'ಮುಂಜಿ ಶಾಸ್ತ್ರ'ದಲ್ಲಿ ವೈದ್ಯರ ನಿರ್ಲಕ್ಷ್ಯ: ಸಿಎಂಗೆ ಪೋಷಕರ ಪತ್ರ
ಮೈಸೂರು, ಮೇ 14: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಎರಡು ವರ್ಷದ ಮಗು ಮುಂಜಿ ಶಾಸ್ತ್ರ ಮಾಡುವ ಸಂದರ್ಭ ಅಸ್ವಸ್ಥಗೊಂಡಿದ್ದು, ತಕ್ಷಣ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಮಗುವಿನ ತಂದೆ ಆಸ್ಪತ್ರೆ ವೈದ್ಯರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಮೈಸೂರು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಸೀದ್ ಅಹಮ್ಮದ್ ಖಾನ್ ಎಂಬುವರು ತನ್ನ 2 ವರ್ಷದ ಮಗುವಿಗೆ ಮುಂಜಿ ಮಾಡಿಸಲು ಅಲ್ ಅನ್ಸಾರ್ ಎಂಬ ಆಸ್ಪತ್ರೆಗೆ ದಾಖಲಿಸಿದ್ದರು. ಮುಂಜಿ ಮಾಡುವ ಸಂದರ್ಭ ಅನೇಸ್ತೇಶಿಯಾದ ಅಗತ್ಯ ಇಲ್ಲ ಎಂದು ಪೋಷಕರಿಗೆ ವೈದ್ಯರು ತಿಳಿಸಿದ್ದರಾದರೂ ಬಳಿಕ ಎರಡು ಬಾರಿ ಅನೇಸ್ತೇಶಿಯಾ ನೀಡಿದ್ದರು ಎನ್ನಲಾಗಿದೆ.
ಇದರಿಂದ ಮಗುವಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಭಯಗೊಂಡ ವೈದ್ಯರು ತಕ್ಷಣ ಐಸಿಯುಗೆ ದಾಖಲಿಸಿ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಈ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ ಸತಾಯಿಸಿದ್ದಾರೆ.
ಇದರಿಂದ ಆತಂಕಗೊಂಡ ವಸೀದ್ ಅಹಮ್ಮದ್ ಖಾನ್ ಹಾಗೂ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ನೋಡಿದಾಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗು ಕಂಡಿದ್ದು, ಕೂಡಲೇ ಮಗುವನ್ನು ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆ ಕೊಲಂಬಿಯಾ ಏಷಿಯಾಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಸಂಬಂಧ ಮಗುವಿನ ತಂದೆ ವಸೀಮ್ ಅಹಮದ್ ಖಾನ್ ಅವರು ಅಲ್ ಅನ್ಸಾರ್ ಆಸ್ಪತ್ರೆ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೂ ವೈದ್ಯರ ವಿರುದ್ದ ಕ್ರಮಕ್ಕೆ ಪತ್ರ ಬರೆದಿದ್ದಾರೆ.