ರಾಯಣ್ಣ ಬ್ರಿಗೇಡ್ ನಲ್ಲಿ ರಾಜಕೀಯ ಮಾಡಲ್ಲ: ಈಶ್ವರಪ್ಪ ಸ್ಪಷ್ಟನೆ
ಮೈಸೂರು, ಮೇ 6: ರಾಯಣ್ಣ ಬ್ರಿಗೇಡ್ ನಲ್ಲಿ ರಾಜಕೀಯ ಮಾಡುವುದಿಲ್ಲ. ಅಲ್ಲಿ ಕೇವಲ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಮಾತ್ರ ನಡೆಯುತ್ತವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಮೇ 6ರಿಂದ ಮೈಸೂರಿನಲ್ಲಿ ಶುರುವಾಗಿರುವ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಗಾಗಿ ಆಗಮಿಸಿರುವ ಅವರು, ಶನಿವಾರ ಬೆಳಗ್ಗೆ ಅಗ್ರಹಾರದ ಪಾತಾಳಾಂಜನಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆನಂತರ, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬ್ರಿಗೇಡ್ ಮುಂದುವರಿಕೆ ಸಂಬಂಧ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಸೂಚನೆ ನೀಡಿದ್ದಾರೆ.
ರಾಯಣ್ಣ ಬ್ರಿಗೇಡ್ ನಲ್ಲಿ ರಾಜಕೀಯ ಚಟುವಟಿಕೆ ನಡೆಸಲ್ಲ ಎಂದು ನಾನೂ ಆಶ್ವಾಸನೆ ನೀಡಿದ್ದೇನೆ. ಅದನ್ನೇ ಪಾಲಿಸುತ್ತೇನೆ. ರಾಯಣ್ಣ ಬ್ರಿಗೇಡ್ ಅಭ್ಯಾಸ ವರ್ಗ ನಿಂತಿಲ್ಲ. ಪಧಾದಿಕಾರಿಗಳ ಜೊತೆ ಚರ್ಚೆ ನಡೆಸಿ ಅಭ್ಯಾಸ ವರ್ಗವನ್ನು ಮತ್ತೂ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಅಭಿಮಾನಿಗಳ ಜೈಕಾರ: ಪಾತಾಳ ಆಂಜನೇಯ ದೇಗುಲದಿಂದ ಹೊರಬರುತ್ತಿದ್ದಂತೆಯೇ ಅವರ ಅಭಿಮಾನಿಗಳು ಈಶ್ವರಪ್ಪ ಅವರನ್ನು ಸುತ್ತುವರೆದು ಹೂಹಾರ ಹಾಕಿದರು. ಇದೇ ವೇಳೆ, ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಈಶ್ವರಪ್ ಎಂಬ ಘೋಷಣೆಗಳನ್ನೂ ಕೂಗಿದರು.