ಸಾಹಿತ್ಯ ಸಮ್ಮೇಳನದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ
ಮೈಸೂರು, ನವೆಂಬರ್ 24 : ನಾಡಿನ ಮೂಲೆ-ಮೂಲೆಯಿಂದ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಾವಿರಾರು ಕನ್ನಡಾಭಿಮಾನಿಗಳಿಗೆ ಶುಚಿ-ರುಚಿಯಾದ ಭೋಜನ ವ್ಯವಸ್ಥೆ ಮಾಡಲಾಗಿದೆ.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
ಸಮವಸ್ತ್ರ ತೊಟ್ಟು ಶಿಸ್ತಿನಿಂದ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದ ಸ್ವಯಂಸೇವಕರ ಸಹಕಾರದಿಂದ ಸಾರ್ವಜನಿಕರಿಗೆ, ಪ್ರತಿನಿಧಿಗಳಿಗೆ, ಗಣ್ಯ ಅತಿಥಿಗಳಿಗೆ ಮತ್ತು ಮಾಧ್ಯಮದವರಿಗೆ ಅಚ್ಚುಕಟ್ಟಾಗಿ ಊಟ ಬಡಿಸಲಾಯಿತು.
ಸಾರ್ವಜನಿಕರಿಗೆ ಊಟದ ವ್ಯವಸ್ಥೆಗಾಗಿ ಬೇಟನ್ ಪಾವೆಲ್ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. 120 ಕೌಂಟರ್ಗಳಲ್ಲಿ ಜನರಿಗೆ ಊಟ ವಿತರಣೆ ಮಾಡಲಾಯಿತು. ಹಿರಿಯ ನಾಗರಿಕರಿಗೆ 20 ಮತ್ತು 40 ಕೌಂಟರ್ಗಳಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ ವ್ಯವಸ್ಥೆ ಮಾಡಲಾಗಿತ್ತು. ಇದು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಮೈಸೂರು ಸಮ್ಮೇಳನದಲ್ಲಿ ಚಂಪಾ ಭಾಷಣದ ಮುಖ್ಯಾಂಶ
ಗಣ್ಯರು, ಜನ ಸಾಮಾನ್ಯರಿಗೆ ಪ್ರತ್ಯೇಕವಾದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಎಲ್ಲಾ ಕಡೆಗಳಲ್ಲಿ ಊಟ ಮೆನು ಒಂದೇ ಆಗಿತ್ತು. ಪಲಾವ್, ಪೂರಿ-ಸಾಗು, ಅನ್ನ ಸಾಂಬಾರು, ಮೊಸರನ್ನ ಮೆನುವಿನಲ್ಲಿ ಸೇರಿದ್ದವು.
ಗಣ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಬಾಳೆ ಎಲೆಯ ಊಟ ನೀಡಲಾಯಿತು. ಸಾರ್ವಜನಿಕವಾಗಿ ಅಡಿಕೆ ಹಾಳೆಯಲ್ಲಿ ಊಟವನ್ನು ವಿತರಿಸಲಾಯಿತು. ಸುಮಾರು 2 ಲಕ್ಷ ಜನರು ಭೋಜನ ಸವಿದರು.
'ಒಂದು ಹೊತ್ತಿಗೆ ಅಂದಾಜು 60 ರಿಂದ 70 ಸಾವಿರದಂತೆ ವಿವಿಧ ವಿಭಾಗಗಳಲ್ಲಿ ದಿನಕ್ಕೆ ಅಂದಾಜು 2 ಲಕ್ಷ ಮಂದಿ ಭೋಜನವನ್ನು ಸವಿಯುವ ನಿರೀಕ್ಷೆ ಇದೆ ' ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಹೇಳಿದ್ದಾರೆ.
ಅಚ್ಚುಕಟ್ಟಾದ ವ್ಯವಸ್ಥೆ : ಊಟದ ವ್ಯವಸ್ಥೆಗಳನ್ನು ಮಾಡಲಾಗಿದ್ದ ಪ್ರದೇಶಗಳಲ್ಲಿ ಶುಚಿತ್ವಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗಿತ್ತು. ಭೋಜನ ಕೇಂದ್ರದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಊಟ ಮಾಡಿದ ತಟ್ಟೆ, ನೀರಿನ ಬಾಟಲ್, ಲೋಟಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿತ್ತು.