ನಂಜನಗೂಡು ಉಪಚುನಾವಣೆ: ಬ್ಯಾಂಕ್ ಖಾತೆಗಳ ಮೇಲೆ ಹದ್ದಿನ ಕಣ್ಣು
ಮೈಸೂರು, ಮಾರ್ಚ್. 19 : ನಂಜನಗೂಡು ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಬ್ಯಾಂಕುಗಳಲ್ಲಿ ಅನುಮಾನಾಸ್ಪದವಾಗಿ ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಂದೀಪ್ ಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು. ನಂಜನಗೂಡು ಉಪಚುನಾವಣೆ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದು, ಏಪ್ರಿಲ್ 15 ರವರೆಗೆ ಹೆಚ್ಚಿನ ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಬಗ್ಗೆ ಪ್ರತಿ ದಿನ ವರದಿ ನೀಡುವಂತೆ ತಿಳಿಸಿದರು.[ನಂಜನಗೂಡು ಉಪಚುನಾವಣೆ: ಕದನ ಕಲಿಗಳಿಗೆ ಪ್ರತಿಷ್ಠೆಯ ಕಣ]
ಚುನಾವಣಾ ಸಂದರ್ಭದಲ್ಲಿ ಅಕ್ರಮಕ್ಕೆ ಆಸ್ಪದ ನೀಡದೆ ಇರುವ ಉದ್ದೇಶದಿಂದ ಹಣ ವಹಿವಾಟು, ವಾಹನಗಳ ತಪಾಸಣೆ ಇನ್ನಿತರ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕಿಗೆ ಅಥವಾ ಎ.ಟಿ.ಎಂಗೆ ಹಣ ಜಮೆ ಮಾಡುವಾಗ ಬ್ಯಾಂಕಿನ ಕ್ಯಾಷಿಯರ್ ಹಾಗೂ ಭದ್ರತಾ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಬಳಿ ಗುರುತಿನ ಚೀಟಿ ಹೊಂದಿರಬೇಕು ಹಾಗೂ ತಮ್ಮ ಬಳಿ ಇರುವ ನಗದು ಹಣದ ಬಗ್ಗೆ ದಾಖಲೆ ಹೊಂದಿರಬೇಕು ಎಂದರು.
ಒಬ್ಬರೇ ವ್ಯಕ್ತಿ ಕಾರಣ ಹಾಗೂ ಸೂಕ್ತ ದಾಖಲೆಗಳನ್ನು ನೀಡದೆ ಪ್ರತಿ ದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವಾ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ಪರಿಶೀಲಿಸಬೇಕು.
ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಅಸಹಜವಾಗಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಹಣ ಹಿಂಪಡೆಯುವ ಅನುಮಾನಾಸ್ಪದ ಪ್ರಕ್ರಿಯೆಗಳು ನಡೆದರೆ ಹಾಗೂ ಸ್ವಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಸಂಘಗಳಿಗೆ ಬ್ಯಾಂಕುಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಸವಲತ್ತು ಹಣ ಹೊರತುಪಡಿಸಿ ಹೆಚ್ಚಿನ ಮೊತ್ತದ ಹಣ ಜಮೆಯಾದಲ್ಲಿ ವರದಿ ಸಲ್ಲಿಸುವುದು.
ಚುನಾವಣೆ ಅಕ್ರಮ ತಡೆಗಟ್ಟಲು ಬ್ಯಾಂಕ್ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿ ಎಂದರು.