ಮೈಸೂರು ಸ್ಪೆಷಲ್ ಅಗರಬತ್ತಿಯ ಸುವಾಸನಾಭರಿತ ಕತೆ
ಮೈಸೂರು, ಸೆಪ್ಟೆಂಬರ್ 15 : ದೇಶದ ಅಗರಬತ್ತಿ ಉದ್ಯಮಕ್ಕೆ ಮೈಸೂರಿನ ಕೊಡುಗೆ ದೊಡ್ಡದು. ಮೈಸೂರಿನ ಅಗರಬತ್ತಿಗೆ ತನ್ನದೇ ವಿಶಿಷ್ಟ ಛಾಪಿದೆ. ಬೆಂಗಳೂರು, ಮುಂಬೈನಲ್ಲಿ ತಯಾರಾಗು ವುದನ್ನೂ 'ಮೈಸೂರು ಅಗರಬತ್ತಿ' ಎಂಬ ಬ್ರ್ಯಾಂಡ್ ನಲ್ಲಿ ಮಾರುವವರಿದ್ದಾರೆ. ಅಂತಹ ಮೈಸೂರು ಅಗರಬತ್ತಿಯ ಹಿಂದಿದೆ ರೋಚಕ ಕಥೆ.
ಮೈಸೂರು ಅಗರಬತ್ತಿ ತಯಾರಿಕೆಗೆ ಬಹಳ ಪ್ರಸಿದ್ಧ. ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಂಡುಬರುತ್ತಿರುವ ಪರಿಣಾಮ ರಾಜ್ಯ, ಅಂತರರಾಜ್ಯ, ಅಲ್ಲದೆ ವಿವಿಧ ದೇಶಗಳಿಗೂ ರಫ್ತಾಗುವ ಮೈಸೂರು ಅಗರಬತ್ತಿಯ ಇತಿಹಾಸವೂ ಕುತೂಹಲಕಾರಿ.
ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ
ಮೈಸೂರಿನ ಟಿ.ಎಲ್.ಉಪಾಧ್ಯಾಯ ಹಾಗೂ ತಂಜಾವೂರಿನ ಅತ್ತಾರ್ ಖಾಸಿಂ ಸಾಹೇಬರು ಮೈಸೂರಿನ ಅಗರಬತ್ತಿ ಉದ್ಯಮದ ಮೂಲ ಪುರುಷರು. ಅವರು ಇಲ್ಲಿ ಸುಮಾರು 1885ರಲ್ಲಿ ಅಗರಬತ್ತಿ ತಯಾರಿಕೆ ಆರಂಭಿಸಿದರು. ಮೈಸೂರಿನ ಮಹಾರಾಜರು ಒಮ್ಮೆ ತಂಜಾವೂರಿಗೆ ಹೋಗಿದ್ದಾಗ ಅಲ್ಲಿ ಉರಿ ಯುತ್ತಿದ್ದ ಅಗರಬತ್ತಿ ಕಂಡು ಕುತೂಹಲ ತಾಳಿ, ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಅಗರಬತ್ತಿ ತಯಾರಿಸುತ್ತಿದ್ದ ಅತ್ತಾರ್ ಖಾಸಿಂ ಸಾಹೇಬರನ್ನು ಕಂಡು ಮೈಸೂರಿಗೆ ಬರುವಂತೆಯೂ, ಅಲ್ಲಿಯೇ ಅಗರಬತ್ತಿ ತಯಾರಿಕೆ ಉದ್ಯಮ ಆರಂಭಿಸುವಂತೆಯೂ ಆಹ್ವಾನಿಸಿದರು.ಅವರ ಕಿರಿಯ ಸೋದರ ಗುಲಾಮ್ ಅಹಮ್ಮದ್ ಸಾಹೇಬರು ಮೈಸೂರಿಗೆ ಬಂದರು.
