ಸಾಲಮನ್ನಾ ಆಗಲಿಲ್ಲ ಎಂದು ಬೇಸತ್ತು ರೈತ ಆತ್ಮಹತ್ಯೆ?
ಮಳವಳ್ಳಿ, ಮೇ 31: ಸಾಲಮನ್ನಾ ಯೋಜನೆ ವಿಳಂಬವಾಗುತ್ತಿರುವ ಬೆನ್ನಲ್ಲೇ ಬೇಸತ್ತ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾಗನೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮಾಗನೂರು ಗ್ರಾಮದ ಬೋಗಯ್ಯನ ಹಟ್ಟಿ ಗ್ರಾಮದ ದಿ. ಗುರುಮಲ್ಲಪ್ಪನವರ ಪುತ್ರ ಲೋಕೇಶ್ (53) ಆತ್ಮಹತ್ಯೆ ಮಾಡಿಕೊಂಡ ರೈತ.
ಮಳೆಗೆ ನೆಲ ಕಚ್ಚಿದ ಬೆಳೆ : ಆರ್ಥಿಕ ಸಂಕಷ್ಟದಲ್ಲಿ ರೈತರು
ಈತ ಬೆಳೆ, ಚಿನ್ನದ ಮೇಲಿನ ಸಾಲ, ಕೈಸಾಲ, ಶಿಕ್ಷಣ ಸಾಲ ಸೇರಿದಂತೆ ಸುಮಾರು 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಿದರೆ ನನಗೆ ನೆರವಾಗಲಿದೆ ಎಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಸಾಲಮನ್ನಾ ಆಗಬಹುದೆಂದು ಕಾದ ರೈತ ಅದು ಸದ್ಯಕ್ಕೆ ಆಗುವ ಲಕ್ಷಣ ಕಂಡು ಬಾರದ ಹಿನ್ನಲೆಯಲ್ಲಿ ಜತೆಗೆ ಸಾಲಗಾರರ ಕಾಟವೂ ಹೆಚ್ಚಾಗಿದ್ದರಿಂದ ಬೇಸತ್ತು ವಿಷ ಸೇವಿಸಿದ್ದಾನೆ.
ತಕ್ಷಣ ಗ್ರಾಮದ ಮುಖಂಡರು ಈತನನ್ನು ಮಳವಳ್ಳಿ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಚಂದ್ರಮೌಳಿ, ರೆವಿನ್ಯೂ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಧರ್ಮೇಂದ್ರ, ಕೃಷಿ ಆಧಿಕಾರಿ ಎಂ.ರಮೇಶ್ ಸೇರಿದಂತೆ ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಕುರಿತು ಪರಿಶೀಲನೆ ನಡೆಸಿದ್ದಾರೆ.