ಕೊಪ್ಪಳವೋ ಚಾಮುಂಡೇಶ್ವರಿ ಕ್ಷೇತ್ರವಾ ಎಂಬ ಗೊಂದಲವಿದೆಯಾ ಸಿಎಂಗೆ?
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆಯೊಂದು ಆಮೇಲೊಂದು ಹೇಳಿಕೆ ನೀಡುವ ಮೂಲಕ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ. ಅದೇನು ವಿಚಾರ ಅನ್ನೋದನ್ನು ತಿಳಿಯುವುದಕ್ಕೆ ಈ ವರದಿ ಓದಿ
ಮೈಸೂರು, ಮೇ 20 : ಕೊಪ್ಪಳದಲ್ಲಿ ಚುನಾವಣೆ ಸ್ಪರ್ಧಿಸಿ, ನಾನು ಸೋತಿದ್ದೆ. ಆದರೆ ಗೆಲ್ಲಲೇ ಬೇಕೆಂಬ ಹಠವಿದೆ ಎಂದು ಶನಿವಾರ ಬೆಳಗ್ಗೆಯಷ್ಟೇ ಹೇಳಿದ್ದ ಸಿಎಂ ಸಿದ್ದರಾಮಯ್ಯ, ಇದ್ದಕ್ಕಿದ್ದ ಹಾಗೆ 'ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತೇನೆ. ಎಲ್ಲರೂ ತಯಾರಾಗಿರಿ' ಎಂದು ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಹೇಳಿಕೆ ನೀಡಿದ್ದರಿಂದ ಎಲ್ಲರಿಗೂ ಗೊಂದಲವಾಗಿದೆ.
6 ತಿಂಗಳ ನಂತರ ಮೈಸೂರಿನ ಅತಿಥಿ ಗೃಹದಲ್ಲಿ, ಸಿಎಂ ಆದ ಮೇಲೆ ಎರಡನೇ ಬಾರಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿ, ಅವರು ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ವ್ಯಕ್ತಿಯೊಬ್ಬರು ತನ್ನ ಸಮಸ್ಯೆಯನ್ನು ಸಿಎಂ ಮುಂದೆ ಇಡುತ್ತಿದ್ದಂತೆ ಹೋಗಪ್ಪಾ, ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತೇನೆ ಎಂದರು.[ಕೊಪ್ಪಳದಿಂದ ಸ್ಪರ್ಧಿಸುತ್ತಾರಾ ಮುಖ್ಯಮಂತ್ರಿ ಸಿದ್ದರಾಮಯ್ಯ?]
ಇನ್ನೂ ಮುಂದುವರಿದು, ಎಲ್ಲರೂ ತಯಾರಾಗಿ ಎಂದು ಕ್ಷೇತ್ರ ಬದಲಾವಣೆಯ ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ನೀಡಿದರು. ಅಲ್ಲದೆ, ವರುಣಾ ಕ್ಷೇತ್ರದಿಂದ ತಮ್ಮ ಪುತ್ರ ಡಾ.ಯತೀಂದ್ರ ಅಖಾಡಕ್ಕಿಳಿಯುವ ಮುನ್ಸೂಚನೆಯನ್ನೂ ನೀಡಿದರು.[ಮೈಸೂರಿನ ಅಧಿಕಾರಿಗಳಿಗೆ ಗುಟುರು ಹಾಕಿದ ಸಿದ್ದರಾಮಯ್ಯ]
ಬೆಳಗ್ಗೆಯಷ್ಟೇ ಕೊಪ್ಪಳದಿಂದ ಸ್ಪರ್ಧಿಸುವೆ ಎಂದಿದ್ದ ಸಿದ್ದರಾಮಯ್ಯ ಅವರೇ ಮುಂದಿನ ವಿಧಾನಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಗೊಂದಲದಲ್ಲಿ ಇದ್ದಾರಾ? ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಅಖಾಡಕ್ಕಿಳಿಯುತ್ತಾರಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.