ಆಗ ಅರಸರ, ಅರಮನೆಯಲ್ಲಿನ ವಿದ್ವಾಂಸರ ಬೇಡಿಕೆ ಮೇರೆಗಷ್ಟೇ ಸುವಾಸನೆಯ ಅಗರಬತ್ತಿ ಕಡ್ಡಿಗಳನ್ನು ತಯಾರಿಸಿಕೊಡಲಾಗುತ್ತಿತ್ತು. ಸಾರ್ವಜನಿಕವಾಗಿ ಆಗ ಮಾರಾಟ ಮಾಡಲಾಗುತ್ತಿರಲಿಲ್ಲ. ನಂತರ ಜಾಫರ್ ಅವರ ಕುಟುಂಬ ವರ್ಗದವರು, ಶಿಷ್ಯರು ಬದುಕಿನ ನಿರ್ವಹಣೆಗಾಗಿ ಅಗರಬತ್ತಿಯನ್ನು ಹೆಚ್ಚು ಹೆಚ್ಚು ತಯಾರಿಸಿ ಮಾರಾಟ ಮಾಡಲಾರಂಭಿಸಿದರು.
ಶ್ರೀಗಂಧಕ್ಕೆ ಪ್ರಸಿದ್ಧಿ ಪಡೆದಿದ್ದ ಮೈಸೂರು
ಆ ಕಾಲದಲ್ಲಿಯೇ ಶ್ರೀಗಂಧಕ್ಕಾಗಿ ಮೈಸೂರು ಬಹಳ ಪ್ರಸಿದ್ಧವಾಗಿತ್ತು. ಹೀಗಾಗಿ, ಗಂಧದ ಮರದೊಳಗಿನ ಅಂಶವನ್ನೂ ಹಾಗೂ ವಾಸನೆಯುಕ್ತ ಗಂಧದ ತೊಗಟೆಯಿಂದ ಮಾಡಿದ ಪುಡಿಯನ್ನೂ ಬೆರೆಸಿ ಕಡ್ಡಿಗಳನ್ನು ತಯಾರಿಸಿದಾಗ ಆಗರಬತ್ತಿಗೆ 'ಗಂಧದಕಡ್ಡಿ' ಎನ್ನುವ ಹೆಸರೂ ಬಂದಿತು. ಮೊದಮೊದಲು ಅರಮನೆಗೆ ಮಾತ್ರವೇ ಅವರು ಗಂಧದ ಕಡ್ಡಿಯನ್ನು ಸರಬರಾಜು ಮಾಡುತ್ತಿದ್ದರು. ಅರಸರ ಮಲಗುವ ಕೋಣೆ, ದರ್ಬಾರ್ ಹಾಲ್, ದೇವಸ್ಥಾನ, ಹಜಾರ... ಹೀಗೆ ಆಯ್ದ ಸ್ಥಳಗಳಲ್ಲಿ ಮಾತ್ರವೇ ಬಳಸಲೆಂದು ವಿಶೇಷವಾಗಿಯೇ ದರ್ಬಾರ್ ಅಗರಬತ್ತಿಗಳು ತಯಾರಾಗಿ ಬೇಡಿಕೆ ಪಡೆದುಕೊಂಡವು.
ವಾಸು ಸೈಕಲ್ ಬ್ರ್ಯಾಂಡ್ ಅಗರಬತ್ತಿ
1948ರಲ್ಲಿ ಎನ್. ರಂಗರಾವ್ ಅಂಡ್ ಸನ್ಸ್ ಸಂಸ್ಥೆ ಅಗರಬತ್ತಿ ಉತ್ಪಾದನೆಯ ಕಾರ್ಯಾರಂಭ ಮಾಡಿತು. ಮಧುರೈಯಿಂದ ಬಂದಿದ್ದ ಎನ್.ರಂಗರಾವ್ ಅವರು ಕೇವಲ ಒಂದು ಸಾವಿರ ರೂಪಾಯಿ ಬಂಡವಾಳದೊಂದಿಗೆ ತಮ್ಮ ಮಗ ವಾಸು ಹೆಸರಿನಲ್ಲಿ ವಾಸು ಸೈಕಲ್ ಬ್ರ್ಯಾಂಡ್ ಅಗರಬತ್ತಿ ತಯಾರಿಕೆ ಶುರು ಮಾಡಿದರು. ಆರಂಭದಲ್ಲಿ ಬೇರೆ ಬೇರೆ ಅಗರಬತ್ತಿ ಮಾರುತ್ತಿದ್ದ ಅವರು, ನಂತರ ಪರಿಮಳವನ್ನು ಬೆರೆಸಿದ ಕಡ್ಡಿಗಳನ್ನು ಮಾರಾಟ ಮಾಡಲಾರಂಭಿಸಿದರು. ವಾಸವಿದ್ದ ಮನೆಯನ್ನೇ ಅಗರಬತ್ತಿ ತಯಾರಿಕೆಯ ಕಾರ್ಖಾನೆಯಾಗಿ ಮಾರ್ಪಾಟು ಮಾಡಿದ್ದ ಅವರು, ನಂತರದ ವರ್ಷಗಳಲ್ಲಿ ಶ್ರಮಪಟ್ಟು ಹಂತ ಹಂತವಾಗಿ ಮೇಲೇರಿದರು.
