ಕಾರ್ಯಕರ್ತರ ಒತ್ತಡಕ್ಕೆ ಮಣಿದರೆ ಸಿಎಂ ಪುತ್ರ ಡಾ.ಯತೀಂದ್ರ?
ಮೈಸೂರು, ಆಗಸ್ಟ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ರಾಕೇಶ್ ಸಿದ್ದರಾಮಯ್ಯ ಅವರ ನಿಧನದ ಬಳಿಕ ಆ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಬಹತೇಕ ಖಚಿತವಾಗಿದೆ.
ಇವರು ಯಾರೋ ಹೊಸಬರಲ್ಲ. ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ.ಯತೀಂದ್ರ. ಇದುವರೆಗೆ ಅಷ್ಟಾಗಿ ಸಾರ್ವಜನಿಕರ ಮಧ್ಯೆ ಕಾಣಿಸಿಕೊಳ್ಳದೆ ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದರು. ಒಂದು ಮೂಲದ ಪ್ರಕಾರ ರಾಕೇಶ್ ಸಿದ್ಧರಾಮಯ್ಯ ಅವರ ಸ್ಥಾನವನ್ನು ತುಂಬುವಂತೆ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು ಡಾ.ಯತೀಂದ್ರ ಅವರನ್ನು ಭೇಟಿ ಮಾಡಿ, ಒತ್ತಾಯಿಸಿದ್ದರು.[ರಾಜಕೀಯ ಸೇರಲು ಒತ್ತಡ ಇರುವುದು ನಿಜ: ಯತೀಂದ್ರ ಸಿದ್ದರಾಮಯ್ಯ]
ಕೆಲ ದಿನಗಳ ಹಿಂದೆಯಷ್ಟೆ ಮೈಸೂರಿನ ಟಿ.ಕೆ.ಲೇಔಟ್ ನಲ್ಲಿರುವ ನಿವಾಸಕ್ಕೆ ಮೊದಲ ಬಾರಿಗೆ ಬಂದಿದ್ದ ಡಾ.ಯತೀಂದ್ರ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭೇಟಿ ಮಾಡಿ ಅಭಿನಂದಿಸಿದ್ದರು. ನೀವು ರಾಜಕೀಯ ಪ್ರವೇಶ ಮಾಡಬೇಕು, ನಿಮ್ಮ ಸೇವೆ ವರುಣಾ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಅತ್ಯವಶ್ಯ. ನೀವು ಜನಸೇವೆಗೆ ಮುಂದಾಗಬೇಕು ಎಂದು ಮನವಿಯ ಮೂಲಕ ಒತ್ತಾಯ ಮಾಡಿದ್ದರು.
ಕಾರ್ಯಕರ್ತರ ಅಭಿಮಾನ ಕಂಡು ಭಾವುಕರಾದ ಡಾ.ಯತೀಂದ್ರ, ನಿಮ್ಮ ಪ್ರೀತಿ- ವಿಶ್ವಾಸಕ್ಕೆ ನಮ್ಮ ಕುಟುಂಬ ವರ್ಗ ಸದಾ ಋಣಿಯಾಗಿರುತ್ತದೆ. ನಿಮ್ಮ ಕಷ್ಟ- ಕಾರ್ಪಣ್ಯಗಳಿಗೆ ಭಾಗಿಯಾಗುತ್ತೇವೆ. ತಂದೆಯ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲ್ಲ ಭಾಗಕ್ಕೂ ಭೇಟಿ ನೀಡಿ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಭರವಸೆ ನೀಡಿದ್ದರು.[ಚಿಕ್ಕಮ್ಮದೇವಿಗೆ ಬಾಗಿನ ಅರ್ಪಿಸಿದ ಒಡೆಯರ್ ಕುಟುಂಬ]
ಅಂದು ಅವರನ್ನು ಭೇಟಿ ಮಾಡಿದ್ದ ಪಕ್ಷದ ಮುಖಂಡರಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬುಧವಾರ ಮತ್ತೆ ಟಿ.ಕೆ.ಲೇಔಟ್ ನ ನಿವಾಸಕ್ಕೆ ಭೇಟಿ ನೀಡಿ ಡಾ.ಯತೀಂದ್ರ ಅವರು ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.[ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?]
ಇದೆಲ್ಲವನ್ನೂ ಗಮನಿಸಿದರೆ ಸದ್ಯದಲ್ಲೇ ರಾಜಕೀಯವಾಗಿ ಅವರು ಕಾಣಿಸಿಕೊಳ್ಳುವುದು ಖಚಿತವಾಗುತ್ತಿದೆ. ಎಲ್ಲದಕ್ಕೂ ಕಾದು ನೋಡಬೇಕಾಗಿದೆ.