ಹಿರೀಕ್ಯಾತನಹಳ್ಳಿಯಲ್ಲಿ ಬ್ಯಾರನ್ ಗೆ ಬೆಂಕಿ: ತಪ್ಪಿದ ಅನಾಹುತ
ಮೈಸೂರು, ಆಗಸ್ಟ್ 30: ತಂಬಾಕು ಹದ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ, ಇಡೀ ಬ್ಯಾರನ್ ಸುಟ್ಟು ನಾಶವಾದ ಘಟನೆ ಮಂಗಳವಾರ ಹುಣಸೂರಿನ ಗಾವಡಗೆರೆ ಹೋಬಳಿ ಹಿರೀಕ್ಯಾತನಹಳ್ಳಿಯಲ್ಲಿ ನಡೆದಿದೆ. ಸಕಾಲದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಪಕ್ಕದ ಮನೆಗಳಿಗೆ ಹರಡಿ ಆಗುತ್ತಿದ್ದ ಭಾರೀ ಅನಾಹುತ ತಪ್ಪಿದೆ.
ಹಿರೀಕ್ಯಾತನಹಳ್ಳಿ ಗ್ರಾಮದ ನಿವಾಸಿ ಸ್ವಾಮಿನಾಯಕ ಎಂಬುವರು ತಂಬಾಕು ಕೃಷಿ ಮಾಡಿದ್ದು, ಎಲೆಗಳನ್ನು ತಂದು ಒಂದೇ ಸಮವಾಗಿ ಜೋಡಿಸಿ, ಹದ ಮಾಡಲು ಗ್ರಾಮದ ಹೈಸ್ಕೂಲ್ ಬಳಿಯಿರುವ ಬ್ಯಾರನ್ ಗೆ ಹಾಕಿದ್ದರು. ಹದವಾದ ಬೆಂಕಿಯಲ್ಲಿ ಸೊಪ್ಪು ಬೇಯುತ್ತಿತ್ತು. ಆದರೆ ಬೆಂಕಿಯ ಕಿಡಿ ಬ್ಯಾರನ್ ಕಟ್ಟಡ ಛಾವಣಿಗೆ ತಗುಲಿದ ಪರಿಣಾಮ ಬೆಂಕಿ ಹೊತ್ತಿ ಉರಿಯತೊಡಗಿದೆ.[ಕಲ್ಲು ಎತ್ತಿ ಹಾಕಿ ಮೈಸೂರಿನ ಕುಖ್ಯಾತ ರೌಡಿಶೀಟರ್ ಹತ್ಯೆ]
ಇದ್ದಕ್ಕಿದ್ದಂತೆ ಬ್ಯಾರನ್ ನಿಂದ ಬೆಂಕಿ ಬಂದಿದ್ದರಿಂದ ಎಚ್ಚೆತ್ತುಕೊಂಡು ಹತ್ತಿರ ಬಂದು ನೋಡಿದಾಗ ಉರಿಯುತ್ತಿರುವುದು ಕಂಡಿದೆ. ಕೂಡಲೇ ಬೆಂಕಿ ನಂದಿಸುವ ಕಾರ್ಯವನ್ನು ಸ್ಥಳೀಯರು ಮಾಡಿದ್ದಾರಾದರೂ ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಹುಣಸೂರಿನ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ.[ವಿದ್ಯಾಶ್ರೀ ಯೋಜನೆಗೆ ಸುತ್ತೂರು ರಾಜೇಂದ್ರ ಶ್ರೀ ಪ್ರೇರಣೆ: ಸಿಎಂ]
ಆದರೆ, ಅಷ್ಟರಲ್ಲೇ ಬ್ಯಾರನ್ ನಲ್ಲಿ ಹದ ಮಾಡಲು ಹಾಕಿದ್ದ ತಂಬಾಕು ನಾಶವಾಗಿ ಹೋಗಿತ್ತು. ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಕಾಲದಲ್ಲಿ ಬಂದಿದ್ದರಿಂದ ಬೆಂಕಿ ಅಕ್ಕಪಕ್ಕದ ಮನೆಗಳಿಗೆ ಆವರಿಸಿ, ಆಗುತ್ತಿದ್ದ ಭಾರೀ ಅನಾಹುತ ತಪ್ಪಿದೆ.