ಮೈಸೂರಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಕಾಲೂ ಹೋಯ್ತು, ಪ್ರಾಣವೂ ಹೋಯ್ತು!
ಮೈಸೂರು, ಜುಲೈ 6 : ಟ್ರ್ಯಾಕ್ಟರ್ ಗುದ್ದಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಸಿದ್ದರಾಮನಹುಂಡಿಯ ಸಿದ್ದೇಗೌಡ ಹಾಗೂ ನಾಗಮ್ಮ ದಂಪತಿಯ ಪುತ್ರ ಶಿವಕುಮಾರ್ (11) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಾಲಕ.
ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು
ಜೂನ್ 30 ರಂದು ಶುಕ್ರವಾರ ಸಿದ್ದರಾಮನಹುಂಡಿ ಬಳಿ ಅಪಘಾತಕ್ಕೆ ಒಳಗಾಗಿದ್ದ ಶಿವಕುಮಾರ್ ನನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಒಂದು ಕಾಲು ತೆಗೆಯಬೇಕೆಂದು ಪೋಷಕರಿಗೆ ತಿಳಿಸಿದ್ದರು. ನಂತರ ಇನ್ನೊಂದು ಕಾಲನ್ನು ತೆಗೆಯಬೇಕು ಇಲ್ಲವಾದರೆ ನಿಮ್ಮ ಮಗ ಬದುಕುಳಿಯುವುದು ಕಷ್ಟ ಎಂದಿದ್ದಾರೆ. ಮಗ ಬದುಕುಳಿದರೆ ಸಾಕು ಎಂದು ಪೋಷಕರು ಕಾಲು ತೆಗೆಯಲು ಸಮ್ಮತಿಸಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿನ್ನೆ(ಜು.5)ಸಾವನ್ನಪ್ಪಿದ್ದಾನೆ. ಇದರಿಂದ ಆಸ್ಪತ್ರೆಯ ಮುಂದೆ ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಯವರು 5 ಲಕ್ಷ ರೂ. ಬಿಲ್ ಪಾವತಿಸಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದು, ಪೋಷಕರು ನಮ್ಮ ಮಗನನ್ನು ಬದುಕಿಸಿಕೊಡಿ, ನಾವು ಹಣ ಕಟ್ಟುತ್ತೇವೆ ಎನ್ನುತ್ತಿರುವ ಮನಕಲಕುವ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿದೆ.