ಮೈಸೂರಲ್ಲಿ ಸಂದೇಶ ಸಾರುವ ಗಣಪನ ನೋಡ ಬನ್ನಿ,,,
ಮೈಸೂರು, ಸೆಪ್ಟೆಂಬರ್, 05: ವಿಘ್ನ ನಿವಾರಕ ವಿನಾಯಕನನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತಿದೆ. ಭಾನುವಾರ ಗೌರಿಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ಮನೆ ಮಂದಿ ಇಂದು ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಹೀಗಾಗಿ ಎಲ್ಲೆಡೆ ಹಬ್ಬದ ರಂಗು ಮನೆ ಮಾಡಿದೆ.
ಕಳೆದ ಎರಡು ದಿನಗಳಿಂದ ನಗರದ ವಿವಿಧ ಮಾರುಕಟ್ಟೆಗಳಲ್ಲಿ, ರಸ್ತೆ ಬದಿಯಲ್ಲಿ ಹೂ, ಹಣ್ಣು, ತರಕಾರಿ ಹಾಗೂ ಗಣಪತಿ ಮೂರ್ತಿಗಳ ಖರೀದಿ ಭರಾಟೆ ಸಾಗಿದೆ. ಅಂಗಡಿ ಮಳಿಗೆಯಲ್ಲಿ ಮಾತ್ರವಲ್ಲದೆ, ರಸ್ತೆ ಬದಿಯಲ್ಲಿ ವಿವಿಧ ಬಗೆಯ, ಮಾದರಿಯ ಗಣಪತಿ ವಿಗ್ರಹಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಪರಿಸರ ಸ್ನೇಹಿ ಗಣಪತಿಗೆ ಬೇಡಿಕೆ ಹೆಚ್ಚಾಗಿದೆ.[ಪಿಓಪಿ ಗಣೇಶನ ಕೊಂಡರೆ ಜೈಲಲ್ಲೇ ಕರಿಗಡಬು, ಮೋದಕ!]
ಸಾಮಾನ್ಯವಾಗಿ ಗಣೇಶಚತುರ್ಥಿ ಸಂದರ್ಭ ಕಲಾವಿದರು ಕೂಡ ಆ ವರ್ಷದ ಮಹತ್ವದ ಘಟನೆಗಳನ್ನು ಗಣಪನ ಮೂಲಕ ಬಿಂಬಿಸುವ ಪ್ರಯತ್ನವನ್ನು ಮಾಡುವುದು ಅಲ್ಲಲ್ಲಿ ಕಂಡು ಬರುತ್ತದೆ. ಅದರಂತೆ ಕಳೆದ ಮೂರು ವರ್ಷಗಳಿಂದ ಮೈಸೂರಿನಲ್ಲಿ ಕಲಾವಿದ ಡಿ.ರೇವಣ್ಣ ಅವರು ಗಣಪತಿ ಹಬ್ಬದ ಸಂದರ್ಭ ಆಯಾಯ ವರ್ಷದ ವಿದ್ಯಮಾನಗಳಿಗೆ ಸಂಬಂಧಪಟ್ಟಂತೆ ಗಣಪತಿ ಕಲಾಕೃತಿ ತಯಾರಿಸುವುದನ್ನು ರೂಢಿಸಿಕೊಂಡು ಬಂದಿದ್ದಾರೆ.
ಗಮನ ಸೆಳೆಯುವ ಗಣಪತಿ
ಈ ಬಾರಿ ಗಣಪತಿಯೊಂದಿಗೆ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ, ಗಣಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಮೋದಿ ಅವರೊಂದಿಗೆ ನಿಂತ ಸಂಸದ ಪ್ರತಾಪ್ ಸಿಂಹ ರನ್ನು ಕಾಣಬಹುದು.
ಒಲಿಂಪಿಕ್ಸ್ ಪ್ರಭಾವ
ರಿಯೋ ಒಲಂಪಿಕ್ನಲ್ಲಿ ಪದಕದ ಮೂಲಕ ಭಾರತಕ್ಕೆ ಖ್ಯಾತಿ ತಂದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕುಸ್ತಿಪಟು ಮಲ್ಲಿಕ್, ಜಿಮ್ನಾಸ್ಟಿಕ್ ಪಟು ದೀಪಾ ಅಷ್ಟೇ ಅಲ್ಲ ಮನಕಲಕಿಸುವ ಮಹದಾಯಿ ಹೋರಾಟದಲ್ಲಿ ತೊಡಗಿದ್ದ ರೈತರ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನೂ ಜನತೆ ಮುಂದೆ ತೆರೆದಿಟ್ಟಿದ್ದಾರೆ.
ಸಂದೇಶ ಸಾರುವ ಗಣೇಶ
ಯದುವೀರ ದಂಪತಿಗೆ ಶುಭಾಶಯ, ಸೆಲ್ಫಿ ಹಿಂದೆ ಬಿದ್ದವರಿಗೊಂದು ಸಂದೇಶ, ಪದಕ ಗೆದ್ದವರಿಗೆ ಅಭಿನಂದನೆ, ಬಡ ರೈತನ ಮೇಲೆ ನಡೆದ ದೌರ್ಜನ್ಯವನ್ನು ತಮ್ಮ ಕಲಾಕೃತಿಯ ಮೂಲಕ ಖಂಡಿಸುವ ಪ್ರಯತ್ನವನ್ನು ಗಣೇಶ ಚತುರ್ಥಿ ಸಂದರ್ಭ ಮಾಡಿದ್ದಾರೆ.
30 ವರ್ಷದ ಸಾಧನೆ
ಕಲಾವಿದ ಡಿ.ರೇವಣ್ಣ ಅವರು ಕಳೆದ ಮೂವತ್ತು ವರ್ಷಗಳಿಂದ ಕಲಾಕೃತಿ ತಯಾರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದು ಅವರ ಕುಲಕಸುಬು ಕೂಡ ಹೌದು. ಮೈಸೂರಿನ ಕಾವಾದಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು 1994ರಿಂದ ಗಣಪತಿ ವಿಗ್ರಹವನ್ನು ತಯಾರಿಸುವುದನ್ನು ರೂಢಿಸಿಕೊಂಡು ಬಂದಿದ್ದಾರೆ.
ಪರಿಸರ ಸ್ಣೆಹಿ ಗಣಪ
ಇತ್ತೀಚೆಗೆ ಪರಿಸರ ಸ್ನೇಹಿ ಗಣಪನೊಂದಿಗೆ ಸಮಾಜಕ್ಕೆ ಏನಾದರೊಂದು ಸಂದೇಶ ನೀಡಬೇಕೆಂಬ ಆಲೋಚನೆ ಮಾಡಿದರು. ಇದರ ಮೊದಲ ಪ್ರಯೋಗವಾಗಿ 2013ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ತೆರೆದಿಟ್ಟರು. 2014ರಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಸಂದೇಶ ಸಾರಿದರು.
ಕುಂಬಾರಗೇರಿ ಆಕರ್ಷಣೆ ಕೇಂದ್ರ
ಒಟ್ಟಾರೆ ಗಣಪತಿ ಹಬ್ಬಕ್ಕೆ ಏನಾದರೊಂದು ಕೊಡುಗೆ ನೀಡಬೇಕೆನ್ನುವ ರೇವಣ್ಣ ಅವರು ಮೈಸೂರು ನಗರದ ಅಶೋಕ ರಸ್ತೆಯ ಕುಂಬಾರಗೇರಿಯಲ್ಲಿ ಅದನ್ನು ಅನಾವರಣಗೊಳಿಸುವಲ್ಲಿ ಸಫಲರಾಗಿದ್ದಾರೆ.