ನಾಗರಹೊಳೆ ವ್ಯಾಪ್ತಿಯ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ರಕ್ಷಣೆ
ಹುಣಸೂರು, ಜನವರಿ 17: ನೀರು ಕುಡಿಯಲು ಬಂದು ಕೆರೆ ಹೂಳಲ್ಲಿ ಸಿಲುಕಿಕೊಂಡ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ, ಮರಳಿ ಅರಣ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕಚುವಿನಹಳ್ಳಿ ಹೊಸಕೆರೆಯಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗಿನಿಂದ ಹೊರಬಂದ ಐದು ಕಾಡಾನೆಗಳು ಕಚುವಿನಹಳ್ಳಿ ಗ್ರಾಮದ ಹೊಸಕೆರೆಗೆ ಸೋಮವಾರ ರಾತ್ರಿ ತೆರಳಿವೆ. ನೀರು ಕುಡಿದ ಬಳಿಕ ಮೂರು ಆನೆಗಳು ಹಿಂತಿರುಗಿವೆ. ಒಂದು ಆನೆ ಕೆರೆಯೊಳಗೆ ಹೂತುಕೊಂಡರೆ, ಮತ್ತೊಂದು ಗ್ರಾಮದ ಕೆರೆಯ ಪಕ್ಕದಲ್ಲಿರುವ ಎಲ್ಲಪ್ಪ ಅವರ ಬಾಳೆ ತೋಟದಲ್ಲಿ ಸಿಲುಕಿಕೊಂಡಿತ್ತು.[ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿ, ನೀರಿಗಾಗಿ ಪಂಪ್ ಕೀಳುವ ಕಾಡಾನೆಗಳು!]
ಗ್ರಾಮಸ್ಥರು ಮಂಗಳವಾರ ಬೆಳಗ್ಗೆ ನೋಡಿ, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಉದ್ಯಾನವನದ ಸಾಕಾನೆ ಗಣೇಶನೊಂದಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಹರ ಸಾಹಸ ನಡೆಸಿ ಮಧ್ಯಾಹ್ನ 2.30ರ ಸಮಯದಲ್ಲಿ ಮೇಲೆತ್ತಿ, ಎರಡು ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.[ಕಾಡಾನೆ ತುಳಿದು ಗುಬ್ಬಿಯ ಇಬ್ಬರು ರೈತರು ಸಾವು]
ಈ ಕಾಡಾನೆಗಳು ಅರಣ್ಯದಿಂದ ಹೊರಬಂದು, ರೈತರ ಜಮೀನಿಗೆ ನುಗ್ಗಿ ಬಾಳೆ, ಮತ್ತಿತರ ಬೆಳೆಗಳನ್ನು ತುಳಿದು ಹಾಕಿವೆ, ಪಂಪ್ ಸೆಟ್, ಪೈಪ್ ಗಳನ್ನು ನಾಶ ಮಾಡಿವೆ. ಅರಣ್ಯದಲ್ಲಿ ನೀರು ಮತ್ತು ಮೇವಿನ ಸಮಸ್ಯೆಯಿಂದಾಗಿ ನಾಡಿನತ್ತ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ರೈತರು ಭಯಗೊಂಡಿದ್ದಾರೆ.