ಮೈಸೂರು: ಬೀದಿ ನಾಯಿಗಳಿಗೆ ಹೆದರಿ ಮರವೇರಿ ಕುಳಿತ ಚಿರತೆ
ಮೈಸೂರು, ಜೂನ್ 2 : ಬೀದಿ ನಾಯಿಗಳನ್ನು ಭೇಟೆಯಾಡಲು ಬಂದು ನಾಯಿಗಳಿಗೇ ಹೆದರಿ ಮರವೇರಿ ಕುಳಿತ ಚಿರತೆಯನ್ನು ಮೈಸೂರಿನ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿದ್ದಾರೆ.
ರಾಮನಗರದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ ಚಿರತೆಗಳ ಅಟ್ಟಹಾಸ
ಹುಣಸೂರಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಚಿರತೆಯನ್ನು ನೋಡಿದ ನಾಯಿಗಳು ಚಿರತೆಯನ್ನು ಅಟ್ಟಿಸಿಕೊಂಡು ಬಂದಿದೆ. ಗ್ರಾಮದ ಪಕ್ಕದಲ್ಲೇ ಇರುವ ನಾಗೇಗೌಡರ ಜಮೀನಿನ ಬಳಿ ಬೀದಿ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನೇ ನಾಲ್ಕು ನಾಯಿಗಳು ಅಟ್ಟಾಡಿಸಿವೆ. ಈ ವೇಳೆ ನಾಯಿಗಳಿಗೆ ಬೆದರಿದ ಚಿರತೆಯು ಮರವೇರಿ ಕುಳಿತಿತ್ತು. ಈ ಬಗ್ಗೆ ಸ್ಥಳಿಯರು ಅರಣ್ಯ ಅಧಿಕಾರಿಗಳಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ಆಧಾರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಜೀವಂತವಾಗಿ ಸೆರೆ ಹಿಡಿದರು. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು .ಗ್ರಾಮದಲ್ಲಿ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸ್ವಲ್ಪ ಗಲಿಬಿಲಿಯ ವಾತಾವರಣ ನಿರ್ಮಾಣವಾಗಿತ್ತು.