ವರದಕ್ಷಿಣೆ ಕಿರುಕುಳ : ನೇಣಿಗೆ ಶರಣಾದ ಗೃಹಿಣಿ, ಕೊಲೆ ಶಂಕೆ
ಮೈಸೂರು, ನವೆಂಬರ್ 26 : ನೇಣು ಬಿಗಿದುಕೊಂಡು ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಾಂಡವಪುರ ತಾಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಪೋಷಕರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಚಾಗಶೆಟ್ಟಹಳಿ ಗ್ರಾಮದ ಸಿದ್ದಲಿಂಗಪ್ಪ ಅವರ ಪತ್ನಿ ಆಶಾ (22) ಶಂಕಾಸ್ಪದವಾಗಿ ಸಾವನ್ನಪ್ಪಿದ ದುರ್ದೈವಿ.
ಚಾಗಶೆಟ್ಟಹಳ್ಳಿ ಗ್ರಾಮದ ಶಂಭುಲಿಂಗಪ್ಪ - ಚಿಕ್ಕತಾಯಮ್ಮ ಅವರ ಪುತ್ರ ಸಿದ್ದಲಿಂಗಪ್ಪ ಮೂರು ವರ್ಷದ ಹಿಂದೆ ಮೈಸೂರು ಸಮೀಪದ ಭುಗತಹಳ್ಳಿ ಗ್ರಾಮದ ರತ್ನಮ್ಮ ಎಂಬುವರ ಪುತ್ರಿ ಆಶಾಳನ್ನು ವಿವಾಹವಾಗಿದ್ದನು.
ವಧುವಿನ ಮನೆಯಿಂದ ವಿವಾಹದ ವೇಳೆಯಲ್ಲಿ 50 ಸಾವಿರ ನಗದು, 150 ಗ್ರಾಂ ಚಿನ್ನ, ಪಲ್ಸರ್ ಬೈಕ್ನ್ನು ವರದಕ್ಷಿಣೆಯಾಗಿ ಪಡೆಯಲಾಗಿತ್ತು. ಇತ್ತೀಚೆಗೆ ಬೋರ್ವೆಲ್ ತೆಗೆಸಲು 80 ಸಾವಿರ ನಗದನ್ನು ಸಿದ್ದಲಿಂಗಪ್ಪ ಪಡೆದಿದ್ದ ಎಂದು ಆಶಾ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟು ಹಣ ನೀಡಿದರೂ ಮತ್ತೆ 2 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಆಶಾಳಿಗೆ ಹಿಂಸೆ ನೀಡುತ್ತಿದ್ದರು. ಈ ಸಂಬಂಧವಾಗಿ ಕಳೆದ 12 ದಿನಗಳ ಹಿಂದೆ ಆಶಾಳನ್ನು ತವರುಮನೆಗೆ ಸಿದ್ದಲಿಂಗಪ್ಪ ಕಳುಹಿಸಿದ್ದನು ಮೃತಳ ಪೋಷಕರು ದೂರಿದ್ದಾರೆ.
ಹಣ ತರುವಂತೆ ಹೆಂಡತಿಯನ್ನು ತವರಿಗೆ ಕಳುಹಿಸಿದ ಸಿದ್ದಲಿಂಗಪ್ಪ 12 ದಿನಗಳಾದರೂ ಹಣ ತೆಗೆದುಕೊಂಡು ಪತ್ನಿ ಆಶಾ ಬಾರದಿದ್ದರಿಂದ ಶನಿವಾರ ಬೆಳಗ್ಗೆ ಭುಗತಹಳ್ಳಿಗೆ ಹೋಗಿ ಆಶಾಳನ್ನು ಕರೆದುಕೊಂಡು ಬಂದಿದ್ದಾನೆ. ತವರುಮನೆಯಿಂದ ಹಣ ತರದಿದ್ದರಿಂದ ಎಲ್ಲಿ ಹಿಂಸೆ ನೀಡುತ್ತಾರೋ ಎಂದು ಹೆದರಿದ ಆಶಾ ಮನೆಯ ಹಿಂದಿನ ಸೂರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆದರೆ, ಆಶಾಳ ತಾಯಿ ರತ್ನಮ್ಮ ಅವರು 2 ಲಕ್ಷ ರೂ.ಗಳನ್ನು ಕೊಡಲಿಲ್ಲವೆಂದು ತನ್ನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಯಾರಿಗೂ ಅನುಮಾನ ಬರದಿರಲಿ ಎಂದು ನೇಣುಬಿಗಿದಿದ್ದಾರೆ ಎಂದು ಪಾಂಡವಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.