ಕಸಾಪದಿಂದ ಆನೆ ಮಾವುತರು, ಕಾವಾಡಿಗಳಿಗೆ ನೇತ್ರ ತಪಾಸಣೆ
ಮೈಸೂರು, ಸೆಪ್ಟೆಂಬರ್ 16: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. ನೇತ್ರಧಾಮ ಆಸ್ಪತ್ರೆಯ ಡಾ.ನವೀನ್ ಅವರು ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದ 150ಕ್ಕೂ ಹೆಚ್ಚು ಮಂದಿಯ ನೇತ್ರ ತಪಾಸಣೆ ಮಾಡಿದರು.
ಸಾಮಾನ್ಯವಾಗಿ ಕಾಡಿನಲ್ಲಿಯೇ ಆನೆಗಳೊಂದಿಗೆ ಬದುಕು ಕಟ್ಟಿಕೊಂಡಿರುವ ಇವರು ಯಾವುದೇ ಆರೋಗ್ಯ ತಪಾಸಣೆ ಮಾಡದ ಕಾರಣ ಹಲವು ರೋಗಗಳಿಗೆ ತುತ್ತಾಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ವಿವಿಧ ಸಂಘಟನೆಗಳು ಅರಮನೆ ಆವರಣದಲ್ಲಿ ಬೀಡು ಬಿಟ್ಟ ದಿನದಿಂದ ಆರೋಗ್ಯ ತಪಾಸಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.[ಮೈಸೂರು ದಸರಾ ಗಜಪಡೆಗಳಿಗೆ ಭಾರದ ತಾಲೀಮು ಆರಂಭ]
ಇದೀಗ ಕನ್ನಡ ಸಾಹಿತ್ಯ ಪರಿಷತ್ ನೇತ್ರ ತಪಾಸಣೆ ನಡೆಸುವ ಮೂಲಕ ಸಾಹಿತ್ಯ ಚಟುವಟಿಕೆ ಮಾತ್ರವಲ್ಲದೆ, ಇತರೆ ಸಾಮಾಜಿಕ ಕಾರ್ಯವನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ತಪಾಸಣಾ ಶಿಬಿರಕ್ಕೆ ಆಗಮಿಸಿದ್ದ ಪತ್ರಿಕೋದ್ಯಮಿ ರಾಜಶೇಖರ್ ಕೋಟಿ ಮಾತನಾಡಿ, ಕಾಡಿನಲ್ಲಿ ವಾಸವಾಗಿರುವ ಮಾವುತರ ಹಾಗೂ ಕುಟುಂಬ ವರ್ಗದವರಿಗೆ ನೈಸರ್ಗಿಕವಾಗಿ ಯಾವುದೇ ಆರೋಗ್ಯದ ಸಮಸ್ಯೆ ಬರುವುದಿಲ್ಲ ಎಂದರು.
ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಸದೃಢವಾಗಿರುತ್ತಾರೆ. ಕಾಡಿನಲ್ಲಿ ದೊರೆಯುವ ಗುಣಮಟ್ಟದ ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡಿಕೊಳ್ಳುವುದರಿಂದ ಸಹಜವಾಗಿ ರೋಗಗಳು ಬರುವ ಸಾಧ್ಯತೆ ಕಡಿಮೆ ಎಮ್ದು ಹೇಳಿದರು.[ದಸರಾ ಸಂಭ್ರಮಕ್ಕಾಗಿ ಅರಮನೆ ಪ್ರವೇಶಿಸಿದ ಎರಡನೇ ಗಜಪಡೆ]
ಕಣ್ಣು ಬಹುಮುಖ್ಯವಾದ ಅಂಗ. ಕಣ್ಣಿನ ಆರೋಗ್ಯ ಕಾಳಜಿ ಬಹುಮುಖ್ಯ. ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮಾವುತರು ಹಾಗೂ ಅವರ ಕುಟುಂಬ ವರ್ಗ ನಗರದಲ್ಲಿ ಕಲುಷಿತ ವಾತಾವರಣದಲ್ಲಿ ಇರುವುದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಇವರಿಗೆ ಆರೋಗ್ಯ ಹದಗೆಟ್ಟರೆ ದಸರಾ ಆನೆಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ನೇತ್ರ ಹಾಗೂ ದೈಹಿಕ ತಪಾಸಣೆ ಮಾಡುವುದು ಒಳ್ಳೆಯದು ಎಂದರು.
ಡಿಎಫ್ಓ ಕರಿಕಾಳನ್, ಡಾ.ಗಣಪತಿಭಟ್, ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ನಗರಾಧ್ಯಕ್ಷ ಕೆ.ಎಸ್.ಶಿವರಾಂ, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರಶೇಖರ್, ವಿಶ್ವಕರ್ಮ ಮಹಾಮಂಡಳಿ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.