ಮೇ 10 ರಂದು ಎಚ್.ವಿಶ್ವನಾಥ್ ಜೆಡಿಎಸ್ ಗೆ?!
ಮೈಸೂರು, ಏಪ್ರಿಲ್ 24: ಉಪಚುನಾವಣೆಯಲ್ಲಿ ವಿಜಯದ ನಗು ಬೀರಿರುವ ರಾಜ್ಯ ಕೈ ನಾಯಕರಿಗೆ ಕುರುಬ ಜನಾಂಗದ ಪ್ರಭಾವಿ ನಾಯಕ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಶಾಕ್ ನೀಡಲು ನಿರ್ಧರಿಸಿದ್ದಾರೆ!
ಹೌದು, ಈಗಾಗಲೇ ಹಿರಿಯ ನಾಯಕ ಎಸ್.ಎಂ.ಕೃಷ್ಣ ಮತ್ತು ವಿ.ಶ್ರೀನಿವಾಸ್ ಪ್ರಸಾದ್ ಅವರ ನಿರ್ಗಮನದಿಂದ ರಾಜ್ಯದಲ್ಲಿ ಸಂಪೂರ್ಣವಾಗಿ ಸೊರಗಿರುವ ಕಾಂಗ್ರೆಸ್ ಗೆ ವಿಶ್ವನಾಥ್ ನಿರ್ಗಮನ ಮರ್ಮಾಘಾತ ಉಂಟುಮಾಡಿದೆ. ಹಳೇ ಮೈಸೂರು ಪ್ರಾಂತ್ಯದ ಜನಪ್ರಿಯ ನಾಯಕ ವಿಶ್ವನಾಥ್ ಅವರು ಕೂಡ ಪಕ್ಷ ತೊರೆಯುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ತಮ್ಮದೇ ಆಧಿಪತ್ಯ ಸ್ಥಾಪಿಸಲು ಹೊರಟಿರುವ ಕಾಂಗ್ರೆಸ್ ಮುಖಂಡರಿಗೆ ಇದು ನುಂಗಲಾರದ ತುತ್ತಾಗಿದೆ.[ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]
ವಿಶ್ವನಾಥ್ ಸದ್ದಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ 'ಕೈ' ಕೊಟ್ಟು ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ. ಹೀಗಂತ ಅವರ ಆಪ್ತ ವಲಯ ತಿಳಿಸಿದೆ. ಈಗಾಗಲೇ ಹಿರಿಯ ನಾಯಕ ಎಸ್.ಎಂ.ಕೃಷ್ಣ ಮತ್ತು ವಿ.ಶ್ರೀನಿವಾಸ್ ಪ್ರಸಾದ್ ಅವರ ನಿರ್ಗಮನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಬಡವಾಗಿದೆ. ಇನ್ನು ವಿಶ್ವನಾಥ್ ನಿರ್ಗಮನ ಕರ್ನಾಟಕದಲ್ಲಿ ಕಾಂಗ್ರೆಸ್ ಅವಸಾನದಂಚಿಗೆ ಇಳಿಯುತ್ತಿರುವಂತೆ ಕಾಣಿಸುತ್ತಿದೆ.[ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?]
ಹಳೇ ಮೈಸೂರು ಪ್ರಾಂತ್ಯದ ಜನಪ್ರಿಯ ನಾಯಕ ವಿಶ್ವನಾಥ್ ಜೆಡಿಎಸ್ ಸೇರುವ ವದಂತಿ ದಟ್ಟವಾಗುತ್ತಿದೆಯಾದರೂ ನಾನು ಜೆಡಿಎಸ್ ವರಿಷ್ಠರನ್ನು ಇನ್ನೂ ಭೇಟಿಯಾಗಿಲ್ಲ. ನನ್ನ ಮೇಲಿನ ಅಭಿಮಾನದಿಂದ ಸಂಸದ ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್ ಹಾಗೆ ಹೇಳುತ್ತಿದ್ದಾರೆ ಎಂದಿದ್ದಾರೆ.[ಒಬ್ಬರ ಹಿಂದೊಬ್ಬರಂತೆ ಕಾಂಗ್ರೆಸ್ ತೊರೆಯುತ್ತಿರುವವರು]
ಸಿದ್ದರಾಮಯ್ಯ ಕುರಿತು ಅಸಮಾಧಾನ
ಪಕ್ಷದಲ್ಲಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಏ.19ರಂದು ಹೈಕಮಾಂಡ್ ನನ್ನ ಭೇಟಿಗೆ ಸಮಯ ನಿಗದಿ ಮಾಡಿತ್ತು. ಅದೇ ದಿನ ಸಿದ್ದರಾಮಯ್ಯನವರನ್ನೂ ಕರೆಸಿತ್ತು. ಎರಡೂ ಕ್ಷೇತ್ರಗಳ ಉಪಚುನಾವಣೆಯ ಗೆಲುವಿನಿಂದ ನಮ್ಮ ಮಾತು ಕಿವಿಗೆ ಹೋಗಲಾರದೆಂದು ತೆರಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಗೇ ಹೈಕಮಾಂಡ್ ಆಗಿದ್ದಾರೆ ಎಂದು ವಿಶ್ವನಾಥ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.[ಕಾವೇರಿ ಪಾಳೇಪಟ್ಟಿನಲ್ಲಿ ಕಳಚುತ್ತಿವೆ ಕಾಂಗ್ರೆಸ್ ಕೈ-ಕಾಲು, ಕಮಲಕ್ಕೆಷ್ಟು ಪಾಲು?]
