ವಿದ್ಯುತ್ ತಂತಿ ತುಳಿದು ತಂದೆ- ಮಗ ಸಾವು: ಕಪಿಲಾ ನದಿಯಲ್ಲಿ ಶವಗಳು ಪತ್ತೆ
ಮೈಸೂರು, ಜೂನ್ 11 : ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ಜಮೀನಿನಲ್ಲಿ ಹಾಕಿದ್ದ ವಿದ್ಯುತ್ ಬೇಲಿ ತುಳಿದು ಅಪ್ಪ-ಮಗ ಮೃತಪಟ್ಟ ಘಟನೆ ಕೂಸೇ ಗೌಡನ ಹುಂಡಿಯಲ್ಲಿ ನಡೆದಿದ್ದು, ಭಯಗೊಂಡ ಜಮೀನಿನ ಮಾಲೀಕರು ಶವಗಳನ್ನು ಕಪಿಲಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.
ತಾಲೂಕಿನ ಆನಗಟ್ಟಿ ಹಾಡಿಯ ಆದಿವಾಸಿಗಳಾದ ಮಾದ (45) ಪ್ರವೀಣ್ (19) ಸಾವನ್ನಪ್ಪಿದವರು. ಆನಗಟ್ಟಿ ಹಾಡಿಯ ಮಾದ, ಪ್ರವೀಣ್ ಹಾಗೂ ಮರಿಯಪ್ಪ ಶುಕ್ರವಾರ ಕೂಸೇಗೌಡನ ಹುಂಡಿಯ ಸಮೀಪ ರೈತರ ಜಮೀನುಗಳಲ್ಲಿ ಜೇನುತುಪ್ಪ ಕಿತ್ತುಕೊಂಡು ಬರುತ್ತಿದ್ದಾಗ ಮರಗೆಣಸು ಹೊಲದ ಬೇಲಿ ದಾಟಿದ್ದಾರೆ.
ಬೆಂಗಳೂರು: ಕಾರಿನಲ್ಲಿ ಉಸಿರುಗಟ್ಟಿ ಮೃತರಾದ ಜೋಡಿ
ಮೊದಲು ಹೋದ ಮಾದ ಮತ್ತು ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಮರಿಯಪ್ಪ ಹೆದರಿ ಪರಾರಿಯಾಗಿದ್ದಾರೆ.
ಶನಿವಾರ ಹಾಡಿಯ ಮುಖಂಡರು ಮರಿಯಪ್ಪನ ಜೊತೆ ಜಮೀನಿನ ಮಾಲೀಕ ಮರಿಗೌಡರ ಬಳಿ ವಿಚಾರಿಸಿದಾಗ ಇಲ್ಲಿ ಏನೂ ನಡೆದಿಲ್ಲ, ಯಾರೂ ಸತ್ತಿಲ್ಲ ಎಂದು ಉತ್ತರಿಸಿದ್ದಾರೆ. ಭಾನುವಾರ ಬೆಳಗ್ಗೆ ತಾಲೂಕಿನ ತುಂಬಸೋಗೆ ಗ್ರಾಮದ ಬಳಿಯ ಕಪಿಲಾ ನದಿಯಲ್ಲಿ ಮಾದ ಮತ್ತು ಪ್ರವೀಣನ ಮೃತದೇಹಗಳು ಪತ್ತೆಯಾಗಿವೆ.
ಇವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ನಂತರ ಚೀಲದೊಳಗೆ ಹಾಕಿಕೊಂಡು ತಂದು ನದಿಗೆ ಬಿಸಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಿಯಪ್ಪ ನೀಡಿದ ದೂರಿನ ಮೇಲೆ ಎಸ್ಐ ಅಶೋಕ್ ಮತ್ತು ಸಿಪಿಐ ಹರೀಶ್ ಅವರು ಜಮೀನಿನ ಮಾಲೀಕರಾದ ಮರೀಗೌಡ ಮತ್ತು ನಿಜಲಿಂಗಪ್ಪ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.