ನರೇಂದ್ರ ಮೋದಿ ವಿರುದ್ಧ ದೇವೇಗೌಡರು ಗುಡುಗಿದ್ದೇಕೆ?
ಮೈಸೂರು, ಜನವರಿ 11: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದ್ದ ಆಕ್ರೋಶವನ್ನೆಲ್ಲ ಮಾಜಿ ಪ್ರಧಾನಿ ದೇವೇಗೌಡ ಹೊರ ಹಾಕಿದ್ದಾರೆ. ಮೋದಿ ತಮ್ಮ ಸ್ವಾರ್ಥಕ್ಕಾಗಿ ನೋಟು ನಿಷೇಧ ಮಾಡಿದ್ದು, ನಿತ್ಯ ನೋವು ಅನುಭವಿಸುತ್ತಿರುವ ಸಾರ್ವಜನಿಕರು ಇದಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಭವಿಷ್ಯವನ್ನು ಕೂಡ ನುಡಿದಿದ್ದಾರೆ.
ಮೋದಿ ವಿರುದ್ದ ದೇವೇಗೌಡರಿಗೆ ಗುಡುಗಲು ವೇದಿಕೆಯಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಬೀಳ್ಕೊಡುಗೆ ಸಮಾರಂಭ. ಸಮಾರಂಭದಲ್ಲಿ ಪ್ರೊ. ರಂಗಪ್ಪ ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೆಚ್ಚಿನ ಸಮಯವನ್ನು ಮೋದಿ ವಿರುದ್ಧ ಹರಿಹಾಯಲು ಬಳಸಿಕೊಂಡರು.[ಪ್ರಿಂಟಿಂಗ್ ಪ್ರೆಸ್ ನಿಂದ ನೇರ ಕಾಳಧನಿಕರ ಮನೆ ತಲುಪಿವೆ ಹೊಸ ನೋಟುಗಳು!]
ದೇಶದ ಜನರು ಇಂದು ಮೌಖಿಕ ನೋವು ಅನುಭವಿಸುತ್ತಿದ್ದಾರೆ. ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಮೋದಿ ಎದುರಿಸಬೇಕಾಗುತ್ತದೆ. ದೇಶದ ಆಡಳಿತ ನಡೆಸುವವರಿಗೆ ಜನರ ನಾಡಿಮಿಡಿತದ ಅರಿವಿರಬೇಕು. ಅದನ್ನು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ದೇಶದ ಜನರನ್ನು ಬಲಿಪಶು ಮಾಡಬಾರದು ಎಂದರು.
ಉಗ್ರರಿಗೆ ಬಳಕೆಯಾಗುತ್ತಿರುವ ಹಣವನ್ನು ತಡೆಗಟ್ಟಿ, ಅವರನ್ನು ದಮನ ಮಾಡುತ್ತೇನೆ ಎಂದು ಹೇಳಿದ ಮೋದಿ ಅದನ್ನು ಸೂಕ್ಷ್ಮ ರೀತಿಯಲ್ಲಿ ತಡೆಗಟ್ಟಬಹುದಿತ್ತು. ಅದಕ್ಕೆ ಯಾರ ಅಭ್ಯಂತರವೂ ಇರಲಿಲ್ಲ. ಆದರೆ ಏಕಾಏಕಿ ನೋಟುಗಳನ್ನು ನಿಷೇಧ ಮಾಡಿ ರಾಷ್ಟ್ರದ ಜನರನ್ನು ಸಂಕಷ್ಟಕ್ಕೆ ನೂಕಿದರು ಎಂದು ಹೇಳಿದರು.[ಹಣಕಾಸು ವ್ಯವಸ್ಥೆ ಮೂಳೆ ಮುರಿದ ಪ್ರಧಾನಿ ಮೋದಿ: ರಾಹುಲ್]
ಭಾರತವನ್ನು ದುಷ್ಟರ ಕೈಯಿಂದ ಉಳಿಸಲು ಮತ್ತೆ ಕೃಷ್ಣ ಹುಟ್ಟಿ ಬರಬೇಕಾದ ಅಗತ್ಯವಿಲ್ಲ, ಆ ಕೆಲಸವನ್ನು ಮುಂದಿನ ಚುನಾವಣೆಯಲ್ಲಿ ಜನರೇ ಮಾಡುತ್ತಾರೆ. ಈ ಬಾರಿ ಕಾಶ್ಮೀರದಲ್ಲಿ ದೀಪಾವಳಿ ಆಚರಣೆ ಮಾಡಿರುವ ಮೋದಿ ಅಲ್ಲಿನ ಜನರ ಸಂಕಷ್ಟ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಅವರೆಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾಶ್ಮೀರಕ್ಕೆ ಹೋಗಿ, ಹುರಿಯತ್ ನಾಯಕ ಗಿಲಾನಿ ಅವರನ್ನು ಭೇಟಿ ಮಾಡಿ ಅಲ್ಲಿನ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸಿದೆ. ನಾನು ಯಾವತ್ತೂ ಪ್ರಚಾರ ಗಿಟ್ಟಿಸಿಕೊಳ್ಳಲಿಲ್ಲ. ಆದರೆ ಮೋದಿ ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.