ಸ್ವಾತಂತ್ರ್ಯ ಹೋರಾಟಗಾರ ಸುಧೀಂದ್ರ ಕೌಲಗಿ ನಿಧನ
ಮೈಸೂರು, ಆಗಸ್ಟ್ 7 : ಹಿರಿಯ ಸ್ವಾತಂತ್ರ್ಯಹೋರಾಟಗಾರ ಸುಧೀಂದ್ರ ಕೌಲಗಿ ಅನಾರೋಗ್ಯದಿಂದ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸರ್ವೋದಯ ಧುರೀಣರಾದ ಸುಧೀಂದ್ರರು ಧಾರವಾಡ ಜಿಲ್ಲೆಯ ಗುಡಿಗೇರಿಯಲ್ಲಿ 1934ರಲ್ಲಿ ಜನಿಸಿದರು. ಇವರು ಹುಟ್ಟು ಹೋರಾಟಗಾರರು. ಜಯಪ್ರಕಾಶ್ ನಾರಾಯಣ್ ಹಾಗೂ ವಿನೋಭಾ ಭಾವೆಯವರ ಜತೆ ಒಡನಾಟವನ್ನು ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುಧೀಂದ್ರ ಕೌಲಗಿ ಇನ್ನು ನೆನಪು ಮಾತ್ರ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ರಾಷ್ಟ್ರ ಸೇವೆಯನ್ನು ಗುರುತಿಸಿ ಹೆಗ್ಗೋಡಿನ ದಾಸಿಮಯ್ಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ಮಟ್ಟದ ಜಮ್ನಲಾಲ್ ಬಜಾಜ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಬಿರುದುಗಳು ಸಂದಿವೆ.
ಇವರ ಪತ್ನಿ ಗಿರಿಜಮ್ಮ ಕೆಲವು ವರ್ಗಳ ಹಿಂದೆಯೇ ನಿಧನರಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಹಲವು ಕುಟುಂಬಸ್ಥರು, ಬಂಧು-ಮಿತ್ರರನ್ನು ಶ್ರೀಯುತರು ಅಗಲಿದ್ದಾರೆ.
ಜನಮಾನಸದ ಮಧ್ಯೆ ಅಪರೂಪದ ವ್ಯಕ್ತಿಯಂತೆ ಬದುಕಿದ ಸುಧೀಂದ್ರ ರವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮೇಲುಕೋಟೆಯಲ್ಲಿ ನಡೆಯಲಿದೆ.