ಸಾಲ ಬಾಧೆಗೆ ಬೇಸತ್ತು ಕೆಆರ್ ನಗರದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ
ಮೈಸೂರು, ಜನವರಿ 17: ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಬರದ ಹಿನ್ನೆಲೆಯಲ್ಲಿ ಬೆಳೆ ಬೆಳೆಯಲಾಗದೆ, ಸಾಲವನ್ನು ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಅ ಘಟನೆ ಮರೆಯುವ ಮುನ್ನವೇ ಬೆಳೆ ಹಾಗೂ ಕೈಸಾಲ ಮಾಡಿದ್ದ ರೈತರೊಬ್ಬರು ಜಮೀನಿನಲ್ಲಿ ಕ್ರೀಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಗೇರುದಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಿವಂಗತ ಕುನ್ನೇಗೌಡರ ಮಗ ಕೃಷ್ಣೇಗೌಡ (53) ಆತ್ಮಹತ್ಯೆಗೆ ಶರಣಾದವರು. ರೈತ ಕೃಷ್ಣೇಗೌಡ ಎರಡೂವರೆ ಎಕರೆ ಜಮೀನು ಹೊಂದಿದ್ದು, ಈಚೆಗೆ ಜಮೀನಿನಲ್ಲಿ ಎಳ್ಳು, ಅಲಸಂದೆ, ರಾಗಿ ಬೆಳೆಯಲು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಒಂದು ಲಕ್ಷ ಹಾಗೂ ಮೂರು ಲಕ್ಷ ಕೈಸಾಲ ಮಾಡಿಕೊಂಡಿದ್ದರು.[ಹತ್ತು ರುಪಾಯಿಯ ಮಕ್ಕಳಾಟಕ್ಕೆ ಬಲಿಯಾಯಿತು ಜೀವ]
ಆದರೆ, ಈ ಬಾರಿ ಮುಂಗಾರಿನಲ್ಲಿ ಮಳೆ ಕೈಕೊಟ್ಟು ಬೆಳೆದ ಬೆಳೆ ಒಣಗಿ ಫಸಲು ಬಾರದ ಕಾರಣ ಕಂಗಾಲಾಗಿದ್ದರು. ಜೀವನ ನಿರ್ವಹಣೆಯೇ ಕಷ್ಟವಾಗಿದ್ದರಿಂದ ಸಾಲ ತೀರಿಸುವುದು ಸಮಸ್ಯೆಯಾಗಿತ್ತು. ಇದರಿಂದ ಬೇಸತ್ತಿದ್ದ ಕೃಷ್ಣೇಗೌಡ ಮಂಗಳವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಕ್ರೀಮಿನಾಶಕ ಔಷಧಿ ಸೇವಿಸಿದ್ದಾರೆ.
ಆ ನಂತರ ಅಸ್ವಸ್ಥರಾಗಿ ಒದ್ದಾಡುತ್ತಿದ್ದ ಅವರನ್ನು ಕಂಡ ಗ್ರಾಮಸ್ಥರೊಬ್ಬರು ಕೂಡಲೇ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕೆ.ಆರ್.ನಗರ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಸಾಲಿಗ್ರಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.