ಮೇ 10 ರಂದು ಜೆಡಿಎಸ್ ಗೆ?
ನಂಜನಗೂಡು-ಗುಂಡಲುಪೇಟೆ ಉಪ ಚುನಾವಣಾ ಪ್ರಚಾರಕ್ಕೂ ನನ್ನ ಕರೆದಿರಲಿಲ್ಲ. ಆದರೂ ನಾನೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಜನರ ಜತೆ ಬೆಳೆದ ನಮ್ಮಂಥಹವರಿಗೆ ಕನಿಷ್ಠ ಗೌರವ ನೀಡಿ, ಪಕ್ಷದ ನಿಷ್ಠಾವಂತರನ್ನು ಕಳೆದುಕೊಂಡರೆ ಅದು ಪಕ್ಷಕ್ಕೆ ಆಗುವ ನಷ್ಟ ಎಂದು ಪಕ್ಷ ತೊರೆಯುವ ಸೂಚನೆಯನ್ನು ಅಂದೇ ನೀಡಿದ್ದ ವಿಶ್ವನಾಥ್, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಮೇ.10ರಂದು ಜೆಡಿಎಸ್ ಸೇರಲಿದ್ದಾರೆ ಎಂಬ ಮಾಹಿತಿಯೂ ಲಭಿಸಿದೆ.
ಜೆಡಿಎಸ್ ಗೆ ಆನೆಬಲ
2018ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಕಾಂಗ್ರೆಸ್ ಗೆ ವಿಶ್ವನಾಥ್ ನಿರ್ಗಮನವಂತೂ ಭರಿಸಲಾಗದ ಹೊಡೆತ ಎಂಬುದರಲ್ಲಿ ಎರಡು ಮಾತೇ ಇಲ್ಲ. ಇವರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿರುವುದರಿಂದ ಕಾಂಗ್ರೆಸ್ ಗೆ ಪೆಟ್ಟು ಬಿದ್ದಿದ್ದರೆ ಅತ್ತ ರಾಜ್ಯದಲ್ಲಿ ಪ್ರಭಾವಿ ಕುರುಬ ನಾಯಕರಾಗಿರುವ ವಿಶ್ವನಾಥ್ ಅವರ ಸೇರ್ಪಡೆಯಿಂದ ಜೆಡಿಎಸ್ ಗೆ ಆನೆಬಲ ಬಂದತಾಗುತ್ತಿರುವುದು ನಿಜ.
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬರುವಲ್ಲಿ ವಿಶ್ವನಾಥ್ ಪಾತ್ರ
ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತರುವಲ್ಲೂ ಕೂಡ ವಿಶ್ವನಾಥ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಈಗ ಇತಿಹಾಸ. ಇದಲ್ಲದೆ ಕುರುಬ ಸಮುದಾಯವನ್ನು ಒಗ್ಗೂಡಿಸಿ ಕಾಗಿನೆಲೆ ಗುರುಪೀಠದ ಸ್ಥಾಪನೆಯಲ್ಲೂ ಇವರ ಪ್ರಮುಖ ಪಾತ್ರವಿತ್ತು.
ರಾಜಕಾರಣದ ನಡುವೆ ಸಾಹಿತ್ಯ ಪ್ರೇಮ
ಬಿಡುವಿರದ ತಮ್ಮ ರಾಜಕೀಯ ಚಟುವಟಿಕೆಗಳ ನಡುವೆಯೂ 'ಹಾಡುವ ಹಕ್ಕಿ' ಅಂತಹ ಕೃತಿ ರಚನೆ ಮಾಡಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದ ವಿಶ್ವನಾಥ್ ತೀಕ್ಷ್ಣ ಮತ್ತು ಮೊನಚು ಮಾತುಗಳಿಗೆ ವಿಶ್ವನಾಥ್ ಹೆಸರಾದವರು.
ಜಾತ್ಯತೀತ ಶಕ್ತಿ ಬಲಪಡಿಸಲು ಜೆಡಿಎಸ್ ಸೇರ್ಪಡೆ
ಜಾತ್ಯತೀತ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರು ಜೆಡಿಎಸ್ ಸೇರುತ್ತಿದ್ದು , ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಜನರಲ್ಲಿ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಯ ಕುರಿತಂತೆ ಜಾಗೃತಿ ಮೂಡಿಸಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಇದರೊಂದಿಗೆ ವಿಶ್ವನಾಥ್, ರಾಜ್ಯದಲ್ಲಿ ಕಾಂಗ್ರೆಸ್ ನ ದುರಾಡಳಿತದ ಬಗ್ಗೆಯೂ ಜನರಿಗೆ ಮನವರಿಕೆಮಾಡಿಕೊಡಲಿದ್ದಾರೆ ಎನ್ನಲಾಗಿದೆ.