ವಿಶ್ವವಿಖ್ಯಾತ ಮೈಸೂರು ಅರಮನೆಯ ಹಿಂದಿದೆ ಭವ್ಯ ವೈಭವ
ಅಗರಬತ್ತಿ ಕಾರ್ಖಾನೆ
ಸೈಕಲ್ ಪ್ಯೂರ್ ಅಗರಬತ್ತಿಯೊಂದಿಗೆ ರಜನಿಗಂಧ, ಮಲ್ಲಿಗೆ ಹೂವಿನ ಎಣ್ಣೆ ಹಾಗೂ ಸುಗಂಧ ತಯಾರಿಸುವ ಎನ್ಇಎಸ್ ಎಸ್ಒ ಕಂಪೆನಿಯನ್ನೂ ಪ್ರತ್ಯೇಕವಾಗಿ ಆರಂಭಿಸಿದರು. 1950ರ ದಶಕದಲ್ಲಿ 50ಕ್ಕೂ ಅಧಿಕ ಅಗರಬತ್ತಿ ಕಾರ್ಖಾನೆಗಳು ಮೈಸೂರಿನಲ್ಲಿದ್ದವು. ಮೈಸೂರಿನಲ್ಲಿ ಅಗರಬತ್ತಿಯನ್ನು ತಯಾರಿಸುವ 22 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ತುಂಬ ಹಳೆಯದಾದ ಸತ್ಯನಾರಾಯಣ ಪರಿಮಳ ಅಗರಬತ್ತಿ, ಸೈಕಲ್ ಪ್ಯೂರ್ ಅಗರಬತ್ತಿ, ಗೋಪಿಕಾ, ಅರವಿಂದ, ಮೈಸೂರು ಆನಂದ ಧೂಪ ಫ್ಯಾಕ್ಟರಿ ಪ್ರಮುಖವಾದವು.
ಮಾರುಕಟ್ಟೆಯನ್ನೂ ಆಳಿದ್ದವು!
ಇದು ಅಸಂಘಟಿತ ವಲಯದ ಉದ್ಯಮವಾಗಿರುವುದರಿಂದ ವಾರ್ಷಿಕ ವಹಿವಾಟು ಎಷ್ಟು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟದ ಮಾತೇ ಸರಿ. ಆದರೆ, ಒಂದು ಅಂದಾಜಿನ ಪ್ರಕಾರ ದೇಶದಲ್ಲಿಯ ಅಗರಬತ್ತಿ ತಯಾರಿಕೆ ಉದ್ಯಮದ ವಾರ್ಷಿಕ ವಹಿವಾಟು ರೂ. 2,500 ಕೋಟಿಗಳಿಂದ ರೂ. 3 ಸಾವಿರ ಕೋಟಿಗಳವರೆಗೂ ಇದೆ. ಇದರಲ್ಲಿ ಈ ಹಿಂದೆ ಶೇ 70ರಷ್ಟು ಮಾರುಕಟ್ಟೆ ಪಾಲನ್ನು ರಾಜ್ಯದಲ್ಲಿನ ಅಗರಬತ್ತಿ ಸಂಸ್ಥೆಗಳೇ ಗಳಿಸಿಕೊಂಡಿದ್ದವು. ಈಗ ರಾಜ್ಯದ ಮಾರುಕಟ್ಟೆ ಪಾಲು ಶೇ 50ಕ್ಕೆ ಇಳಿದಿದೆ. ಮೈಸೂರಿನ ಘಟಕಗಳಿಂದಲೇ ವಾರ್ಷಿಕ ರೂ. 600 ಕೋಟಿಗಳಷ್ಟು ವಹಿವಾಟು ನಡೆಯುತ್ತಿದೆ.
ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ಸಹೃದಯಿ ವೀಳೆಯದೆಲೆ!
ಉದ್ಯೋಗಾವಕಾಶ ನೀಡಿದ ಅಗರಬತ್ತಿ
ಅಗರಬತ್ತಿ ಪ್ಯಾಕಿಂಗ್ ಮಾಡಲು ಮೈಸೂರಲ್ಲಿ 500ರಿಂದ 700 ಕಾರ್ಮಿಕರು ನಿತ್ಯ ದುಡಿಯುತ್ತಿದ್ದಾರೆ. ಇವರಲ್ಲಿ ಮೈಸೂರು ಜಿಲ್ಲಾ ಕಾರಾಗೃಹದಲ್ಲಿರುವ 40 ಪುರುಷ ಹಾಗೂ 30 ಮಹಿಳಾ ಕೈದಿಗಳೂ ಸೇರಿದ್ದಾರೆ. ನ್ನು ಮೈಸೂರಿನ ಅಗರಬತ್ತಿ ವಿದೇಶಕ್ಕೂ ರಫ್ತಾಗುತ್ತಿವೆ. ಅಮೆರಿಕ, ಆಫ್ರಿಕಾ, ಕೊಲ್ಲಿ ರಾಷ್ಟ್ರಗಳು, ಸಿಂಗಪುರ, ಮಲೆಷ್ಯಾ, ಥಾಯ್ಲೆಂಡ್ ಮೊದಲಾದ ದೇಶಗಳಿಗೆ ನಿರಂತರವಾಗಿ ರಫ್ತಾಗುತ್ತಿವೆ. ಹೀಗೆ, ಶ್ರೀಗಂಧವನ್ನು ಅಗರಬತ್ತಿಯನ್ನಾಗಿ ಪರಿವರ್ತಿಸಿದ್ದು ಮೈಸೂರಿನ ಹಿರಿಮೆಗಳಲ್ಲೊಂದು. ಅಗರಬತ್ತಿ ಮೈಸೂರು ಪರಂಪರೆಗೆ ಸೇರಿದ್ದೂ ಅಗ್ಗಳಿಕೆ. ಹಬ್ಬ, ಹರಿದಿನಗಳಲ್ಲಿ ಮಾತ್ರವೇ ಬಳಕೆಯಾಗುತ್ತಿದ್ದ ಅಗರಬತ್ತಿ, ಈಗ ನಿತ್ಯ ಬಳಕೆ ಸಾಮಗ್ರಿಯಾಗಿದೆ.
ನಂಜನಗೂಡು ಹಲ್ಲಿನ ಪುಡಿ ಯಾರಿಗೆ ಗೊತ್ತಿಲ್ಲ ಹೇಳಿ?
ಬಿ.ವಿ. ಪಂಡಿತರ ನಂಜನಗೂಡಿನ ಹಲ್ಲಿನಪುಡಿಗೆ ಈಗ 104 ವರ್ಷಗಳು. ಈಗಲೂ ಜನಪ್ರಿಯವಾಗಿರುವ ನಂಜನಗೂಡಿನ ಹಲ್ಲಿನಪುಡಿ ಸದ್ಯ 5 ರೂಪಾಯಿಗೆ ಮಾರಾಟವಾಗುತ್ತಿದೆ. ಪಂಡಿತರು ನಂಜನಗೂಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೋಮ ನಡೆದ ನಂತರ ಹೋಮದಲ್ಲಿ ಬಂದ ಬೂದಿಯನ್ನು ಕಂಡು ಹಲ್ಲಿನಪುಡಿಯಾಗಿ ತಯಾರಿಸಬಹುದು ಎಂದು ನಿರ್ಧರಿಸಿದರು. ನಂತರ ಭತ್ತದ ಹೊಟ್ಟನ್ನು ತರಿಸಿ ಅದನ್ನು ಬೂದಿ ಮಾಡಿದ ನಂತರ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಹಲ್ಲಿನಪುಡಿ ಸಿದ್ಧಗೊಳಿಸಿದರು. ಹೀಗೆ 1913 ಇಸವಿಯ ಫೆಬ್ರುವರಿ ತಿಂಗಳಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದಲ್ಲಿಯ ತಮ್ಮ ನಿವಾಸದಲ್ಲಿ ಹಲ್ಲಿನಪುಡಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಇದು ರಾಜ್ಯದಾದ್ಯಂತ ಅಲ್ಲದೇ ನೆರೆಯ ರಾಜ್ಯಗಳಲ್ಲೂ ಪ್ರಸಿದ್ಧವಾಯಿತು, ದಿನ ಕಳೆದಂತೆ ವಿದೇಶಗಳಲ್ಲೂ ಪ್ರಸಿದ್ಧವಾಯಿತು ಮತ್ತು ಬೇಡಿಕೆಯೂ ಹೆಚ್ಚಾಯಿತು.
