ಮೈಸೂರು ನಾಲೆಗಳಿಗೆ ನೀರು ಬಿಡದ ಅಧಿಕಾರಿಗಳು: ರೈತರ ಆಕ್ರೋಶ
ಮೈಸೂರು, ಜುಲೈ 11: ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುವಂತೆ ನಿನ್ನೆ ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಆದರೆ ದುರಂತವೆಂದರೆ ಮೈಸೂರು ಭಾಗದ ನಾಲೆಗಳಿಗೆ ನೀರು ಹರಿಸದೇ, ತಮಿಳುನಾಡಿಗೆ ನೀರು ಹರಿಸುತ್ತಿರುವುದು ಇಲ್ಲಿನ ಅನ್ನದಾತರಿಗೆ ಬೇಸರ ತರಿಸಿದೆ.
"ಇಳೆ ತಂಪೆರೆಯುವಂತೆ ಮಳೆ ಬಂದರೂ ನಮ್ಮ ಬೆಳೆಗಳಿಗೆ ನೀರು ಹರಿಸದೇ ಇರುವುದು ಖೇದಕರ. ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಯಿಂದ ಉತ್ತಮ ಇಳುವರಿ ಲಭಿಸಬೇಕೆಂದರೆ ಕಬಿನಿ ಜಲಾಶಯದ ನಾಲೆಗಳಿಗೆ ಜುಲೈ 15ರೊಳಗೆ ನೀರು ಹರಿಸಬೇಕು" ಎಂಬುದು ರೈತರ ಒತ್ತಾಯ.
ಕಬಿನಿ ಒಳಹರಿವು ಹೆಚ್ಚಳ: ನೀರನ್ನು ನೋಡಲು ಹರಿದುಬಂದ ಪ್ರವಾಸಿಗರ ದಂಡು
ಆದರೆ, ಸಂಬಂಧಪಟ್ಟ ಅಧಿಕಾರಿಗಳು ಜುಲೈ 20ರಿಂದ ನೀರು ಬಿಡಬಹುದು ಎಂಬ ಆಲೋಚನೆಯಲ್ಲಿ ಮುಳುಗಿದ್ದಾರೆ. ಕಬಿನಿ ಅಣೆಕಟ್ಟೆ ಭರ್ತಿಯಾಗಿದೆ. ಹಾಗಾಗಿ ಅತಿ ಶೀಘ್ರದಲ್ಲಿ ಕಬಿನಿ ನಾಲೆಗಳಿಗೆ ನೀರು ಹರಿಸಬೇಕು ಎಂದು ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಇತ್ತೀಚೆಗೆ ನಗರದ ಕಾಡಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜುಲೈ 15ಕ್ಕಿಂತ ತಡವಾಗಿ ನಾಲೆಗಳಿಗೆ ನೀರು ಹರಿಸಿದರೆ ಭತ್ತದ ಇಳುವರಿ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ ಎಂಬುದು ರೈತರ ಆತಂಕ.
ಈಗಾಗಲೇ ಕಬಿನಿಯ ಬಲದಂಡೆ ನಾಲೆಗಳಿಗೆ ನೀರು ಬಿಡಲಾಗಿದೆ. ಆದರೆ, ಅದು ಕೆರೆಕಟ್ಟೆಗಳಿಗೆ ಮಾತ್ರ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂಗಾರು ಮಳೆ ಸುರಿಯುತ್ತಿದ್ದು, ಜಿಲ್ಲೆಯ ಕಬಿನಿ ಮತ್ತು ಪಕ್ಕದ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ.
ಈ ಹಿನ್ನೆಲೆಯಲ್ಲಿ ಉಭಯ ಅಣೆಕಟ್ಟೆಗಳ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಅಂತರ್ಜಲ ಹೆಚ್ಚಳದ ಜಲಮೂಲಗಳಾದ ಕೆರೆ-ಕಟ್ಟೆಗಳನ್ನು ತುಂಬಿಸುವುದಕ್ಕಾಗಿ ನೀರು ಹರಿಸಲಾಗುತ್ತಿದೆ.
ಕಬಿನಿ ಜಲಾಶಯ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಅಲ್ಪಭಾಗ, ನಂಜನಗೂಡು, ತಿ.ನರಸೀಪುರ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಹಸ್ರಾರು ಎಕರೆಗೆ ನೀರುಣಿಸುತ್ತದೆ. ಈ ಭಾಗದಲ್ಲಿ ಭತ್ತದ ಬೆಳೆಯೇ ಪ್ರಧಾನ.
ಪ್ರಸ್ತುತ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ವ್ಯಾಪ್ತಿಯ 2.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ರಾಗಿ, ನೆಲಗಡಲೆ, ಹೆಸರು, ಉದ್ದು ಇತ್ಯಾದಿ ದ್ವಿದಳ ಧಾನ್ಯಗಳನ್ನು ರೈತರು ಬಿತ್ತನೆ ಮಾಡಿದ್ದಾರೆ.
ಆಗಸ್ಟ್ ಅಥವಾ ಸೆಪ್ಟೆಂಬರ್ ಮಾಹೆಯಲ್ಲಿ ನದಿಗೆ ನೀರು ಹರಿಸಿದರೆ ಶೀತ ಜಾಸ್ತಿಯಾಗಿ ಭತ್ತದ ತೆನೆ ಕಾಳುಗಟ್ಟವುದು ಕಷ್ಟಸಾಧ್ಯ. ಅದರಿಂದ ಇಳುವರಿ ಪ್ರಮಾಣ ಕುಸಿಯುತ್ತದೆ ಎಂಬುದು ಕೆಲ ರೈತರ ಅಭಿಮತ. ಜುಲೈ ಮಧ್ಯಂತರದಲ್ಲಿ ನೀರು ಹರಿಸಿದರೆ ಶೇ.10ರಷ್ಟು ರೈತರಿಗೆ ತೊಂದರೆಯಾಗಬಹುದು.
ಆದರೆ, ಶೇ.90 ರೈತರಿಗೆ ಹೆಚ್ಚು ಅನುಕೂಲ ಎನ್ನಲಾಗಿದೆ. ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ ಕೆಆರ್ಎಸ್ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ 23,380 ಎಕರೆಯಲ್ಲಿ ನೆಲಗಡಲೆ, ರಾಗಿ ಮತ್ತಿತರ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯಾದ್ಯಂತ 8 ಲಕ್ಷ ಹೆಕ್ಟೇರ್ ಪದೇಶ ಬಿತ್ತನೆಯ ಪ್ರದೇಶವಿದೆ. ಆದರೆ ಹಾಲಿ 2 ರಿಂದ 3 ಲಕ್ಷ ಹೆಕ್ಟೇರ್ ಪದೇಶದ ರೈತರು ಮಾತ್ರ ಕೃಷಿಯಲ್ಲಿ ತೊಡಗಿದ್ದಾರೆ. ಉಳಿದ ಪ್ರದೇಶ ಹಾಗೇ ತೆಕ್ಕಲು ಬಿದ್ದಿದೆ. ಮಳೆ ಬಂದು ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ಇನ್ನು ಅಧಿಕಾರಿಗಳು ನೀರು ಹರಿಸದೇ ಇರುವುದು ಬೇಸರದ ಸಂಗತಿ.