ಗೋಲ್ಡನ್ ಚಾರಿಯೆಟ್ ನಲ್ಲಿ ಪ್ರಯಾಣ, ಸೆಲ್ಫಿ, ಅಂಬಾವಿಲಾಸದ ಅಚ್ಚರಿ
ಮೈಸೂರು, ಸೆಪ್ಟೆಂಬರ್ 24: ಗೋಲ್ಡನ್ ಚಾರಿಯೆಟ್ ರೈಲು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿಗರನ್ನು ಬರಮಾಡಿಕೊಳ್ಳಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಕಲಾಪ್ರದರ್ಶನ ನೀಡಿದವು. ಕಲಾ ತಂಡಗಳೊಂದಿಗೆ ಪ್ರವಾಸಿಗರು ಹೆಜ್ಜೆ ಹಾಕಿ ಸಂಭ್ರಮಿಸಿದರು.
In Pics : ಶೋಭನಾ ನಾಟ್ಯಕ್ಕೆ ಮನಸೋತ ಮೈಸೂರಿಗರು
ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ಈ ದಿನ 28 ಪ್ರವಾಸಿಗರು ಬಂದಿದ್ದಾರೆ. ಅವರು ಎರಡು ದಿನ ಮೈಸೂರಿನಲ್ಲಿಯೇ ತಂಗಲಿದ್ದಾರೆ. ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆ ಬಸ್ಸಿನಲ್ಲಿ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಶ್ರೀರಂಗಪಟ್ಟಣ, ಮಂಡ್ಯ, ಚಾಮರಾಜನಗರಗಳ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ ಎಂದರು.
ಅವರಿಗೆ ಗೋಲ್ಡ್ ಕಾರ್ಡ್ ನೀಡಲಾಗಿದೆ. ಸೆಪ್ಟೆಂಬರ್ 30ರಂದು ಗೋಲ್ಡನ್ ಚಾರಿಯೆಟ್ ನಲ್ಲಿ ಮತ್ತಷ್ಟು ಪ್ರವಾಸಿಗರು ಬರಲಿದ್ದಾರೆ ಎಂದು ತಿಳಿಸಿದರು. ರೈಲಿನಲ್ಲಿ ಆಗಮಿಸಿದ ಪ್ರವಾಸಿಗರು ಕಲಾತಂಡಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.
ಸುವರ್ಣ ರಥದ ಈ ವಿಶೇಷ ಟ್ರಿಪ್ ಮರೆಯಲಾಗದ ಅನುಭವ ನೀಡಿದೆ. ಕಡಿಮೆ ವೆಚ್ಚದ ಇದೇ ಮಾದರಿಯ ಒಂದು ದಿನದ ಪ್ರವಾಸಗಳನ್ನು ಇನ್ನಷ್ಟು ಆಯೋಜಿಸಲಿ ಎಂದು ಹೈದರಾಬಾದ್ ಮೂಲದ ಪ್ರವಾಸಿ ಸತ್ಯನಾರಾಯಣ್ ಅವರು ತಿಳಿಸಿದರು.
ಮೈಸೂರು ದಸರಾ, ಬೆಳಕಿನಿಂದ ಮಂತ್ರ ಮುಗ್ಧಗೊಳಿಸುವ ಅಂಬಾವಿಲಾಸ ಅರಮನೆ ನೋಡಲು ಅಮೆರಿಕಾದಿಂದ ಕುಟುಂಬ ಸಮೇತ ಬಂದಿರುವ ಕಿಶೋರ್ ನೃತ್ಯ ಮಾಡಿ ಸಂಭ್ರಮಿಸಿದರು. ನಾವು ಮೂರು ತಲೆಮಾರು ಈ ಪ್ರವಾಸವನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ 75 ವರ್ಷದ ಸತ್ಯನಾರಾಯಣ್, ನನ್ನ ಮಗ 7 ವರ್ಷದ ಅರ್ಜುನ್ ಫೈವ್ ಸ್ಟಾರ್ ಲಕ್ಷುರಿ ಜರ್ನಿ ಮಾಡಿದೆವು ಎಂದು ಹೇಳಿದರು.
ಮೈಸೂರು ದಸರಾ ಬಗ್ಗೆ ಕೇಳಿದ್ದೆವು. ನೋಡಲೇಬೇಕು ಎಂದು ನಿಶ್ಚಿಯಿಸಿದಾಗ ವೆಬ್ ಸೈಟ್ ಮೂಲಕ ಬುಕ್ ಮಾಡಿ ಪ್ರವಾಸ ಆರಂಭಿಸಿದೆವು. ಇದು ಮರೆಯಲಾಗದ ಅವಿಸ್ಮರಣೀಯ ಅನುಭವ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.
ಕಣ್ಮನ ಸೆಳೆದ ಯೋಗ ದಸರಾ
ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗೋತ್ಸವ ಏರ್ಪಡಿಸಲಾಗಿತ್ತು. ಅರಮನೆ ಅಂಗಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟಿಸಿದರು.
ಬೆಳಗ್ಗೆ 6 ಗಂಟೆಗೆ ಎರಡು ಸಾವಿರಕ್ಕೂ ಅಧಿಕ ಮಂದಿ ಯೋಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯೋಗಾಸಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಅರಮನೆ ಆವರಣದಲ್ಲಿ ಸಮಾವೇಶಗೊಂಡಿದ್ದರು. ಮೊದಲಿಗೆ ಪ್ರಾರ್ಥನೆ ಮೂಲಕ ಆರಂಭವಾಯಿತು.
ಆ ನಂತರ ಚಾಲನಾ ಕ್ರಿಯೆಗಳು, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಶವಾಸನ, ಧ್ಯಾನ, ಶಾಂತಿ ಮಂತ್ರ, ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.