ಶತಮಾನಗಳ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್
ಆಯುರ್ವೇದ ಔಷಧ ಮಾರ್ಕೇಟ್
ಇದರೊಂದಿಗೆ ಸದ್ವೈದ್ಯ ಶಾಲಾ ಪ್ರೈವೇಟ್ ಲಿಮಿಟೆಡ್ ಎಂದು ಕಂಪೆನಿ ಕಟ್ಟಿ ಆಯುರ್ವೇದ ಔಷಧಿ ತಯಾರಿಕೆ ಹಾಗೂ ಮಾರಾಟ ಕೈಗೊಂಡರು. 1975ರಲ್ಲಿ ಬಿ.ವಿ. ಪಂಡಿತರು ವಿಧಿವಶರಾದ ನಂತರ ಅವರ ಪುತ್ರರು ಹಲ್ಲಿನಪುಡಿ ಉದ್ಯಮವನ್ನು ಮುಂದುವರಿಸಿದರು. ಎಂಬತ್ತರ ದಶಕದವರೆಗೆ ಪ್ರಸಿದ್ಧವಾಗಿದ್ದ ಹಲ್ಲಿನಪುಡಿ, ಟೂತ್ ಪೇಸ್ಟ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಪರಿಣಾಮ ನಿಧಾನವಾಗಿ ಬೇಡಿಕೆ ಕುಸಿಯಿತು. ಅಲ್ಲಿಯತನಕ ತಿಂಗಳಿಗೆ 10 ಲಕ್ಷ ಪ್ಯಾಕೆಟುಗಳು ಮಾರಾಟವಾಗುತ್ತಿದ್ದುದು ಇಂದಿನ ದಿನಗಳಲ್ಲಿ ಕೇವಲ 1 ಲಕ್ಷ ಪ್ಯಾಕೆಟುಗಳು ಮಾತ್ರ ಮಾರಾಟವಾಗುತ್ತಿವೆ.
ಹಲ್ಲಿನ ಸುರಕ್ಷತೆಗೆ ಹೇಳಿಮಾಡಿಸಿದ್ದು
ಈಗಲೂ ಭತ್ತದ ಹೊಟ್ಟಿನ ಬೂದಿಯಿಂದಲೇ ಹಲ್ಲಿನಪುಡಿಯನ್ನು ತಯಾರಿಸಲಾಗುತ್ತಿದೆ. ಕೈಬೆರಳಿನಿಂದ ತಿಕ್ಕುವುದರಿಂದ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ ಎನ್ನುತ್ತಾರೆ. ಹಲ್ಲು ಪುಡಿಯಲ್ಲಿ ಗಿಡಮೂಲಿಕೆಗಳ ಮಿಶ್ರಣ ಇರುವುದರಿಂದ ಒಸಡಿನ ನೋವು ನಿವಾರಣೆಯಾಗುತ್ತದೆ. ಎಲೆ-ಅಡಿಕೆ, ತಂಬಾಕು ಸೇವನೆಯಿಂದ ಹಲ್ಲಿನ ಮೇಲೆ ಉಂಟಾಗುವ ಕೆಂಪು ಬಣ್ಣ ಕೂಡಾ ಹೋಗುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಉಜ್ಜುವುದರಿಂದ ಹಲ್ಲುಗಳು ಸುರಕ್ಷಿತವಾಗಿರುತ್ತವೆ. ಮುಖ್ಯವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಒಟ್ಟಾರೆ ಮೈಸೂರು ವಿಶ್ವವಿಖ್ಯಾತವಾಗುವುದಕ್ಕೆ ಇದು ಕೂಡ ಪರೋಕ್ಷ ಕಾರಣವೆಂದರೆ ತಪ್ಪಾಗಲಾರದು.