ಚೆನ್ನಕೇಶವನ ಕನಸು ನನಸಾಗಿಸಿದ ನುಗ್ಗೆ ಬೆಳೆ
ಮೈಸೂರು, ಡಿಸೆಂಬರ್ 29: ನುಗ್ಗೇ ಗಿಡ ಹಳ್ಳಿಗರ ಹಿತ್ತಲಲ್ಲಿ ಸಾಮಾನ್ಯ ಆದರೆ ಅದನ್ನೇ ಕೃಷಿ ಕೃಷಿ ಮಾಡಿದರೆ ಬದುಕು ನೀಡುತ್ತದೆ ಎಂದರೆ ನಂಬುವಿರಾ? ಅಂತಹ ಉದಾಹರಣೆ ಕೆ.ಆರ್.ನಗರದ ಚಿಕ್ಕಹನಸೋಗೆ ಗ್ರಾಮದ ಚೆನ್ನಕೇಶವನ ಕೈ ಹಿಡಿದ ನುಗ್ಗೆ ಜೀವನ್ನಕ್ಕೆ ದಾರಿದೀಪವಾಗಿದೆ.
ಇನ್ನು ಗ್ರಾಮೀಣ ಭಾಗದಲ್ಲಿ ರೈತರು ಸಾಂಪ್ರದಾಯಿಕ ಬೆಳೆಗೆ ಜೋತುಬಿದ್ದು ನಷ್ಟದಲ್ಲಿದ್ದಾರೆ. ಆದರೆ ಚೆನ್ನಕೇಶವ ಅವರು ನುಗ್ಗೆಯನ್ನೇ ಪೂರ್ಣ ಪ್ರಮಾಣದ ಕೃಷಿ ಮಾಡಲು ಹೊರಟಾಗ ನುಗ್ಗೆ ಕೃಷಿ ಮಾಡುತ್ತೇನೆ ಎಂದಾಗ ಕೆಲವರು ನಕ್ಕಿದ್ದು ಇದೆ. ಆದರೆ ಅವರಿಗೆ ಏನಾದರೊಂದು ಮಾಡಿ ಬದುಕಿಗೆ ದಾರಿ ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕೆ ಕಾರಣವೂ ಇತ್ತು.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ಚೆನ್ನಕೇಶವ ಕೃಷಿ ಕುಟುಂಬದಿಂದ ಬಂದಿದ್ದು, ಬಡತನದ ಕಾರಣ 5ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಒಂದಷ್ಟು ವರ್ಷ ಮನೆಯವರೊಂದಿಗೆ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಕಾಲ ಕಳೆದಿದ್ದರು. ಬಳಿಕ ಆಟೋ ಓಡಿಸುವುದನ್ನು ಕಲಿತು ಮೈಸೂರಿಗೆ ತೆರಳಿದರು. ಅಲ್ಲಿ ಒಂದಷ್ಟು ಸಮಯ ಆಟೋ ಓಡಿಸಿದರು. ಆದರೆ ಅದು ಅವರನ್ನು ಕೈಹಿಡಿಯಲಿಲ್ಲ. ಸಿಟಿಯಲ್ಲಿ ಆಟೋ ಓಡಿಸಿಕೊಂಡು ಬದುಕೋದು ಕಷ್ಟವಾಗಿತ್ತು.
ಬೇರೆ ದಾರಿ ಕಾಣದೆ ಮರಳಿ ತನ್ನ ಊರಿಗೆ ಬಂದರು. ಮುಂದೆ ಏನು ಮಾಡೋದು ಎಂದು ಯೋಚಿಸುತ್ತಿರುವಾಗ ನುಗ್ಗೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವುದು ಕಂಡು ಬಂತು. ನಾನ್ಯಾಕೆ ನುಗ್ಗೆ ಕೃಷಿ ಮಾಡಬಾರದು ಎಂದು ಯೋಚಿಸಿದರು. ಆ ಬಗ್ಗೆ ಒಂದಷ್ಟು ಮಂದಿಯನ್ನು ಕೇಳಿದರು. ಒಬ್ಬೊಬ್ಬರ ಅಭಿಪ್ರಾಯ ಒಂದೊಂದಾಗಿತ್ತು. ಆದರೆ ನುಗ್ಗೆ ಕೃಷಿ ಮಾಡುವ ದೃಢ ಸಂಕಲ್ಪ ಮಾಡಿಯೇ ಬಿಟ್ಟರು.
ಅವರಿವರನ್ನು ಕೇಳುವ ಬದಲು ತೋಟಗಾರಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯುವ ನಿರ್ಧಾರಕ್ಕೆ ಬಂದು ಅದರಂತೆ ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ.ಚಂದ್ರು ಮತ್ತು ಅಧಿಕಾರಿ ಎಸ್.ಸಿ.ಶೇಖರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಅವರ ಮಾರ್ಗದರ್ಶನದಲ್ಲಿ ಪ್ರತಿ 9 ಅಡಿ ದೂರಕ್ಕೆ 10 ಅಡಿ ಅಗಲಕ್ಕೆ ಒಂದು ಸಸಿಯಂತೆ ಒಟ್ಟು 1ಸಾವಿರಕ್ಕೂ ಹೆಚ್ಚು ನುಗ್ಗೆ ಗಿಡಗಳನ್ನು ನೆಟ್ಟು ಇದಕ್ಕೆ ರಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಹಾಕಿ ಜತನದಿಂದ ಬೆಳೆಸಿದರು. ಗಿಡ ಹುಲುಸಾಗಿ ಬೆಳೆಯಿತು. ಇವರೊಂದಿಗೆ ಕೆಲಸ ಕಾರ್ಯಗಳಿಗೆ ಮನೆಯವರು ಸಹಕರಿಸಿದರು. ಹುಲುಸಾಗಿ ಬೆಳೆದ ಗಿಡಗಳಲ್ಲಿ ಹೂಗಳು ಕಾಣಿಸಿಕೊಂಡಾಗ ಚೆನ್ನಕೇಶವ ಅವರ ಮೊಗದಲ್ಲಿ ಮಂದಹಾಸ ಮಿನುಗತೊಡಗಿತು. ಅದು ಕಾಯಿಕಟ್ಟಿದಾಗ ಸಂಭ್ರಮ ಮನೆ ಮಾಡಿತು.
ನುಗ್ಗೆ ಬೆಳೆಯು 6 ತಿಂಗಳ ಬೆಳೆಯಾಗಿರುವುದರಿಂದ ಇದರ ನಡುವೆ ಸುಮಾರು 20 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆದಿದ್ದು ಅದರಲ್ಲಿ ಸುಮಾರು 75 ಸಾವಿರ ರೂ.ಗಳ ಆದಾಯ ಪಡೆದಿದ್ದಾರೆ. ಇವರ ಕೃಷಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 43 ಸಾವಿರ ಸಾವಿರದ ವರೆಗೆ ಪ್ರೋತ್ಸಾಹ ಧನ ನೀಡಿದೆ. ಏನಾದರೂ ಸಾಧಿಸುತ್ತೇನೆ ಎಂಬ ಛಲ ಇದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗಲ್ಲ ಎನ್ನುವುದಕ್ಕೆ ಚೆನ್ನಕೇಶವ ಅವರು ಸಾಕ್ಷಿಯಾಗಿದ್ದಾರೆ.