಸಾಕಾನೆಗಳಿಗೆ ಆಹಾರ ನೀಡಲು ಸಾಧ್ಯವಾಗದೆ ಅರಣ್ಯಕ್ಕೆ ಬಿಡಲಾಗಿದೆ ಎಂಬ ಸುದ್ದಿ ಇತ್ತೀಚೆಗೆ ಬಂಡೀಪುರದ ಸಾಕಾನೆ ಶಿಬಿರದಿಂದ ಕೇಳಿ ಬಂದಿತ್ತು.
ಸಾಕಾನೆಗಳಿಗೆ ಆಹಾರದಲ್ಲಿ ವ್ಯತ್ಯವಾಗಿದ್ದು, ಪ್ರಾಣಿಪ್ರಿಯರ ಬೇಸರಕ್ಕೆ ಕಾರಣವಾಗಿತ್ತು. ಆದರೆ ಈಗ ಸರ್ಕಾರದಿಂದ ಬರಬೇಕಾಗಿದ್ದ ಆಹಾರಗಳ ದಾಸ್ತಾನು ಬಂದಿದ್ದು ಸಾಕಾನೆಗಳಿಗೆ ಸಮರ್ಪಕವಾಗಿ ಆಹಾರವನ್ನು ನೀಡಲಾಗುತ್ತಿದೆಯಂತೆ.
ಬಂಡೀಪುರ ಅಭಯಾರಣ್ಯದ ಶಿಬಿರದಲ್ಲಿ ಜಯಪ್ರಕಾಶ್, ಚೈತ್ರ, ಲಕ್ಷ್ಮೀ ಹಾಗೂ ಎರಡು ಮರಿಯಾನೆ ಸೇರಿ 5 ಸಾಕಾನೆಗಳಿದ್ದು, ಸೂಕ್ತ ಸಮಯಕ್ಕೆ ಆಹಾರ ಸರಬರಾಜು ಆಗದ ಕಾರಣ ಅರಣ್ಯದಲ್ಲಿರುವ ಸೊಪ್ಪು ತಿಂದು ಬದುಕುವ ಪರಿಸ್ಥಿತಿ ಬಂದೊದಗಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಸುದ್ದಿ ಪ್ರಾಸವಾರ ಕೂಡಲೇ ಎಚ್ಚೆತ್ತುಕೊಂಡ ಸಂಬಂಧಿಸಿದ ಅಧಿಕಾರಿಗಳು ಮಂಗಳವಾರದಿಂದ ಆನೆಗಳಿಗೆ ಆಹಾರವನ್ನು ಪೂರೈಕೆ ಮಾಡಿದ್ದಾರೆ. ಸದ್ಯ ಸಾಕಾನೆಗಳು ಇರುವ ಶಿಬಿರಕ್ಕೆ ಭತ್ತದ ಹುಲ್ಲು, ಭತ್ತ, ಉಪ್ಪು, ತೆಂಗಿನ ಕಾಯಿ ಬಂದಿದ್ದು ಮಾವುತರು ಮತ್ತು ಕಾವಾಡಿಗಳು ಆಹಾರವನ್ನು ತಯಾರಿಸಿ ಆನೆಗಳಿಗೆ ನೀಡುತ್ತಿದ್ದಾರೆ.
ಟೆಂಡರ್ ಪ್ರಕ್ರಿಯೆಯಿಂದಾಗಿ ಆಹಾರ ದಾಸ್ತಾನು ಸರಬರಾಜಿಗೆ ಅಡ್ಡಿಯಾಗಿ ಸಾಕಾನೆಗಳಿಗೆ ಆಹಾರದ ಸಮಸ್ಯೆ ಉಂಟಾಗಿತ್ತು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾಗಲಾರದು ಎಂಬುದಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಕಾಲ ಅರಣ್ಯದಲ್ಲೇ ಬೀಡು ಬಿಟ್ಟು ಹಸಿರು ಸೊಪ್ಪು ತಿನ್ನುತ್ತಾ ದಿನಕಳೆದಿದ್ದ ಸಾಕಾನೆಗಳು ಇದೀಗ ಎಂದಿನಂತೆ ಆಹಾರ ಸಿಗುತ್ತಿರುವುದರಿಂದ ಖುಷಿಯಾಗಿ ಆಹಾರ ಸೇವಿಸುತ್ತಿವೆ.