ನಂಜನಗೂಡು ಬಳಿ ಕೆಸರಿನಲ್ಲಿ ಸಿಕ್ಕ ಕಾಡಾನೆ ಅಸ್ವಸ್ಥ
ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿ ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದೆ. ಈ ಆನೆ ಹೀಗೆ ಕೆಸರಿನಲ್ಲಿ ಸಿಲುಕಿ ಹತ್ತು ದಿನದ ಮೇಲೆ ಆದಂತಿದೆ ಎನ್ನುತ್ತಾರೆ ಸ್ಥಳೀಯರು.
ಮೈಸೂರು, ಡಿಸೆಂಬರ್ 21: ನೀರು ಕುಡಿಯಲು ತೆರಳಿದ ಕಾಡಾನೆಯೊಂದು ಕೆಸರಿನಲ್ಲಿ ಸಿಕ್ಕಿಕೊಂಡಿದೆ. ನಂಜನಗೂಡು ತಾಲೂಕಿನ ಹೆಡಿಯಾಲ ಉಪ ಅರಣ್ಯ ವಲಯ ವ್ಯಾಪ್ತಿಯ ಮೊಳೆಯೂರು ಅರಣ್ಯ ವಿಭಾಗದ ಹುಸ್ಕೂರು ಗಿರಿಜನ ಹಾಡಿಯ ಬಳಿಯ ನುಗು ನಾಲೆಯ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ.
ಅರಣ್ಯದಲ್ಲಿ ನೀರಿನ ಸಮಸ್ಯೆ ಇದ್ದು, ನೀರನ್ನು ಅರಸಿ ನುಗು ನಾಲೆಯ ಹಿನ್ನೀರಿಗೆ ತೆರಳಿದ ಸುಮಾರು 30 ವರ್ಷದ ಹೆಣ್ಣಾನೆ ಕೆಸರಿನಲ್ಲಿ ಸಿಲುಕಿದ್ದು, ಇದೀಗ ಬೆಳಕಿಗೆ ಬಂದಿದೆ. ಈ ಕಾಡಾನೆ ಯಾವಾಗ ಕೆಸರಿನಲ್ಲಿ ಸಿಲುಕಿತು ಎಂಬುದು ತಿಳಿದಿಲ್ಲವಾದರೂ ಕೆಲವರು ಸುಮಾರು ಹತ್ತು ದಿನಗಳಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.[ತಿರುಮಲದಲ್ಲಿ ರೊಚ್ಚಿಗೆದ್ದ ಆನೆಯಿಂದ ಮಾವುತನ ಕಾಲು ಮುರಿತ]
ಸದ್ಯ ಈ ಆನೆ ಕೂಡ ರಾಮನಗರದಲ್ಲಿ ಕೆಸರಿನಲ್ಲಿ ಸಿಲುಕಿದ ಸಿದ್ದನ ಸ್ಥಿತಿಯಲ್ಲೇ ಇದೆ. ನೀರು ಕುಡಿಯಲು ಇಳಿದ ಆನೆ ಕೆಸರಿನಲ್ಲಿ ಹೂತು ಹೋಗಿದ್ದು, ಅಲ್ಲಿಂದ ಹೊರಬರಲಾಗದೆ ಬಿದ್ದು ಹೋಗಿದೆ. ಇಷ್ಟು ದಿನಗಳ ಕಾಲ ಆಹಾರ ಮತ್ತು ನೀರು ಸಿಗದ ಕಾರಣ ಸಂಪೂರ್ಣ ಅಸ್ವಸ್ಥಗೊಂಡಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದೆ.
ಹಿಂಡಾಗಿ ನೀರು ಕುಡಿಯಲು ಬಂದರೆ ಒಂದು ವೇಳೆ ಕೆಸರಿನಲ್ಲಿ ಸಿಲುಕಿದರೂ ಇತರ ಆನೆಗಳು ರಕ್ಷಿಸುತ್ತವೆ. ಏಕಾಂಗಿಯಾಗಿ ಬಂದಿದ್ದರಿಂದ ಈ ಹೆಣ್ಣಾನೆ ಕೆಸರಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದೆ. ಸ್ಥಳೀಯರು ನೋಡಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರೂ ಅವರು ಅಸಹಾಯಕತೆ ವ್ಯಕ್ತಪಡಿಸಿದರು ಎಂಬ ಆರೋಪವೂ ಇದೆ.[ಗಜ ಬದುಕಿನ ರೋಚಕ ಸಂಗತಿಗಳ ಇಷ್ಟಿಷ್ಟೇ ವಿವರಗಳು...]
ಮಾಧ್ಯಮದವರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅದನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಮಲಗಿದಲ್ಲಿಗೆ ಮೇವು ನೀಡುವ ಕೆಲಸ ಮಾಡುತ್ತಿದ್ದಾರೆ. ಸ್ಥಳದಲ್ಲಿ ಹೆಡಿಯಾಲ ಅರಣ್ಯ ವಲಯದ ಉಪರಣ್ಯ ಅಧಿಕಾರಿ ಪರಮೇಶ್, ಎಸ್ ಟಿಪಿಎಫ್ ಹಾಗೂ ಇನ್ನಿತರ ಅರಣ್ಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.[ರಾಮನಗರದ ಅವ್ವೇರಹಳ್ಳಿಯಲ್ಲಿ ಕಾಡಾನೆ ಸಿದ್ದ ಸಾವು]
ಕೆಲ ಸಮಯದ ಹಿಂದಷ್ಟೆ ಪಿರಿಯಾಪಟ್ಟಣ ಬಳಿ ಕೆರೆ ನೀರಿನ ಕೆಸರಿನಲ್ಲಿ ಸಿಲುಕಿ ಕಾಡಾನೆ ಮೃತಪಟ್ಟಿತ್ತು. ಈಗಾಗಲೇ ಅರಣ್ಯದಲ್ಲಿರುವ ಕೆರೆಗಳಲ್ಲಿ ನೀರು ಬತ್ತುತ್ತಿದ್ದು, ನೀರು ಕುಡಿಯಲು ತೆರಳುವ ಪ್ರಾಣಿಗಳು ಕೆಸರಿನಲ್ಲಿ ಸಿಲುಕುವ ಸಾಧ್ಯತೆಯಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಗಮನಹರಿಸುವುದು ಅಗತ್ಯವಾಗಿದೆ.