ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆ, ಮಾವುತರಿಗೆ 1 ಕೋಟಿ ವಿಮೆ
ಮೈಸೂರು, ಆಗಸ್ಟ್ 9 : ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳು ಹಾಗೂ ಮಾವುತರಿಗೆ ಕಳೆದ ಬಾರಿಯಂತೆ ಈ ಬಾರಿಯೂ ಸಹ 1 ಕೋಟಿ ರು. ವಿಮೆ ಮಾಡಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.
ಈ ಬಾರಿ ಮೈಸೂರು ದಸರಾ ಅಂಬಾರಿ 'ಭೀಮ'ನ ಹೆಗಲಿಗೆ?
ಆನೆಗಳು ಅಂಬಾರಿ ಹೊರಲಿದ್ದು, ಅವುಗಳ ಭದ್ರತೆ ಹಿನ್ನೆಲೆಯಲ್ಲಿ ವಿಮೆ ಮಾಡಿಸಲಾಗುತ್ತಿದೆ. ಅದರ ಮೊತ್ತ ಒಂದು ಕೋಟಿ ರು. ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ ಅವರು ತಿಳಿಸಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ಮೈಸೂರು ದಸರಾಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ನಾಗಪುರ ಹಾಡಿ ಬಳಿಯಿಂದ ಆ.12ರಂದು ಗಜಪಯಣ ಪ್ರಾರಂಭವಾಗಲಿದೆ.
ಮೊದಲ ಹಂತದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ ಮತ್ತು ಕಾವೇರಿಯನ್ನು ಕರೆತರಲಾಗುತ್ತದೆ. ಇದರೊಂದಿಗೆ ಹೊಸ ಆನೆಗಳಾದ ಭೀಮ ಹಾಗೂ ವರಲಕ್ಷ್ಮಿಯನ್ನು ಹೆಚ್ಚುವರಿಯಾಗಿ ಕರೆತರಲು ತೀರ್ಮಾನಿಸಲಾಗಿದೆ.
ಗಜ ಪಯಣದ ವಿಡಿಯೋ ಬಿಡುಗಡೆ : ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಜಿಲ್ಲಾಡಳಿತ ಗಜಪಯಣದ ವಿಡಿಯೋ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ.
ಇದೇ ಆ.12ರಂದು ಹುಣಸೂರು ತಾಲೂಕಿನ ನಾಗಪುರ ಹಾಡಿಯಲ್ಲಿ ಗಜಪಯಣ ಆರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಲಿದ್ದಾರೆ.
ಆ.17 ರಂದು ಅರಮನೆಗೆ ಜಿಲ್ಲಾಡಳಿತದ ವತಿಯಿಂದ ಗಜಪಯಣದ 8 ಆನೆಗಳನ್ನು ಬರಮಾಡಿಕೊಳ್ಳಲಿದ್ದಾರೆ. ಆ.20 ನಂತರ ಎರಡನೇ ತಂಡದ 7 ಆನೆಗಳು ಗಜಪಡೆ ತಂಡಕ್ಕೆ ಸೇರ್ಪಡೆಗೊಳ್ಳಲಿವೆ.