ಗೊಮ್ಮಟಗಿರಿಯ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ
ಮೈಸೂರಿನ ಗೊಮ್ಮಟಗಿರಿ ಗೊಮಟೇಶ್ವರ ಮೂರ್ತಿಗೆ ಭಾನುವಾರ ವಿಜೃಂಭಣೆಯಿಂದ ಮಹಾಮಸ್ತಕಾಭಿಷೇಕ ನೆರವೇರಿತು.
ಮೈಸೂರು, ನವೆಂಬರ್, 27: ಮೈಸೂರಿನ ಬಿಳಿಕೆರೆ ಬಳಿಯಲ್ಲಿರುವ ಬೆಟ್ಟದೂರು ಗ್ರಾಮದ ಸುಮಾರು 200 ಅಡಿ ಎತ್ತರದ ಕಲ್ಲು ಬಂಡೆಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ 16 ಅಡಿ ಎತ್ತರದ ಏಕಶಿಲಾ ಮೂರ್ತಿಯ ಗೊಮ್ಮಟೇಶ್ವರನಿಗೆ ಭಾನುವಾರ ಅದ್ಧೂರಿ ಮಹಾಮಸ್ತಾಭಿಷೇಕ ನಡೆಯಿತು.
ಏಕಶಿಲಾ ಮೂರ್ತಿಯ ಗೊಮ್ಮಟೇಶ್ವರನನ್ನು 500 ವರ್ಷಗಳ ಹಿಂದೆ ಗಂಗರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಲಾಗಿದೆ ಎನ್ನಲಾಗಿದ್ದು, ಜೈನರ ಕ್ಷೇತ್ರಗಳ ಪೈಕಿ ಇದು ಕೂಡ ಒಂದಾಗಿದೆ. 2012 ರಿಂದ ಪ್ರತೀ ವರ್ಷ ಮಹಾಮಸ್ತಕಾಭಿಷೇಕವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ವಿವಿಧ ಅಭಿಷೇಕಗಳು 67ನೇ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಈ ಬಾರಿಯೂ ಎಂದಿನಂತೆ ಮಹಾಮಸ್ತಕಾಭಿಷೇಕವನ್ನು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಶನಿವಾರ ರಾತ್ರಿಯಿಂದಲೇ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಗಿತ್ತು.
ಬೆಳಿಗ್ಗೆಯಿಂದಲೇ ಭಕ್ತರು ಕ್ಷೇತ್ರಕ್ಕೆ ಆಗಮಿಸಲಾರಂಭಿಸಿದ್ದರು. ಇವರ ಸಮ್ಮುಖದಲ್ಲಿ ವಿವಿಧ ಅಭಿಷೇಕಗಳನ್ನೊಳಗೊಂಡ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಜೈನಮುನಿ ದೀಕ್ಷಿತ್ ಚಾಲನೆ ನೀಡಿದರು.
ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಹೊಂಬುಜ ಕ್ಷೇತ್ರದ ಡಾ.ದೇವೇಂದ್ರ ಕೀತ್ರಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಸಲಾಯಿತು. ಈ ಸಂದರ್ಭ 108 ಪೂರ್ಣ ಕಳಸಗಳ ಅಭಿಷೇಕ, 5 ಕುಂಭ ಕಳಸಗಳ ಅಭಿಷೇಕ ಮುಗಿದ ಬಳಿಕ ಪಂಚಾಮೃತ ಅಭಿಷೇಕ ನಡೆಯಿತು.
ಇದಾದ ನಂತರ ಗೊಮ್ಮಟೇಶ್ವರನಿಗೆ ಶ್ರೀಗಂಧ, ಅರಿಸಿನ, ಕುಂಕುಮ, ಹಾಲು, ಜೇನು ತುಪ್ಪ ಹಾಗೂ ಇನ್ನಿತರೆ ದ್ರವ್ಯಗಳಿಂದ ಮಹಾಮಜ್ಜನ ಕಾರ್ಯ ನಡೆಯಿತು. ಇಂದಿನ ಮೈಸೂರು, ಹಾಸನ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಜೈನಭಕ್ತರು ಆಗಮಿಸಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಪುನೀತರಾದರು.