ದೃಷ್ಠಿ ದೋಷರಿಗೆ 'ಬಿ ಮೈ ಸೈಟ್' ವಿಶೇಷ ಕಾರು ರ್ಯಾಲಿ
ರ್ಯಾಲಿಯ ತೃತೀಯ ಸ್ಥಾನಕ್ಕೆ ಪಾತ್ರರಾದ ಪ್ರಶಾಂತ್ ಅರಸ್ ಅವರು ಗಣ್ಯರಿಂದ ಬಹುಮಾನ ಸ್ವೀಕರಿಸಿ ತಮ್ಮ ಮಾರ್ಗದರ್ಶಿ ಉದಯ್ ಕಿರಣ್ ಗೆ 8 ಸಾವಿರ ರೂ. ಬಹುಮಾನವನ್ನು ನೀಡಿ ಉದಾರತೆ ಮೆರೆದರು.
ಮೈಸೂರು, ಡಿಸೆಂಬರ್ 12 : ದೃಷ್ಟಿದೋಷವಿರುವವರಿಗೆ ಉತ್ತೇಜನ ನೀಡಲು ನಡೆದ ಬಿ ಮೈ ಸೈಟ್' ವಿಶೇಷ ಕಾರು ರ್ಯಾಲಿಯಲ್ಲಿ ಅರ್ಜುನ್ ರಂಗ ಹಾಗೂ ಮಾರ್ಗದರ್ಶಿ ಸಂತೋಷ್ ತಂಡ ಗೆಲುವು ಸಾಧಿಸಿದೆ.
ಮೈಸೂರು ಅಮಿಟಿ ರೌಂಡ್ ಟೇಬಲ್-156, ರೌಂಡ್ ಟೇಬಲ್ ಇಂಡಿಯಾ ವತಿಯಿಂದ ಭಾನುವಾರ ನಡೆದ ಬಿ ಮೈ ಸೈಟ್' ಕಾರು ರ್ಯಾಲಿಯಲ್ಲಿ ಮಾರ್ಗದರ್ಶಿ ಸಂತೋಷ್ ಸರಿಯಾದ ಮಾರ್ಗ ತೋರುವ ಮೂಲಕ ತಂಡಕ್ಕೆ ಪ್ರಥಮ ಸ್ಥಾನ ತಂದುಕೊಟ್ಟರು. ದೃಷ್ಟಿ ದೋಷವಿರುವ ಮಾರ್ಗದರ್ಶಕರು ಬ್ರೈಲ್ ಲಿಪಿಯ ನಕ್ಷೆಯನ್ನು ಅರ್ಥೈಸಿಕೊಂಡು ಮಾರ್ಗದರ್ಶನ ಮಾಡುವುದೇ ಈ ರ್ಯಾಲಿಯ ವಿಶೇಷ.
ಹಕ್ಕು ವಂಚಿತ ಮಕ್ಕಳಲ್ಲಿ ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಮೈಸೂರು ನಗರದ ಸ್ಪರ್ಧಿಗಳು ಭಾಗವಹಿಸಿದ್ದರು. 65 ಕಾರುಗಳ ಮೂಲಕ 90 ಕಿ.ಮೀ. ದೂರ ರ್ಯಾಲಿ ಸಾಗಿತು.
ಪ್ರತಾಪ ರಸ್ತೆಯ ವಿಂಡ್ ಫ್ಲವರ್ ಮುಂದೆ ಪ್ರಾರಂಭಗೊಂಡ ರ್ಯಾಲಿಯು ರಿಂಗ್ ರಸ್ತೆ, ಎಚ್.ಡಿ.ಕೋಟೆ ರಸ್ತೆ, ನಂಜನಗೂಡು ರಸ್ತೆಗಳಲ್ಲಿ ಸುತ್ತಾಡಿ ಮತ್ತೇ ವಿಂಡ್ ಫ್ಲವರ್ ಮುಂದೆ ಅಂತ್ಯಗೊಂಡಿತು.
ನಗರದ ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್, ಹೆಲೆನ್ ಕೆಲರ್ ಡಿ.ಎಡ್ ಟ್ರೈನಿಂಗ್ ಇನ್ಸ್ಟ್ಯೂಟ್, ರಂಗರಾವ್ ಸ್ಮಾರಕ ದೃಷ್ಟಿದೋಷ ಉಳ್ಳವರ ಶಾಲೆ, ಜೆಎಸ್ಎಸ್ ಪಾಲಿಟೆಕ್ನಿಕ್ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ಸುಮಾರು 65 ದೃಷ್ಟಿದೋಷ ಉಳ್ಳವರು ಮಾರ್ಗದರ್ಶಕರಾಗಿ ದಾರಿ ತೋರಿದರು.
ಉದಾರತೆ ಮೆರೆದ ಕ್ರೀಡಾಪಟುಗಳು: ರ್ಯಾಲಿಯ ತೃತೀಯ ಸ್ಥಾನಕ್ಕೆ ಪಾತ್ರರಾದ ಪ್ರಶಾಂತ್ ಅರಸ್ ಅವರು ಗಣ್ಯರಿಂದ ಬಹುಮಾನ ಸ್ವೀಕರಿಸಿ ತಮ್ಮ ಮಾರ್ಗದರ್ಶಿ ಉದಯ್ ಕಿರಣ್ ಗೆ 8 ಸಾವಿರ ರೂ. ಬಹುಮಾನವನ್ನು ನೀಡಿ ಉದಾರತೆ ಮೆರೆದರು.
ಇನ್ನು ದ್ವಿತೀಯ ಬಹುಮಾನ ಸ್ವೀಕರಿಸಿದ ನವ್ಯ ಅವರು ತಮ್ಮ ಮಾರ್ಗದರ್ಶಿ ಚುಂಬಿತಾ ಅವರಿಗೆ 10 ಸಾವಿರ ರೂ. ಜತೆಗೆ 30 ಸಾವಿರ ರೂ. ಸೇರಿಸಿ 40 ಸಾವಿರ ರೂ.ಗಳನ್ನು ನೀಡಿ ಔದಾರ್ಯ ಮೆರೆದರು.