ನೀರು ಸ್ಥಗಿತ ವಿರೋಧಿಸಿ ತಿ.ನರಸೀಪುರದಲ್ಲಿ ರೈತರಿಂದ ರಸ್ತೆ ತಡೆ
ಮೈಸೂರು, ಸೆಪ್ಟೆಂಬರ್ 1: ಈಗಾಗಲೇ ಕಬಿನಿ ಮತ್ತು ಕೆಆರ್ಎಸ್ ನಿಂದ ನಾಲೆಗೆ ಬಿಟ್ಟ ನೀರನ್ನು ನಂಬಿ, ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ರೈತರು ಬುಧವಾರದಿಂದ ನೀರನ್ನು ಸ್ಥಗಿತಗೊಳಿಸಿದ್ದಕ್ಕೆ ಕಂಗಾಲಾಗಿದ್ದಾರೆ. ಸರ್ಕಾರದ ಕ್ರಮವನ್ನು ಖಂಡಿಸಿ, ರೈತರು ತಿ.ನರಸೀಪುರದಲ್ಲಿ ಗುರುವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಪ್ರಗತಿಯಲ್ಲಿರುವಾಗಲೇ ಕಾವೇರಿ ಮತ್ತು ಕಬಿನಿ ನಾಲೆಗಳಿಗೆ ನೀರನ್ನು ಸ್ಥಗಿತಗೊಳಿಸಿದ್ದರಿಂದ ಆಕ್ರೋಶಗೊಂಡ ರೈತರು, ಹಳೇ ತಿರುಮಕೂಡಲಿನ ಬಳಿಯಿರುವ ರಾಷ್ಟ್ರೀಯ ಹೆದ್ಧಾರಿ 212ರ ಜಂಕ್ಷನ್ ಮೈಸೂರು ಮುಖ್ಯ ರಸ್ತೆಯಲ್ಲಿ ಜಮಾವಣೆಗೊಂಡು, ರಾಜ್ಯ ಸರ್ಕಾರ ಹಾಗೂ ನೀರಾವರಿ ನಿಗಮಗಳ ಕ್ರಮವನ್ನು ತೀವ್ರವಾಗಿ ಖಂಡಿಸಿ, ವಾಹನ ಸಂಚಾರಕ್ಕೆ ತಡೆಯೊಡ್ಡಿದರು.[ಶ್ರೀರಂಗಪಟ್ಟಣ ಸಿಡಿಎಸ್ ನಾಲಾ ಏರಿ ಕಳಪೆ ಸಾಬೀತು!]
ಜಲಾಶಯದಲ್ಲಿ ಲಭ್ಯವಿರುವ ನೀರನ್ನು ರೈತರಿಗೆ ಮುಂಗಾರು ಕೃಷಿಗೆ ನೀಡದೆ ನೆರೆಯ ತಮಿಳುನಾಡಿಗೆ ನದಿಯ ಮೂಲಕ ಹರಿಸುತ್ತಿದ್ದು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಕಿಡಿ ಕಾರಿದ ರೈತರು, ಸಂಸತ್ತಿನಲ್ಲಿ ಧ್ವನಿಯೆತ್ತದ ಸಂಸದರ ವಿರುದ್ಧವೂ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ, ತಮಿಳುನಾಡಿಗೆ ನೀರು ಬಿಡಲ್ಲ ಎನ್ನುವ ಹೇಳಿಕೆಯನ್ನು ನೀಡುವ ಮುಖ್ಯಮಂತ್ರಿಗಳು, ತಾಲೂಕಿನಾದ್ಯಂತ ಮುಂಗಾರು ಬಿತ್ತನೆ ನಡೆಯುತ್ತಿರುವಾಗಲೇ ನಾಲೆಗಳಲ್ಲಿ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಿ, ತಮಿಳುನಾಡಿಗೆ ನೀರು ಹರಿಸುವ ಮೂಲಕ ಅಧಿಕಾರ ನೀಡಿದ ರೈತರನ್ನು ಬಲಿ ಕೊಡುತ್ತಿದ್ದಾರೆ ಎಂದರು.[ಕಬಿನಿಯಲ್ಲಿ ಮುಳುಗಿದ ದೇಗುಲಗಳ ಬಗ್ಗೆ ಗೊತ್ತಾ?]
ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿದ್ದರೆ ಕೂಡಲೇ ತಮಿಳುನಾಡಿಗೆ ಬಿಡುವ ನೀರನ್ನು ನಿಲ್ಲಿಸಿ, ಅದೇ ನೀರನ್ನು ನಾಲೆಗಳಿಗೆ ಹರಿಸಬೇಕು. ಅಲ್ಲಿಯವರೆಗೂ ಅನ್ನದಾತರಾದ ರೈತರ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಿಂದಾಗಿ ಸುಮಾರು ಒಂದು ತಾಸು ಮೈಸೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರ ನಡುವಿನ ಸಂಚಾರ ಅಸ್ತವ್ಯಸ್ತವಾಗಿತ್ತು. ಸಿಪಿಐ ಮನೋಜ್ ಕುಮಾರ್, ಪಿಎಸ್ಐಗಳಾದ ಬಿ.ಎಸ್.ರವಿಶಂಕರ್, ನಂದೀಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.