ಎಚ್.ವಿಶ್ವನಾಥ್ ಪುತ್ರ ಅಮಿತ್ ಸ್ಥಾನಕ್ಕೂ ಬಂತು ಕುತ್ತು!
ಮೈಸೂರು, ಜುಲೈ 31: 'ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕು ಭೇರ್ಯ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ, ಮಾಜಿ ಸಂಸದ ಅಡಗೂರು ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರೂ ಜೆಡಿಎಸ್ ನೊಡನೆ ಗುರುತಿಸಿಕೊಂಡು ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಹೀಗಾಗಿ ಅವರು ಕೂಡಲೇ ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ ಒತ್ತಾಯಿಸಿದರು.
ಸಿದ್ದರಾಮಯ್ಯ ವಚನ ಭ್ರಷ್ಟ: ಮಡಿಕೇರಿಯಲ್ಲಿ ವಿಶ್ವನಾಥ್ ವಾಗ್ದಾಳಿ
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ದೇವರಹಟ್ಟಿ ಅವರು ಜಿಪಂ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರೂ ಕಳೆದ ಹಲವಾರು ದಿನಗಳಿಂದ ಕೆ.ಆರ್.ನಗರದ ಜಾ.ದಳ ಶಾಸಕರೊಡನೆ ಸಂಪರ್ಕ ಇಟ್ಟುಕೊಂಡು, ಆ ಪಕ್ಷದ ಬಹಿರಂಗ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ತಂದೆ ಎಚ್.ವಿಶ್ವನಾಥ್ ಅವರ ಪರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜಾ.ದಳವನ್ನು ಅಧಿಕಾರಕ್ಕೆ ತನ್ನಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳೇ ತಮಗೆ ಶ್ರೀ ರಕ್ಷೆ ಎಂದು ಹೇಳಿಗೆದ್ದರು. ಈಗ ಮತ ನೀಡಿದವರಿಗೆ ಕೈಕೊಟ್ಟು ಜಾ.ದಳವನ್ನು ಅಪ್ಪಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಹದೇವ ಪ್ರಶ್ನಿಸಿದರು.
ಎಚ್.ವಿಶ್ವನಾಥ್ ಅವರು ತಮ್ಮ ಜತೆ ಕಾಂಗ್ರೆಸ್ ಪಕ್ಷದಿಂದ 10 ಪುರಸಭೆ ಸದಸ್ಯರೂ ಕಾಂಗ್ರೆಸ್ ತೊರೆದು ಜಾ.ದಳವನ್ನು ಸೇರಿದ್ದಾರೆ ಎಂದು ಬೆಂಗಳೂರಿನ ಜಾ.ದಳ ಕಚೇರಿಯಲ್ಲಿ ಘೋಷಣೆ ಮಾಡಿದ್ದಾರೆ. ಅದರಂತೆ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜಾ.ದಳ ಸೇರಿದ್ದಾರೆ. ವಿಶ್ವನಾಥ್ ಅವರು ಈ ಸದಸ್ಯರ ಸದಸ್ಯತ್ವ ಸ್ಥಾನಗಳಿಗೆ ರಾಜೀನಾಮೆ ನೀಡಿಸಿ ಚುನಾವಣೆಯಲ್ಲಿ ಜಾ.ದಳದಿಂದ ಗೆಲ್ಲಿಸಲಿ ನೋಡೋಣ ಎಂದು ಸವಾಲು ಹಾಕಿದರು.